Bengaluru Rains : ಬೆಂಗಳೂರಿನಲ್ಲಿ ವರುಣಾರ್ಭಟ: ಧರೆಗುರುಳಿದ ಮರಗಳು, ಜನಜೀವನ ಅಸ್ತವ್ಯಸ್ತ
ಬೆಂಗಳೂರು, ಮೇ 02: ಉದ್ಯಾನ ನಗರಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿತ್ತು. ಭಾನುವಾರ ಸಾಯಂಕಾಲದಿಂದ ತಡರಾತ್ರಿವರೆಗೂ ಸುರಿದ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.
ಧಾರಾಕಾರ ಮಳೆಯಿಂದ ನಗರದ ಹಲವೆಡೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಆಲಿಕಲ್ಲು, ಗುಡುಗು, ಮಿಂಚು ಸಮೇತ ವರ್ಷಧಾರೆ ಸುರಿದಿದ್ದು, ಭಾರೀ ಗಾತ್ರದ ಮರಗಳೂ ಧರೆಗುರುಳಿವೆ. ಸೋಮವಾರ ಬೆಳಗ್ಗೆ ಅವುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಬೆಂಗಳೂರು ಮಹಾನಗರ ನಗರಪಾಲಿಕೆ (ಬಿಬಿಎಂಪಿ) ಮುಂದಾಗಿದೆ.
ವಾರಾಂತ್ಯ ಭಾನುವಾರದಂದು ಬೆಂಗಳೂರು ನಿವಾಸಿಗಳು ಭಾರೀ ಮಳೆ ಮತ್ತು ಬೇಸಿಗೆಯ ಸೆಖೆ ಎರಡನ್ನು ಕೂಡಾ ಅನುಭವಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸೆಖೆ ಇದ್ದರೆ, ಸಂಜೆಯಿಂದ ಮಳೆ ಆರ್ಭಟ ಜೋರಾಯಿತು. ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟ ತಾತ್ಕಾಲಿಕ ಸ್ಥಗಿತವಾಯಿತು.

ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಕೋರಮಂಗಲ, ಶಾಖಾಂಬರಿ ನಗರ, ದೊರೆಸಾನಿ ಪಾಳ್ಯ, ಅರಕೆರೆ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಬಿಳೇಕಹಳ್ಳಿ, ಸಾರಕ್ಕಿ, ಬೇಗೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ.
ಬಿಳೇಕಹಳ್ಳಿ, ಅರಕೆರೆಯಲ್ಲಿ 20 ಮಿ.ಮೀ ಮಳೆ ಸುರಿದಿದೆ. ಆನೇಕಲ್ ತಾಲೂಕಿನಾಧ್ಯಂಥ ಬಾರಿ ಆಲಿಕಲ್ಲು ಮಳೆಯಾಗಿದ್ದು, ನಾಮಫಲಕಗಳು ಧರೆಗುಳಿದಿದೆ. ರಸ್ತೆ ಬದಿ ಮತ್ತು ಕಟ್ಟಡಗಳ ಮೇಲಿನ ನಾಮಫಲಕಗಳು ಧರೆಗೆ ಉರುಳಿದ್ದು, ಗಾಳಿಗೆ ಮನೆ ಮೇಲಿದ್ದ ಹೋಲ್ಡಿಂಗ್ ಬಾಗಿದ್ದರಿಂದ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.
ಬೆಂಗಳೂರು ನಗರದ ವಿವಿಧೆಡೆ 69 ಮರಗಳು 34 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆ.ಜಿ. ರಸ್ತೆಯಲ್ಲಿ ಬಿದ್ದಿದ್ದ ಬೃಹತ್ ಮರದಿಂದ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಪ್ರಶಾಂತ್ ನಗರ, ಶೋಭಾ ಆಸ್ಪತ್ರೆ ಬಳಿ, ಶ್ರೀರಾಂಪುರ, ಕೆ.ಜಿ.ರಸ್ತೆ ಗಾಂಧಿನಗರ, ಲಿಂಕ್ ರೋಡ್, ಮಲ್ಲೇಶ್ವರ, ಸುಬ್ರಮಣ್ಯನಗರ ಹಾಗೂ ರಾಜಾಜಿನಗರದಲ್ಲಿ ತಲಾ ಒಂದೊಂದು ಮರಗಳು ನೆಲಕ್ಕುರುಳಿವೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು.
ಉತ್ತರಹಳ್ಳಿ, ಕೆ.ಪಿ. ಅಗ್ರಹಾರ, ಫಿಶ್ ಮಾರ್ಕೆಟ್ ಬಳಿ ಮನೆಗೆ ನೀರು ನುಗ್ಗಿದ್ದ ದೃಶ್ಯಗಳು ಕಂಡುಬಂದವು. ಅಲ್ಲದೆ, ಸಂಗೊಳ್ಳಿ ರಾಯಣ್ಣ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿತ್ತು. ಪೈಪ್ಲೈನ್ ರಸ್ತೆ ಮಲ್ಲೇಶ್ವರಂ ಬಳಿ ಮನೆಗೆ ನುಗ್ಗಿದ ನೀರು ಸಂಪೂರ್ಣ ತೆರವುಗೊಳಿಸುವಲ್ಲಿ ತಡರಾತ್ರಿ ಕಳೆದಿತ್ತು.
ಬಿಎಂಟಿಸಿ ಬಸ್ ಮೇಲೆ ಮರ ಬಿದಿದ್ದು, ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ. ಸ್ಥಳಕ್ಕೆ ಉಪ್ಪಾರಪೇಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಮರವನ್ನು ತೆರವು ಮಾಡುತ್ತಿದ್ದಾರೆ.

