ಬೆಂಗ್ಳೂರು ಬಿ ಖಾತೆ ಮಾಲೀಕರಿಗೆ ಸಿಹಿ ಸುದ್ದಿ ಇದೆ, ಆದರೆ ಎಚ್ಚರ ಇರಲಿ
ಬೆಂಗಳೂರು, ಸೆಪ್ಟೆಂಬರ್ 1: "ನಾವು ಬಿಬಿಎಂಪಿಯಿಂದ ಬಂದಿದ್ದೀವಿ. ನಿಮ್ಮದು 'ಬಿ' ಖಾತೆ ಆಗಿದ್ದರೆ ಅದಕ್ಕೆ 'ಇಂತಿಷ್ಟು' ಸಾವಿರ ಅಂತ ನಮ್ಮ ಹತ್ತಿರ ಕಟ್ಟಿ. ಅದಕ್ಕೆ ರಸೀದಿ ಏನೂ ಸಿಗಲ್ಲ. ಆದರೆ 'ಎ' ಖಾತಾ ಮಾಡಿಕೊಡ್ತೀವಿ ಅಂತ ಯಾರಾದರೂ ಸಾರ್ವಜನಿಕರು ಬಂದರೆ ಎಚ್ಚರವಾಗಿರಬೇಕು" ಎನ್ನುತ್ತಾರೆ ಕೆಂಗೇರಿ ಕಾರ್ಪೊರೇಟರ್ ಸತ್ಯನಾರಾಯಣ.
ಬಿಬಿಎಂಪಿಯಿಂದ 'ಬಿ' ಖಾತೆಗಳನ್ನು 'ಎ' ಖಾತೆಗಳನ್ನಾಗಿ ಮಾಡುವ ಚಿಂತನೆಯನ್ನು ಈಗಷ್ಟೇ ರಾಜ್ಯ ಸರಕಾರ ನಡೆಸಿದೆ. ಆದರೆ ಅದನ್ನೇ ಕೆಲವರು ಬಂಡವಾಳ ಮಾಡಿಕೊಂಡು, ನಿವೇಶನ- ಮನೆಗಳ ಮಾಲೀಕರಿಂದ ಹಣ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಸತ್ಯನಾರಾಯಣ ಅವರನ್ನು ಒನ್ ಇಂಡಿಯಾ ಕನ್ನಡ ಮಾತನಾಡಿಸಿತು.
ಇನ್ಮುಂದೆ ಆಸ್ತಿ ಪತ್ರ ಫೋರ್ಜರಿ ಮಾಡಿದ್ರೆ ಸಿಕ್ಕಿ ಬೀಳ್ತೀರ ಹುಷಾರ್!
ಬೆಂಗಳೂರು ವ್ಯಾಪ್ತಿಯಲ್ಲಿ ಹೀಗೆ ಮಾಡಬೇಕು ಎಂಬ ಬಗ್ಗೆ ರಾಜ್ಯ ಸರಕಾರ ಈಗಿನ್ನೂ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಯೋಜನೆ ರೂಪಿಸುತ್ತಿದೆ. ಹಾಗೊಂದು ವೇಳೆ ಅದು ಸಾಧ್ಯವಾದರೆ ಬಿ ಖಾತೆ ಹೊಂದಿರುವ ಮಾಲೀಕರು ಅಭಿವೃದ್ಧಿ ಶುಲ್ಕ ಹಾಗೂ ಪರಿವರ್ತನಾ ಶುಲ್ಕ ಪಾವತಿಸಿ ಎ ಖಾತೆ ಪಡೆಯಬಹುದು ಎಂದು ಅವರು ಹೇಳಿದರು.
