Gruha Jyoti scheme; ಬೆಸ್ಕಾಂನಿಂದ ಮನೆ-ಮನೆ ಸಮೀಕ್ಷೆ
ಬೆಂಗಳೂರು, ಜುಲೈ 24; ಕರ್ನಾಟಕದ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದು 'ಗೃಹಜ್ಯೋತಿ' ಯೋಜನೆ. ಜನರು ಈಗಾಗಲೇ ಯೋಜನೆಗೆ ಫಲಾನುಭವಿಯಾಗಲು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಯೋಜನೆಯ ಫಲಾನುಭವಿಗಳ ಸಂಖ್ಯೆಗೂ ಅರ್ಜಿ ಸಲ್ಲಿಕೆ ಮಾಡಿರುವವರ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ. ಸರ್ಕಾರ ಈಗಾಗಲೇ ಯೋಜನೆ ಫಲಾನುಭವಿಯಾಗಲು ಜುಲೈ 27ರೊಳಗೆ ನೋಂದಣಿ ಮಾಡಲು ಗಡುವು ಕೊಟ್ಟಿದೆ.
ಇಂಧನ ಸಚಿವ ಕೆ. ಜೆ. ಜಾರ್ಜ್ ಈ ಹಿಂದೆ ನೀಡಿದ್ದ ಮಾಹಿತಿಯಂತೆ ರಾಜ್ಯದಲ್ಲಿ 'ಗೃಹಜ್ಯೋತಿ' ಯೋಜನೆಯ ಫಲಾನುಭವಿಗಳ ಸಂಖ್ಯೆ ಸುಮಾರು 2.14 ಕೋಟಿ. ಆದರೆ ಇದುವರೆಗೂ ಅರ್ಜಿ ಸಲ್ಲಿಕೆ ಮಾಡಿರುವ ಫಲಾನುಭವಿಗಳ ಸಂಖ್ಯೆ 1 ಕೋಟಿ ದಾಟಿಲ್ಲ. ಆದ್ದರಿಂದ ಫಲಾನುಭವಿಗಳು ಏಕೆ ಅರ್ಜಿ ಸಲ್ಲಿಕೆ ಮಾಡಿಲ್ಲ? ಎಂದು ವಿವರ ಸಂಗ್ರಹ ಮಾಡಲಾಗುತ್ತಿದೆ.

ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಆದರೆ ಇದುವರೆಗೂ ಸುಮಾರು 1 ಕೋಟಿ ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಿಲ್ಲ. ಆದ್ದರಿಂದ ಫಲಾನುಭವಿಗಳಾಗಿದ್ದರೂ ಏಕೆ ಅರ್ಜಿ ಸಲ್ಲಿಸಿಲ್ಲ? ಎಂಬುದನ್ನು ಪತ್ತೆ ಹಚ್ಚಲು ಬೆಸ್ಕಾಂ ಅಭಿಯಾನ ಆರಂಭಿಸಲಿದೆ.
ಸ್ಥಳದಲ್ಲೇ ನೋಂದಣಿ; ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮನೆ-ಮನೆಗೆ ಭೇಟಿ ನೀಡಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದೆ. ಒಂದು ವೇಳೆ ಅರ್ಜಿ ಸಲ್ಲಿಸದಿದ್ದರೆ ಸಲ್ಲಿಸುವಂತೆ ಮನವಿ ಮಾಡಲಿದೆ, ಅಲ್ಲದೇ ಸಿಬ್ಬಂದಿ ಸ್ಥಳದಲ್ಲಿಯೇ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭಗೊಂಡಾಗ ಪ್ರತಿದಿನ 6 ರಿಂದ 8 ಲಕ್ಷ ಜನರು ಅರ್ಜಿ ಸಲ್ಲಿಸುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ಇದು 1.5 ರಿಂದ 2 ಲಕ್ಷಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ನಿರೀಕ್ಷಿತ ಪ್ರಮಾಣದಲ್ಲಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿಲ್ಲ. ಆದ್ದರಿಂದ ಕಡಿಮೆ ನೋಂದಣಿ ಇರುವ ಕಡೆ ಮನೆ-ಮನೆಗೆ ತೆರಳಿ ನೋಂದಣಿ ಮಾಡುವ ಬಗ್ಗೆ ಚಿಂತನೆ ನಡೆದಿದೆ.
ಎಸ್ಕಾಂಗಳು ಯಾವ ಯಾವ ಪ್ರದೇಶದಲ್ಲಿ ಕಡಿಮೆ ನೋಂದಣಿಯಾಗಿದೆ?, ಏಕೆ ಎಂಬುದನ್ನು ಮೊದಲು ಪತ್ತೆ ಹಚ್ಚಲಿವೆ. ಬಳಿಕ ಕಡಿಮೆ ನೋಂದಣಿ ಇರುವ ಪ್ರದೇಶದ ಮನೆ ಮನೆಗೆ ತೆರಳಿ ಅರ್ಜಿ ಸಲ್ಲಿಸುವಂತೆ ಅರಿವು ಮೂಡಿಸುವುದು, ಅಲ್ಲಿಯೇ ಸೇವಾ ಕೇಂದ್ರ ತೆರೆದು ನೋಂದಣಿ ಪ್ರಕ್ರಿಯೆ ಮಾಡಲು ಸಿದ್ಧತೆ ನಡೆದಿದೆ.
ಅರ್ಜಿ ಸಲ್ಲಿಕೆಗೆ ಗಡುವು; ಜುಲೈ 27ರೊಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಎಂದು ಸರ್ಕಾರ ಸರ್ಕಾರ ಗಡುವು ನೀಡಿದೆ. ಈ ಗಡುವಿನೊಳಗೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಜನರು ಯಾವುದೇ ಆತಂಕ ಪಡಬೇಕಿಲ್ಲ. ಯೋಜನೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಯೋಜನೆಯೊಳಕ್ಕೆ ತರಲು ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕದ ನಂತರ ಎರಡು ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸಲಾಗುವುದು ಎಂದು ಇಂಧನ ಇಲಾಖೆ ಹೇಳಿದೆ.
ಜನರು ಯೋಜನೆ ಫಲಾನುಭವಿಯಾಗಲು ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ಗೆ ಭೇಟಿ ನೀಡಿ (https://sevasindhugs.karnataka.gov.in/) ವಿವರಗಳನ್ನು ನೀಡಿ ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ನಿಮ್ಮ ಹತ್ತಿರದ ವಿದ್ಯುತ್ ಕಚೇರಿ, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿಯಾದವರು ಆಗಸ್ಟ್ನಲ್ಲಿ ಶೂನ್ಯ ಬಳಕೆಯ ವಿದ್ಯುತ್ ಬಿಲ್ ಪಡೆಯಲಿದ್ದಾರೆ. ರಾಜ್ಯದ ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್ಗಳ ತನಕ ಉಚಿತ ವಿದ್ಯುತ್ ನೀಡುವ ಮಹತ್ವದ ಯೋಜನೆ 'ಗೃಹಜ್ಯೋತಿ'ಯಾಗಿದೆ.












Click it and Unblock the Notifications