ನಮ್ಮ ಮೆಟ್ರೋ ನೌಕರರ ಮುಷ್ಕರಕ್ಕೆ ಮತ್ತೆ ಬ್ರೇಕ್
ಬೆಂಗಳೂರು, ಜೂನ್ 04: ಮೆಟ್ರೋ ನೌಕರರ ಬೇಡಿಕೆಗಳನ್ನು ಪರಿಗಣಿಸುವಂತೆ ಹೈಕೋರ್ಟ್ ಬಿಎಂಆರ್ಸಿಎಲ್ ಗೆ ನಿರ್ದೇಶನ ನೀಡಿದೆ. ಜತೆಗೆ ಸಮಸ್ಯೆಗಳ ಸಾಧಕ ಬಾಧಕಗಳನ್ನು ಪರಿಗಣಿಸಿ ಬಗೆಹರಿಸಿಕೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಜನಸಾಮಾನ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ, ನಿಮ್ಮ ಆರ್ಥಿಕ ಪರಿಸ್ಥಿತಿ ನೋಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎದು ಸಲಹೆ ನೀಡಿದೆ. ನಮ್ಮ ಮೆಟ್ರೊ ನೌಕರರ ಬೇಡಿಕೆಗೆ ಈಡೇರಿಕೆ ಸಂಬಂಧ ಬಿಎಂಆರ್ಸಿಎಲ್ ಆಡಳಿತ ಮಂಡಳಿ ಹಾಗೂ ನೌಕರರ ಸಂಘದ ನಡುವೆ ನಡೆಯುತ್ತಿರುವ ಸಂಧಾನ ಸಭೆಯಲ್ಲಿ ಮಧ್ಯಪ್ರವೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಮುಷ್ಕರ: ನಮ್ಮ ಮೆಟ್ರೋ ಓಡಿಸ್ತಾರೆ ಕೊಚ್ಚಿ ಮೆಟ್ರೋ ಸಿಬ್ಬಂದಿ?
ಮೆಟ್ರೋ ನೌಕರರ ಸಂಘ ಕರೆ ನೀಡಿದ್ದ ಮುಷ್ಕರ ತಡೆ ಹಿಡಿಯುವಂತೆ ಕೋರಿ ಮೆಟ್ರೋ ರೈಲು ನಿಗಮ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠ, ಮುಂದಿನ ಹತ್ತು ದಿನಗಳಲ್ಲಿ ರಾಜ್ಯ ಸರ್ಕಾರ, ಬಿಎಂಆರ್ ಸಿಎಲ್ ಹಾಗೂ ಮೆಟ್ರೊ ನೌಕರರ ಸಂಘ ತ್ರಿಪಕ್ಷೀಯ ಮಾತುಕತೆ ನಡೆಸುವಂತೆ ತಿಳಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ನೌಕರರು ಹಾಗೂ ಸಂಘದ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಬೇಕೆಂದು ಸೂಚಿಸಿರುವ ಪೀಠ, ನೌಕರರ ಆರ್ಥಿಕ ಮತ್ತು ಆರ್ಥಿಕೇತರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪಟ್ಟಿ ಮಾಡಿಕೊಳ್ಳಿ. ಈ ಬಗ್ಗೆ ಹಣಕಾಸು ತಜ್ಞರ ಜೊತೆ ಚರ್ಚಿಸಿ. ಯಾವ ರೀತಿ ಸಮಸ್ಯೆ ಬಗೆಹರಿಸಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಿ ಕೋರ್ಟ್ಗೆ ತಿಳಿಸಿ. ಆ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸೋಣವೆಂದು ತಿಳಿಸಿದ ಪೀಠ, ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿತು.
ಇದೇ ವೇಳೆ, ಮುಂದಿನ ವಿಚಾರಣೆ ವರೆಗೆ ಮುಷ್ಕರಕ್ಕೆ ಮುಂದಾಗದಂತೆ ನೌಕರರ ಸಂಘಕ್ಕೆ ಸೂಚಿಸಿದ ಪೀಠ, ನೌಕರರ ವಿರುದ್ಧವೂ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಬಿಎಂಆರ್ಸಿಎಲ್ ಗೆ ಸೂಚಿಸಿತು.