'ಗೃಹ ಜ್ಯೋತಿ' ಯೋಜನೆ: 'ಗ್ರಹಣಜ್ಯೋತಿ' ಪ್ಲೇ ಕಾರ್ಡ್ ಬಿಡುಗಡೆ: ಎಎಪಿ
ಬೆಂಗಳೂರು, ಅಕ್ಟೋಬರ್ 11: ಕರ್ನಾಟಕ ರಾಜ್ಯ ಸರ್ಕಾರವು ಮನೆ ಬಳಕೆಗೆ ಉಚಿತ ವಿದ್ಯುತ್ ನೀಡುವ 'ಗೃಹಜ್ಯೋತಿ' ಯೋಜನೆ ಹಳ್ಳ ಹಿಡಿದಿದೆ. 'ಗೃಹಜ್ಯೋತಿ ಈಗ ಗ್ರಹಣ ಜ್ಯೋತಿ' ಆಗಿದೆ. ಎಲ್ಲೆಡೆ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ .ನಾಗಣ್ಣ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರಿನ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಬುಧವಾರ 'ಗ್ರಹಣಜ್ಯೋತಿ ಎನ್ನುವ ಪ್ಲೇ ಕಾರ್ಡ್' ಬಿಡುಗಡೆ ಮಾಡಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ಉಚಿತ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಗೃಹಜ್ಯೋತಿ ಯೋಜನೆಗಾಗಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ರೈತರ ಪಂಪ್ಸೆಟ್ಗಳಿಗೆ ಈ ಮೊದಲು 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು, ಈಗ 2 ಗಂಟೆಗಳ ಕಾಲ ಕೂಡ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಅವರು ದೂರಿದರು.

ದೆಹಲಿಯಲ್ಲಿ ನಾವು ಭರವಸೆ ನೀಡಿದಂತೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ. ದೆಹಲಿಯಲ್ಲಿ ವಿದ್ಯುತ್ ಪೂರೈಕೆದಾರರು ಒಂದು ಗಂಟೆ ವಿದ್ಯುತ್ ಕಡಿತ ಮಾಡಿದರೆ ಒಂದು ಗಂಟೆಗೆ 50 ರೂಪಾಯಿ ದಂಡ ಪಾವತಿಸಬೇಕಾಗಿದೆ.2 ಗಂಟೆಗಿಂತ ಹೆಚ್ಚು ಸಮಯ ವಿದ್ಯುತ್ ಕಡಿತ ಮಾಡಿದರೆ ಗಂಟೆಗೆ 100 ರೂ.ನಂತೆ ದಂಡ ಕಟ್ಟಬೇಕಿದೆ. ಅಂತಹ ಕಾನೂನು ರೂಪಿಸಲಾಗಿದೆ. ಅಂತಹ ಕಾನೂನು ಇಲ್ಲಿ ತರಲಿ ಎಂದು ಅವರು ಆಗ್ರಹಿಸಿದರು.
ಆರ್ಥಿಕ ಇಲಾಖೆಗೆ ಸಾಲ ಪಡೆಯಲು ಸೂಚನೆ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಸೇರಿದಂತೆ ರಾಜ್ಯದ ಎಲ್ಲಾ ಐದು ವಿದ್ಯುತ್ ಶಕ್ತಿ ಪೂರೈಕೆ ಕಂಪನಿಗಳು ಈಗಾಗಲೇ 63,000 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿವೆ ಈ ಸಮಯದಲ್ಲಿ ಮುಖ್ಯಮಂತ್ರಿಗಳು 85,000 ಕೋಟಿ ಸಾಲವನ್ನು ಪಡೆಯಲು ಈಗಾಗಲೇ ಆರ್ಥಿಕ ಇಲಾಖೆಗೆ ಸೂಚಿಸಿರುವುದನ್ನು ಗಮನಿಸಿದಾಗ ರಾಜ್ಯವು ಸಂಪೂರ್ಣ ದಿವಾಳಿಯತ್ತ ಸಾಗುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯದ ರೈತರಿಗೆ ಪ್ರತಿ ವರ್ಷ ವಿದ್ಯುತ್ ಶಕ್ತಿ ಸಬ್ಸಿಡಿ ರೂಪದಲ್ಲಿ 6000 ಕೋಟಿ ರೂಪಾಯಿಗಳಷ್ಟು ನೀಡುತ್ತಿರುವ ಸರ್ಕಾರ ಎಲ್ಲ ರೈತರಿಗೂ ಸೋಲಾರ್ ಪಂಪನ್ನು ವಿತರಿಸದೇ ಅನವಶ್ಯಕವಾಗಿ ಸಾವಿರಾರು ಕೋಟಿ ಸಬ್ಸಿಡಿ ಹಣವನ್ನು ಪೋಲು ಮಾಡುತ್ತಿರುವುದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದರು.
'ಕುಸುಮ್' ಯೋಜನೆ ಸಮರ್ಪಕ ಬಳಕೆ ಆಗಿಲ್ಲ
ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್ ಅವರು ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆ ಆಗಿದ್ದರಿಂದ ರೈತರು ಪಂಪ್ಸೆಟ್ಗಾಗಿ ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರದ ಕುಸುಮ್ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.

ರಾಜ್ಯಕ್ಕೆ ಕೇಂದ್ರದಿಂದ 10314 ಸೋಲಾರ್ ಪಂಪ್ಗಳನ್ನು ನೀಡಲಾಗಿದೆ ಆದರೆ ಕೇವಲ 314 ಸೋಲಾರ್ ಪಂಪ್ಗಳನ್ನು ಮಾತ್ರ ರಾಜ್ಯದ ರೈತರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ವಿದ್ಯುತ್ ಪೂರೈಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ. ಸರಿಯಾದ ಮಾಹಿತಿ ಇಲ್ಲದೆ ರೈತರು ಸೋಲಾರ್ ಪಂಪ್ ಅಳವಡಿಕೆ ಮಾಡಿಕೊಳ್ಳುತ್ತಿಲ್ಲ, ಎಸ್ಕಾಂ ಸಿಬ್ಬಂದಿ ಈ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಬೇರೆ ರಾಜ್ಯದಿಂದ ಪ್ರತಿ ಯುನಿಟ್ಗೆ 5.56 ರೂಪಾಯಿ ನೀಡಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ.
ಸರ್ಕಾರ 'ಶ್ವೇತ ಪತ್ರ' ಹೊರಡಿಸಲಿ
ಕರ್ನಾಟಕಕ್ಕೆ ಅಗತ್ಯವಿರುವ 1.52 ಲಕ್ಷ ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಅನ್ನು ನಾವೇ ಉತ್ಪಾದನೆ ಮಾಡಬಹುದು ಎಂದು ಸರ್ಕಾರ ತನ್ನ ಗೆಜೆಟ್ನಲ್ಲೇ ಹೇಳಿದೆ, ಆದರೆ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವುದು 8 ಸಾವಿರ ಮೆಗಾ ವ್ಯಾಟ್ ಮಾತ್ರ, ವಿದ್ಯುತ್ ಖರೀದಿಯಲ್ಲಿ ಕೂಡ ಭ್ರಷ್ಟಾಚಾರ ಇದೆ, ಸರ್ಕಾರ ನಡೆಸುವರಿಗೆ ಇದರಲ್ಲಿ ಲಾಭ ಇದೆ ಎಂದು ಅವರು ಆಪಾದಿಸಿದರು.
ಕಾಂಗ್ರೆಸ್ ಸರ್ಕಾರ ಮುಂದಿನ 4.5 ವರ್ಷ ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.












Click it and Unblock the Notifications