ಮಳೆ ಎಫೆಕ್ಟ್ಗೆ ಉತ್ತರಹಳ್ಳಿ ಜನತೆ ಹೈರಾಣಾಗಿದ್ದು, 1 ಗಂಟೆ ಸುರಿದ ಮಳೆ ಪರಿಣಾಮದಿಂದ ಮನೆಗಳಿಗೆ ನೀರು ನುಗ್ಗಿದೆ. ಉತ್ತರಹಳ್ಳಿಯ ಲಕ್ಷ್ಮಯ್ಯ ಲೇಔಟ್ನ 100ಕ್ಕೂ ಹೆಚ್ಚು ಮನೆ- ಅಂಗಡಿಗಳಿಗೆ ನೀರು ನುಗ್ಗಿದ್ದು, ಇಡೀ ಪ್ರದೇಶವೇ ಜಲಾವೃತವಾಗಿದೆ. ಕಳೆದ 15 ದಿನ ಹಿಂದೆಯೂ ಜಲಾವೃತವಾಗಿದ್ದ ಸಂಪೂರ್ಣ ಏರಿಯಾ, ರಾಜಕಾಲುವೆ ತುಂಬಿ ಜನವಸತಿ ಪ್ರದೇಶಕ್ಕೆ ಹರಿದಿರುವ ಮಳೆ ನೀರಿನಿಂದ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಿ.ಮೀ ಮಳೆಯಾಗಿದೆ..?
ಬೆಂಗಳೂರು- 20 ರಿಂದ 79 ಮಿ.ಮೀ, ವಿದ್ಯಾಪೀಠ-79 ಮಿ.ಮೀ, ಸಂಪಂಗಿರಾಮನಗರ-68 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ- 67.5 ಮಿ.ಮೀ, ಬಿಳೇಕಹಳ್ಳಿ-63 ಮಿ.ಮೀ, ಅರಕೆರೆ- 61 ಮಿ.ಮೀ, ದೊರೆಸಾನಿ ಪಾಳ್ಯ-51 ಮಿ.ಮೀ, ವಿವಿ ಪುರಂ- 51 ಮಿ.ಮೀ, ದಯಾನಂದ ನಗರ- 49.5 ಮಿ.ಮೀ, ಪುಲಕೇಶಿನಗರ-47 ಮಿ.ಮೀ, ನಾಯಂಡಹಳ್ಳಿ- 46.5 ಮಿ.ಮೀ, ಹೆಮ್ಮಿಗೆಪುರ- 42.5 ಮಿ.ಮೀ, ಕುಮಾರಸ್ವಾಮಿ ಲೇಔಟ್- 40 ಮಿ.ಮೀ, ಉತ್ತರಹಳ್ಳಿ- 32 ಮಿ.ಮೀನಷ್ಟು ಮಳೆಯಾಗಿದೆ.












Click it and Unblock the Notifications