2006ರ ಅಧ್ಯಾಯ ಮರುಕಳಿಸಲಿದೆ: ಹೆಚ್ಡಿ ಕುಮಾರಸ್ವಾಮಿ ಹೀಗಂದಿದ್ಯಾಕೆ?
ಕೇವಲ ಮೂರೇ ತಿಂಗಳ ಆಡಳಿತಾವಧಿಯಲ್ಲಿ ದುರಾಡಳಿತದ ಪರಾಕಾಷ್ಠೆ ಮುಟ್ಟಿರುವ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯದ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿದೆ. ವಿಪಕ್ಷಗಳು ಒಟ್ಟಾಗಿ ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, "ಕಾಂಗ್ರೆಸ್ ನವರು ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆದ್ದೇಬಿಟ್ಟೆವು ಎಂದು ಅಹಂಕಾರದಿಂದ ಮೆರೆಯುತ್ತಿದ್ದಾರೆ. ಅದಕ್ಕೆ ಈ ಹೊಸ ರಾಜಕೀಯ ಅಧ್ಯಾಯ ಚೆಕ್ ಮೇಟ್ ಇಡುತ್ತದೆ. ಈ ಅಹಂಕಾರಕ್ಕೆ ಇತಿಶ್ರೀ ಹಾಡುತ್ತೇವೆ" ಎಂದರು.

2006ರಲ್ಲಿ ದೇವೇಗೌಡರ ವಿರುದ್ಧವಾಗಿ ಬಿಜೆಪಿ ಜತೆ ಸರಕಾರ ಮಾಡಿದ್ದೆ. ಇವತ್ತು ಅವರ ಒಪ್ಪಿಗೆ ಪಡೆದು ಮೈತ್ರಿ ಮಾಡಿಕೊಳ್ಳುತ್ತಿದ್ದೇನೆ. 2006ರಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೇ ಇರಲು ಕಾಂಗ್ರೆಸ್ ಹೂಡಿದ ಷಡ್ಯಂತ್ರವೇ ಕಾರಣ. ಆವತ್ತು ಶಾಸಕರನ್ನು ಬಸ್ಸಿನಲ್ಲಿ ಕೂರಿಸಿಕೊಂಡು ಚಾಲನೆ ಮಾಡಿಕೊಂಡು ಹೋದವರು ಈಗ ಮುಸ್ಲಿಮರ ರಕ್ಷಣೆ ಮಾಡುವವನು ನಾನೇ ಅಂತ ಹೇಳುತ್ತಿದ್ದಾರೆ. ಮುಸ್ಲಿಮರ ರಕ್ಷಣೆ ಜವಾಬ್ದಾರಿ ಕೊನೆಗೆ ಇಬ್ರಾಹಿಂ ಅವರ ಹೆಗಲಿಗೇ ಬರುತ್ತದೆ ಎಂದರು.
2006ರ ಅಧ್ಯಾಯ ಪುನರಾವರ್ತನೆ
2006ರ ಅಧ್ಯಾಯ ಮತ್ತೆ ಪುನರಾವರ್ತನೆ ಮಾಡಲು ನಿರ್ಧಾರ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲವನ್ನೂ ತೀರ್ಮಾನ ಮಾಡುತ್ತೇನೆ. ನಿಮ್ಮ ರಕ್ಷಣೆ, ನಾಡಿನ ರಕ್ಷಣೆ ಉದ್ದೇಶದಿಂದ ಹೊಸ ಅಧ್ಯಾಯ ಶುರು ಮಾಡುತ್ತಿದ್ದೇನೆ. ಏಳಿ ಎದ್ದೇಳಿ ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ ಮುನ್ನಡೆಯೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ಸಿನವರ ಅಹಂಕಾರವನ್ನು ಮಟ್ಟ ಹಾಕಲಿಕ್ಕಾಗಿಯೇ ಈ ನಿರ್ಧಾರ ಮಾಡಿದ್ದೇವೆ. ಅದರ ಹೊರತಾಗಿ ಯಾರನ್ನೂ ಮೂಲೆಗುಂಪು ಮಾಡುವ ಉದ್ದೇಶ ನಮ್ಮದಲ್ಲ. 'ಸಿ.ಎಂ.ಇಬ್ರಾಹಿಂ ಅವರೇ ಯಾವತ್ತೂ ಪಕ್ಷ ನಿಮ್ಮ ಕೈ ಬಿಡುವುದಿಲ್ಲ. ನೀವು ಅಧಿಕಾರ ಬಿಟ್ಟು ಬಂದಿದ್ದೀರಾ. ನಿಮಗೆ ನಾವು ಕೈ ಬಿಡುವುದಿಲ್ಲ' ಎಂದು ಹೇಳಿದರು.
ಜೆಡಿಎಸ್-ಬಿಜೆಪಿ ಜನತಾ ಪರಿವಾರದ ಕೊಂಡಿಗಳು
ಇವತ್ತಿನ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜನತಾ ಪರಿವಾರದ ಕೊಂಡಿಗಳೇ. ಎರಡೂ ಪಕ್ಷಗಳು ಲೋಕನಾಯಕ ಜಯಪ್ರಕಾಶ ನಾರಾಯಣರ ಹೋರಾಟದ ಫಲವಾಗಿ ಹುಟ್ಟಿದವು. ತುರ್ತು ಪರಿಸ್ಥಿತಿ ವಿರುದ್ಧ ಒಟ್ಟಾಗಿ ಹೋರಾಡಿವೆ. ಎಮರ್ಜೆನ್ಸಿ ವಿರುದ್ದವೇ ಜನತಾ ಪರಿವಾರ ಹುಟ್ಟಿತು. ಆದರೆ, ಜನತಾ ಪರಿವಾರದ ಅನೇಕರು ಇಂದು ಎಲ್ಲಾ ಕಡೆ ಸುತ್ತಾಡಿ ಅಧಿಕಾರದ ಸವಿ ಉಂಡು ಈಗ ಕಾಂಗ್ರೆಸ್ ಜತೆ ಕೂತಿದ್ದಾರೆ. ಅಂಥವರಿಗೆ ಯಾವ ನೈತಿಕತೆ ಇದೆ? ನಿಮಗೆ ಯಾವ ನೈತಿಕತೆ ಇದೆ ಇವರಿಗೆ ದೇವೇಗೌಡರ ಬಗ್ಗೆ ಮಾತಾಡೋಕೆ ಎಂದು ಪ್ರಶ್ನೆ ಮಾಡಿದರು.












Click it and Unblock the Notifications