ಸರಕಾರ, ಬಿಡಿಎ ಸೇರಿಕೊಂಡು ಬೆಂಗ್ಳೂರನ್ನು ಹಾಳು ಮಾಡ್ತಿವೆ: ಸುಪ್ರೀಂ
ಬೆಂಗಳೂರಿನಲ್ಲಿನ ಗೊಂದಲಕ್ಕೆ ಕರ್ನಾಟಕ ಸರಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಜವಾಬ್ದಾರಿ. ಡಾ.ಕೆ.ಶಿವರಾಂ ಕಾರಂತ ಬಡಾವಣೆಗೆ ಸ್ವಾಧೀನ ಪಡಿಸಿಕೊಳ್ಳಬೇಕು ಅಂತಿದ್ದ 650 ಎಕರೆ ಜಾಗವನ್ನು ಕೈ ಬಿಡಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
2008ರಲ್ಲಿ ಈ ಬಡಾವಣೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿ, ಆ ನಂತರ ರಾಜಕೀಯ ಪ್ರಭಾವಿಗಳು ಅಥವಾ ಬೇರೆ ಯಾವುದೋ ಪ್ರಭಾವಕ್ಕೆ ದೊಡ್ಡ ಮಟ್ಟದ ಭೂ ಸ್ವಾಧೀನವನ್ನು ಕೈ ಬಿಡಲಾಗಿದೆ ಎಂಬ ಆರೋಪಕ್ಕೆ ಸುಪ್ರೀಂ ಕೋರ್ಟ್ ಪ್ರಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ.
ನ್ಯಾ. ಅರುಣ್ ಮಿಶ್ರಾ, ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾ. ಕೆ.ಎನ್.ಕೇಶವನಾರಾಯಣ ಅವರನ್ನು ನೇಮಿಸಿ, ಬಿಡಿಎ ಅಥವಾ ಸರಕಾರಿ ಅಧಿಕಾರಿಗಳಲ್ಲಿ ಯಾರು ಜವಾಬ್ದಾರರು ಎಂದು ನಿರ್ಧರಿಸುವುದಕ್ಕೆ ವಿಚಾರಣೆ ನಡೆಸಲು ತಿಳಿಸಿತ್ತು.

ಭೂಸ್ವಾಧೀನ ಮುಂದುವರಿಸಬೇಕು ಹಾಗೂ ಮೂರು ತಿಂಗಳ ಒಳಗಾಗಿ ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸರಕಾರ ಮತ್ತು ಬಿಡಿಎಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಯೋಜನಾಬದ್ಧ ಹಾಗೂ ಸರಿಯಾದ ನಗರಕ್ಕೆ ಭೂ ಸ್ವಾಧೀನವು ಬಹಳ ಅಗತ್ಯ ಎಂದು ಸುಪ್ರೀಂ ತಿಳಿಸಿದೆ.
ಡಿಸೆಂಬರ್ 30,2008ರಲ್ಲಿ ಈ ಯೋಜನೆಗೆ ಚಾಲನೆ ದೊರೆತಿತ್ತು. 45% ಭೂಮಿ ರಸ್ತೆ, ಮೈದಾನದಂಥ ನಾಗರಿಕ ಸೌಲಭ್ಯಗಳಿಗಾಗಿ ಹಾಗೂ 55% ಸ್ಥಳ ವಸತಿ ನಿವೇಶನಗಳಿಗೆ ಎಂದು ತೀರ್ಮಾನಿಸಲಾಗಿತ್ತು. ಒಂದೋ ವಸತಿ ನಿವೇಶನ ಅಥವಾ ಪರಿಹಾರ ಎರಡರಲ್ಲಿ ಒಂದನ್ನು ರೈತರಿಗೆ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಪರಿಹಾರವಾಗಿ ನೀಡಲು ನಿರ್ಧರಿಸಲಾಗಿತ್ತು.
ಆದರೆ, ಆ ನಂತರ ಭೂ ಸ್ವಾಧೀನದಿಂದ ದೊಡ್ಡ ಪ್ರಮಾಣದ ಭೂಮಿಯನ್ನು ಕೈಬಿಡಲು ನಿರ್ಧರಿಸಲಾಯಿತು. ವಿಶೇಷ ಭೂಸ್ವಾಧೀನಾಧಿಕಾರಿಯೇ 498 ಎಕರೆ ಭೂಮಿಯನ್ನು ಕೈ ಬಿಡಲು ತೀರ್ಮಾನಿಸಿದ್ದು ವಿಧಾನಸಭೆಯಲ್ಲಿ ಹಾಗೂ ಸಾರ್ವಜನಿಕರಲ್ಲಿ ಹುಬ್ಬೇರುವಂತೆ ಮಾಡಿತ್ತು ಎಂದು ಪೀಠವು ಹೇಳಿದೆ.












Click it and Unblock the Notifications