ಈ 'ವಿಶೇಷ ಅತಿಥಿ'ಗಳ ಮೇಲೆ ಕಣ್ಣು ಇಡುವವರು ಯಾರು?
ಬೆಂಗಳೂರು, ಆಗಸ್ಟ್ 05 : ಬೆಂಗಳೂರಿನ ಜನಸಂಖ್ಯೆ ಎಷ್ಟು? ಮೂಲ ನಿವಾಸಿಗಳೆಷ್ಟು? ವಾಸಿಸಲಿಕ್ಕೆಂದು ಇಲ್ಲಿಗೆ ಬಂದಿರುವವರು ಎಷ್ಟು? ಕೆಲಸ ಹುಡುಕಿಕೊಂಡು ಜೀವನ ಸಾಗಿಸಲು ಬೇರೆಬೇರೆ ರಾಜ್ಯಗಳಿಂದ ಬೆಂಗಳೂರೆಂಬ 'ಆಶ್ರಯತಾಣ'ಕ್ಕೆ ಬರುವವರು ಎಷ್ಟು? ಇಲ್ಲಿ ಬಂದು ಅವರೇನು ಮಾಡುತ್ತಾರೆ?
ಈ ಪ್ರಶ್ನೆಗಳು ಉದ್ಭವವಾಗಿದ್ದು, ಬುಧವಾರ ಬೆಳಿಗ್ಗೆ ಪಶ್ಚಿಮ ಬಂಗಾಳದಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಸುಮಾರು 7.30ಕ್ಕೆ ಬಂದ ಹೌರಾ-ಯಶವಂತಪುರ ಎಕ್ಸ್ ಪ್ರೆಸ್ ಬಂದು ನಿಂತಾಗ. ಸದ್ದು ಮಾಡದೆ ಕದ್ದು ಬಂದ ನಂಟನಂತೆ ನಿಧಾನಕ್ಕೆ ಸ್ಟೇಷನ್ನಿಗೆ ಬಂದ ರೈಲಿನ ತುಂಬ ಅಪರಿಚಿತ ಮುಖಗಳು. ಒಬ್ಬರಲ್ಲೂ ತಮ್ಮ ಊರಿಗೆ ಬಂದೆನೆಂಬ ಉತ್ಸಾಹವಿರಲಿಲ್ಲ.
ರೈಲಿನಲ್ಲಿ ಪಯಣಿಸುವಾಗ ಅಲ್ಲಲ್ಲಿ ನೆಂಟರಿಷ್ಟರು ಸಿಕ್ಕು ಹಲೋ ಹಾಯ್ ಎನ್ನುವವರನ್ನು ಹೊರತುಪಡಿಸಿ ಉಳಿದವರೆಲ್ಲ ಅಪರಿಚಿತರೇ ಆದರೂ, ಈ ಹೌರಾ ಎಕ್ಸ್ ಪ್ರೆಸ್ ರೈಲಿನಲ್ಲಿ ತುಂಬಿದ್ದ ಜನರ ಮುಖಗಳು ಬೇರೇನೋ ಕಥೆ ಹೇಳುತ್ತಿರುವಂತಿದ್ದವು. ಮೂರ್ನಾಲ್ಕು ಎಸಿ ಬೋಗಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ (ಸಾಮಾನ್ಯ) ಬೋಗಿಗಳು ಬೆಂಗಳೂರೆಂಬ ತಿಳಿಯದ ಜಗತ್ತಿಗೆ ಬಂದ ಜನರಿಂದ ತುಳುಕುತ್ತಿದ್ದವು.
ಸುಮಾರು 1958 ಕಿ.ಮೀ. ಕ್ರಮಿಸಲು ಅಂದಾಜು 34 ಗಂಟೆಗಳನ್ನು ತೆಗೆದುಕೊಳ್ಳುವ ಹೌರಾ-ಯಶವಂತಪುರ ರೈಲು ಹದಿನೈದು ನಿಮಿಷಗಳಷ್ಟು ತಡವಾಗಿ ಬಂದಿತ್ತು. ಎಲ್ಲರನ್ನೂ ಮುಕ್ತ ಹಸ್ತದಿಂದ ತನ್ನ ಮಡಿಲಲ್ಲಿ ಸೇರಿಸಿಕೊಳ್ಳುವ ಬೆಂಗಳೂರಿಗೆ, ಉಸಿರಾಡಿಸಲು ಕಷ್ಟವಾಗುವಂತಹ ರೈಲಿನ ವಾತಾವರಣದಲ್ಲಿ ಎರಡು ಸಾವಿರದಷ್ಟು ದೂರ ಕ್ರಮಿಸಿ ಬಂದಿರುವ 'ಅತಿಥಿ'ಗಳಿಗೆ ಸ್ವಾಗತ.
