ಭೂ ಹಗರಣದ ಸುಳಿಯಲ್ಲಿ ಸಚಿವ ಮಹದೇವ ಪ್ರಸಾದ್

ಅಕ್ರಮ ನಿವೇಶನ ಖರೀದಿ ಆರೋಪದ ಮೇಲೆ ಸಹಕಾರ ಸಚಿವ ಮಹದೇವ ಪ್ರಸಾದ್ ವಿರುದ್ಧ ಚಾಮರಾಜನಗರ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿ ಎರಡು ತಿಂಗಳಿನಲ್ಲಿ ಪ್ರಕರಣ ಇತ್ಯರ್ಥಗೊಳಿಸುವಂತೆ ಹೈಕೋರ್ಟ್ ಲೋಕಾಯುಕ್ತ ನ್ಯಾಯಾಲಯಕ್ಕೆ ಆದೇಶಿಸಿದೆ.
ಮಹದೇವ ಪ್ರಸಾದ್ ಅವರ ವಿರುದ್ಧ ದೂರು ದಾಖಲಾಗಿದ್ದರೂ, ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಹಿರೇಬೇಗೂರು ನಂದೀಶ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬುಧವಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ಅವರ ಪೀಠ, ಎರಡು ತಿಂಗಳಿನಲ್ಲಿ ತನಿಖೆ ಮುಗಿಸುವಂತೆ ಸೂಚಿಸಿದೆ.
ಆರೋಪವೇನು : ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಾಗಿಟ್ಟಿದ್ದ ನಿವೇಶವನ್ನು ಮಹದೇವ ಪ್ರಸಾದ್ ಅಕ್ರಮವಾಗಿ ಖರೀದಿಸಿದ್ದಾರೆ ಎಂಬುದು ಆರೋಪ. ಈ ಕುರಿತು ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಅದರ ತನಿಖೆ ವಿಳಂಬವಾಗುತ್ತಿದೆ ಎಂದು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ನಿಯಮದಂತೆ ಗೃಹ ಮಂಡಳಿ ನಿವೇಶನ ಖರೀದಿ ಮಾಡಬೇಕಾದರೆ ಅರ್ಜಿದಾರರು ಬೇರೆಲ್ಲೂ ನಿವೇಶನ ಹೊಂದಿರಬಾರದು. ಆದರೆ, ಮಹದೇವ ಪ್ರಸಾದ್ ಮೈಸೂರು, ಗುಡ್ಲುಪೇಟೆ, ಹಾಲಹಳ್ಳಿ ಪ್ರದೇಶಗಳಲ್ಲಿ ನಿವೇಶನ ಹೊಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
1998ರಲ್ಲಿ ಗೃಹ ಮಂಡಳಿ ನಿವೇಶನ ಪಡೆಯುವಾಗ ಸಚಿವರ ಸುಳ್ಳು ದಾಖಲೆ ಪತ್ರಗಳನ್ನು ನೀಡಿದ್ದಾರೆ. ಅವರಿಗೆ 2002 ರಲ್ಲಿ ಚಾಮರಾಜನಗರದಲ್ಲಿ 30*40 ವಿಸ್ತೀರ್ಣದ ನಿವೇಶ ಮಂಜೂರಾಗಿದೆ, ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications