Bengaluru: ಹೆಣ್ಣೂರು-ಬಾಗಲೂರು ರಸ್ತೆ ವೈಟ್ ಟಾಪಿಂಗ್ ಕಾಮಗಾರಿಗೆ GBA ಡೆಡ್ಲೈನ್
ಬೆಂಗಳೂರು, ಸೆಪ್ಟಂಬರ್ 29: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೆಣ್ಣೂರು-ಬಾಗಲೂರು ಮುಖ್ಯರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದು ಸೇರಿದಂತೆ ಐಟಿಪಿಎಲ್ ರಸ್ತೆ ಹೈ ಡೆನ್ಸಿಟಿ ಕಾರಿಡಾರ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪೂರ್ವ ನಗರ ಪಾಲಿಕೆ ಆಯುಕ್ತ ಡಿ. ಎಸ್. ರಮೇಶ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಕಾಮಗಾರಿ ಪೂರ್ಣಕ್ಕೆ ಡೆಡ್ಲೈನ್ ನೀಡಿದ್ದಾರೆ.
ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿ ಗೆದ್ದಲಹಳ್ಳಿ ರೈಲ್ವೆ ಲೈನ್ನಿಂದ ಫರ್ಹಾನ್ ಕಾಲೇಜ್ವರೆಗೆ 5 ಕಿ.ಮೀ ಉದ್ದದ ರಸ್ತೆ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆಯ ಎರಡೂ ಬದಿಗಳನ್ನು ಒಳಗೊಂಡಂತೆ ಒಟ್ಟು 10 ಕಿ.ಮೀ ಉದ್ದದ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು.

ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾವುದೇ ಗುಂಡಿ ಅಥವಾ ಡೆಬ್ರಿಸ್ ಇರುವಂತಿಲ್ಲ. ಇದನ್ನು ಸುಸ್ಥಿತಿಯಲ್ಲಿ ಉಳಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದ್ದು, ಕಾಮಗಾರಿ ತಡವಾದರೆ ಅವರಿಗೆ ದಂಡ ವಿಧಿಸುವಂತೆ ಹೇಳಿದರು. ಇನ್ನೆರಡು ದಿನಗಳೊಳಗೆ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಮುಚ್ಚಬೇಕು. ಜೊತೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಲು ಕಾರ್ಯಪಾಲಕ ಅಭಿಯಂತರಿಗೆ ತಿಳಿಸಿದರು.
ಕಾಮಗಾರಿ ತಡವಾಗಲು ಕೆಪಿಟಿಸಿಎಲ್, ಬೆಸ್ಕಾಂ, ಜಲಮಂಡಳಿ, ಸಂಚಾರಿ ಪೊಲೀಸರು ಅಥವಾ ಇನ್ಯಾವುದೇ ಸಂಸ್ಥೆಗಳು ಕಾರಣವಾಗಿದ್ದರೆ, ತಕ್ಷಣ ಸಮನ್ವಯ ಸಾಧಿಸಿ ಕಾಮಗಾರಿ ವೇಗಗೊಳಿಸಬೇಕು. ಹೆಣ್ಣೂರು-ಬಾಗಲೂರು ರಸ್ತೆಯ 8 ಮೀ. ಅಗಲದ ಕ್ಯಾರೇಜ್- ವೇ ಸೇರಿದಂತೆ ಪಾದಚಾರಿ ಮಾರ್ಗ, ಡಕ್ಟ್ ಮಾರ್ಗ, ವಿದ್ಯುತ್ ಕಂಬಗಳು ಹಾಗೂ ಇತರ ಕಾಮಗಾರಿ ಪೂರ್ಣಗೊಳಿಸಿ ಅಕ್ಟೋಬರ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಹೇಳಿದರು.
ಹೈ ಡೆನ್ಸಿಟಿ ಕಾರಿಡಾರ್ ಕಾಮಗಾರಿ
ಸುರಂಜನ್ ದಾಸ್ ಕೆಳಸೇತುವೆಯಿಂದ ವರ್ತೂರು ಕೋಡಿವರೆಗಿನ 12 ಕಿ.ಮೀ ಉದ್ದದ ರಸ್ತೆಯ ಪೈಕಿ 8 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ 4 ಕಿ.ಮೀ ಕಾಮಗಾರಿ ತಡವಾಗಿರುವುದಕ್ಕೆ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಹೋಪ್ ಫಾರಂ ಬಳಿ ಜಲಮಂಡಳಿ ಕಾಮಗಾರಿಯಿಂದ ಹಾಗೂ ಸಿದ್ದಾಪುರ ಜಂಕ್ಷನ್ನಲ್ಲಿ ಲೋ-ಲೈನ್ ಇರುವುದರಿಂದ ಮಳೆ ಬಂದಾಗ ನೀರು ನಿಂತು ಹೋಗುತ್ತಿದೆ. ಇದನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
ರಸ್ತೆಗಳನ್ನು ಅಗೆಯದಂತೆ ಕ್ರಮ ಕೈಗೊಳ್ಳಿ
ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಕಡೆ ಮತ್ತೊಮ್ಮೆ ರಸ್ತೆ ಅಗೆಯದಂತೆ ನೋಡಿಕೊಳ್ಳಬೇಕು. ಯಾವುದೇ ಸಂಸ್ಥೆ ರಸ್ತೆ ಅಗೆಯುವ ಮುನ್ನ ನಗರ ಪಾಲಿಕೆಯಿಂದ ಅನುಮತಿ ಪಡೆದು, ರಸ್ತೆ ರಿಪೇರಿಗಾಗಿ ಠೇವಣಿ ಇಟ್ಟ ನಂತರವೇ ಅನುಮತಿ ನೀಡಬೇಕು. ಸಂಬಂಧಿಸಿದ ವಾರ್ಡ್ ಸಹಾಯಕ/ಕಿರಿಯ ಇಂಜಿನಿಯರ್ಗಳು ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳು ರಸ್ತೆ ಅಗೆಯದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿರುತ್ತದೆ. ಪ್ರಹರಿ ವಾಹನಗಳನ್ನು ಬಳಸಿಕೊಂಡು ಗಸ್ತು ತಿರುಗಿ ಯಾವುದೇ ರಸ್ತೆ ಹಾಳಾಗದಂತೆ, ಡೆಬ್ರಿಸ್ ಹಾಕದಂತೆ ಖಚಿತಪಡಿಸಿಕೊಳ್ಳಬೇಕು ಎಂದರು.
ತಿಂಗಳೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ
ಸುರಂಜನ್ ದಾಸ್ ಕೆಳಸೇತುವೆಯಿಂದ ವರ್ತೂರು ಕೋಡಿವರೆಗಿನ ಬಾಕಿ ಇರುವ ಡಾಂಬರೀಕರಣ, ಪಾದಚಾರಿ ಮಾರ್ಗ ನಿರ್ಮಾಣ, ಸೈಡ್ ಡ್ರೈನ್ ಹಾಗೂ ವಿದ್ಯುತ್ ಕಂಬಗಳ ಕಾಮಗಾರಿಯನ್ನು ಇನ್ನೂ 1 ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಹೋಪ್ ಫಾರಂನಿಂದ ಹಳೆ ಮದ್ರಾಸ್ ರಸ್ತೆಯ ಹೂಡಿ ವೈ-ಜಂಕ್ಷನ್ದಿಂದ ಪಟ್ಟಂದೂರಿನವರೆಗೆ 2 ಕಿ.ಮೀ ಉದ್ದದ ಹೈ ಡೆನ್ಸಿಟಿ ಕಾರಿಡಾರ್ ಕಾಮಗಾರಿಯನ್ನು ಕೆಪಿಟಿಸಿಎಲ್ನೊಂದಿಗೆ ಸಮನ್ವಯ ಸಾಧಿಸಿ ಇನ್ನೂ 15 ದಿನಗಳೊಳಗೆ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.












Click it and Unblock the Notifications