2001ರಲ್ಲಿ 40 ಲಕ್ಷದಷ್ಟಿದ್ದ ಬೆಂಗಳೂರಿನ ಜನಸಂಖ್ಯೆ, 2011ರ ಹೊತ್ತಿಗೆ 84 ಲಕ್ಷ ತಲುಪಿತ್ತು. ಇನ್ನು ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಬೆಂಗಳೂರು ತನ್ನ ಮಡಿಲಲ್ಲಿ ಇನ್ನೂ ಮೂವತ್ತು ಲಕ್ಷ ಜನರನ್ನು ಸೇರಿಸಿಕೊಂಡಿದೆ. ಈ ಕಾರಣದಿಂದಾಗಿಯೇ ಬೆಂಗಳೂರು ದೇಶದ ಮೂರನೇ ಅತೀ ಜನನಿಬಿಡ ಪ್ರದೇಶವೆಂಬ ಕುಖ್ಯಾತಿಗೆ ಕಾರಣವಾಗಿದೆ.
ಬುಧವಾರ ಬೆಂಗಳೂರಿಗೆ ಬಂದಿರುವವರು ಪಶ್ಚಿಮ ಬಂಗಾಳದವರಾ ಅಥವಾ ಬಾಂಗ್ಲಾ ದೇಶೀಯರಾ? ಅವರು ಎಲ್ಲಿ ವಾಸಿಸುತ್ತಾರೆ, ಎಲ್ಲೆಲ್ಲಿ ಚಾಕರಿ ಮಾಡುತ್ತಾರೆ, ಭವಿಷ್ಯತ್ತಿನಲ್ಲಿ ಎಲ್ಲಿಗೆ ಸಾಗುತ್ತಾರೆ, ಅವರ ಬಳಿ ಗುರುತಿನ ಚೀಟಿ ಇದೆಯಾ ಪತ್ತೆ ಹಚ್ಚುವವರು ಯಾರು? ಈ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಸರಕಾರದ ಬಳಿಯಲ್ಲಿ ಯಾವುದಾದರೂ ವ್ಯವಸ್ಥೆ ಇದೆಯಾ?
ಕೆಲವೇ ದಿನಗಳ ಹಿಂದೆ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚು, ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾ ದೇಶೀಯರಿಗೆ ಭಾರತದ ಪೌರತ್ವ ಪ್ರದಾನ ಮಾಡಲಾಗಿದೆ. ಅವರಲ್ಲೊಂದಿಷ್ಟು ಮಂದಿ ಬೆಂಗಳೂರಿಗೆ ಬಂದಿರಬಹುದೆ? ನಮ್ಮ ಆಡಳಿತ ಯಂತ್ರವೇ ಎಲ್ಲೋ ಹಳಿ ತಪ್ಪುತ್ತಿದೆ ಎಂದು ಈ ಅಪರಿಚಿತ ಮುಖಗಳನ್ನು ನೋಡಿದಾಗ ಅನ್ನಿಸದೆ ಇರದು.
ಈಗಾಗಲೆ ಬೆಂಗಳೂರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಸ ವಿಲೇವಾರಿ, ವಾಯು ಮಾಲಿನ್ಯ, ನೀರಿನ ಬವಣೆ ಕಾಣುತ್ತಿರುವ ಬಡಾವಣೆಗಳು, ರಸ್ತೆ ದಟ್ಟಣೆ, ಸರಕಾರಿ ಕಚೇರಿಗಳನ್ನು ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ, ಕಣ್ಮರೆಯಾಗುತ್ತಿರುವ ಮರಗಳು, ತಲೆಯೆತ್ತುತ್ತಿರುವ ಫ್ಲೈಓವರುಗಳು, ವಿಷಗಾಳಿ ತೂರುತ್ತಿರುವ ಚರಂಡಿಗಳು, ಪಲ್ಸರ್ ಬೈಕುಗಳು ಚೈನ್ ಸ್ನಾಚಿಂಗುಗಳು...
ಇದೆಲ್ಲದರ ನಡುವೆ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಆಗಮಿಸಿರುವ 'ವಿಶೇಷ ಅತಿಥಿ'ಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣು ಇಡುವವರು ಯಾರು? ಬೆಂಗಳೂರಿನಲ್ಲಿರುವ ಹೋಟೆಲುಗಳಲ್ಲಿ ಕೆಲಸ ಮಾಡುತ್ತಿರುವ ಸಾಫ್ ಕರ್ಮಚಾರಿಗಳಿಗೆ ಕನ್ನಡ ಕಲಿಸುವ ಅಗತ್ಯವಿಲ್ಲ. ಏಕೆಂದರೆ, ನಮ್ಮ ಕನ್ನಡಿಗರೇ ಅವರ ಭಾಷೆಯಲ್ಲಿ ಮಾತನಾಡುತ್ತಾರೆ!