ಬಿ ಖಾತೆಗೆ ಬಹುತೇಕ ಬ್ಯಾಂಕ್ ಸಾಲ ಸಿಗಲ್ಲ
ಬಿ ಖಾತೆ ಹೊಂದಿರುವ ಆಸ್ತಿಗಳಿಗೆ ಬಹುತೇಕ ಬ್ಯಾಂಕ್ ನಿಂದ ಸಾಲ ಸೌಲಭ್ಯ ದೊರೆಯುವುದಿಲ್ಲ. ಅಪರೂಪದಲ್ಲಿ ಕೆಲವು ಖಾಸಗಿ ಹಾಗೂ ಸಹಕಾರಿ ಬ್ಯಾಂಕ್ ಗಳು ಸಾಲ ನೀಡಿದರೂ ದುಬಾರಿ ಬಡ್ಡಿ ವಿಧಿಸುತ್ತವೆ. ಇನ್ನು ಈ ರೀತಿ ಎ ಖಾತೆ ಹೊಂದಿರುವ ಆಸ್ತಿಗಳ ಮೌಲ್ಯದಲ್ಲೇ ದೊಡ್ಡ ಬದಲಾವಣೆ ಆಗುವುದರಿಂದ ಮಾಲೀಕರು ಇದಕ್ಕಾಗಿ ಪಡಿಪಾಟಲು ಪಡುತ್ತಾರೆ.
ಕಟ್ಟಡ ನಿರ್ಮಾಣಕ್ಕೆ ಅನುಮತಿ ದೊರೆಯಲ್ಲ
ಎ ಖಾತೆ ಇರುವ ನಿವೇಶನಕ್ಕೆ ಸಾಲ ಸೌಲಭ್ಯ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಮತ್ತು ಸ್ವಾಧೀನ ಪತ್ರ ಸೇರಿದಂತೆ ಯಾವುದೇ ಸಮಸ್ಯೆ-ಸವಾಲುಗಳು ಎದುರಾಗುವುದಿಲ್ಲ. ಇದರಿಂದ ಕಾನೂನುಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ಬಡಾವಣೆಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗೆ ಬಿ ಖಾತೆಯಿಂದ ಎ ಖಾತೆಯಾಗಿ ಬದಲಾಯಿಸಲು ಸರಕಾರ ಒಂದಿಷ್ಟು ಶುಲ್ಕ ವಸೂಲು ಮಾಡುತ್ತದೆ. ಆ ಮೊತ್ತವೇ ಒಂದು ಸಾವಿರ ಕೋಟಿವರೆಗೆ ಆಗುತ್ತದೆ.
ಮೂಲಸೌಕರ್ಯ ಅಭಿವೃದ್ಧಿಗೆ ಬಳಕೆ
ಹೀಗೆ ಸಂಗ್ರಹ ಆಗುವ ಮೊತ್ತದಿಂದ ರಸ್ತೆ, ಒಳಚರಂಡಿ ಸೇರಿದಂತೆ ಇತರ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ. ಬಿ ಖಾತೆಯೂ ಇಲ್ಲದೆ, ನಿಯಮ ಬಾಹಿರವಾಗಿ ಕಟ್ಟಿದ ಕಟ್ಟಡಗಳ ಮಾಲೀಕರಿಂದ ಕೇವಲ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಎ ಖಾತೆ ಮಾಡಿಕೊಡುವುದಿಲ್ಲ. ಅಂಥ ಕಟ್ಟಡಗಳ ಮಾಲೀಕರು ಅಕ್ರಮ-ಸಕ್ರಮ ಯೋಜನೆ ಬರುವ ತನಕ ಕಾಯಬೇಕಾಗುತ್ತದೆ.
ಬೆಂಗಳೂರಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಅಕ್ರಮ ಆಸ್ತಿ
ಒಂದು ಅಂದಾಜಿನ ಪ್ರಕಾರ ಬೆಂಗಳೂರು ನಗರದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಅಕ್ರಮ ಆಸ್ತಿಗಳಿವೆ. ಆ ಪೈಕಿ ಒಂದು ಲಕ್ಷ ಆಸ್ತಿಗಳಿಗೆ ಬಿ ಖಾತೆ ಇವೆ. ಕೆಲ ವರ್ಷಗಳ ಹಿಂದೆ ನೂರಾಹತ್ತು ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲಾಗಿದ್ದು, ಅವುಗಳ ಕಂದಾಯ ಮತ್ತಿತರ ವಿಚಾರಕ್ಕೆ ಸಂಬಂಧಿಸಿದಂತೆ ಸರಿಯಾದ ತೀರ್ಮಾನ ಕೈಗೊಳ್ಳಬೇಕಿದೆ.