ಹೊಸ ಸರ್ಕಾರದ ಮುಂದೆ ಬೇಡಿಕೆ ಇಡಲು ಮುಂದಾದ ಗಾರ್ಮೆಂಟ್ಸ್ ನೌಕರರು
ಬೆಂಗಳೂರು, ಮೇ 28 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸ ಸರ್ಕಾರದ ಮುಂದೆ ತಮ್ಮ ಬೇಡಿಕೆ ಮುಂದಿಡಲು ಗಾರ್ಮೆಂಟ್ಸ್ ನೌಕರರು ಸಜ್ಜಾಗುತ್ತಿದ್ದಾರೆ.
ಕನಿಷ್ಠ ವೇತನ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂದು ಗಾರ್ಮೆಂಟ್ಸ್ ನೌಕರರು ಬೇಡಿಕೆ ಇಡಲಿದ್ದಾರೆ. ಬೇಡಿಕೆ ಈಡೇರುವ ತನಕ ಧರಣಿ ನಡೆಸಲು ಮುಂದಾಗಿದ್ದಾರೆ. ಬೆಂಗಳೂರು ನಗರದಲ್ಲಿಯೇ ಸುಮಾರು 4.5 ಲಕ್ಷ ನೌಕರರು ಇದ್ದಾರೆ, ಇವರಲ್ಲಿ ಮಹಿಳೆಯರೇ ಅಧಿಕ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. 2018ರ ಫೆಬ್ರವರಿಯಲ್ಲಿ ಕರಡು ಸಿದ್ಧವಾಗಿತ್ತು. ಆದರೆ, ಮಾರ್ಚ್ನಲ್ಲಿ ಇದನ್ನು ವಾಪಸ್ ಪಡೆಯಲಾಗಿತ್ತು. ಈಗ ಹೊಸ ಸರ್ಕಾರ ಬಂದ ಮೇಲೆ ನೌಕರರು ಮತ್ತೊಮ್ಮೆ ಕಾಯ್ದೆ ತಿದ್ದುಪಡಿಗೆ ಬೇಡಿಕೆ ಇಡಲಿದ್ದಾರೆ.

ತಿದ್ದುಪಡಿ ಕಾಯ್ದೆಯ ಕರಡು ಪ್ರತಿಯಲ್ಲಿ ಈಗಿರುವ ದಿನದ ವೇತವನ್ನು ಎರಡು ಪಟ್ಟು ಹೆಚ್ಚಿಸಲು ಪ್ರಸ್ತಾವನೆ ಸಿದ್ಧವಾಗಿತ್ತು. 220 ರಿಂದ 445 ರೂ.ಗಳಿಗೆ ದಿನದ ವೇತನ ಹೆಚ್ಚಳ ಮಾಡಲು ಕರಡು ಸಿದ್ಧವಾಗಿತ್ತು.
ಬೆಂಗಳೂರು ನಗರದಲ್ಲಿ ಗಾರ್ಮೆಂಟ್ಸ್ನಲ್ಲಿ ಪ್ರತಿದಿನ ಗರಿಷ್ಠ ವೇತನ 593 ರೂ. ಆಗಿದೆ. ಆದರೆ, ಕಾರ್ಮಿಕ ಇಲಾಖೆ ಸಿದ್ಧಪಡಿಸಿದ ಪ್ರಸ್ತಾವನೆಗೆ ಗಾರ್ಮೆಂಟ್ಸ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ವೇತನ ಜಾಸ್ತಿ ಇದೆ ಎಂದು ಅವರು ವಾದ ಮುಂದಿಟ್ಟಿದ್ದರು.
ಗಾರ್ಮೆಂಟ್ಸ್ ಮಾಲೀಕರ ವಿರೋಧದಿಂದಾಗಿ ಪ್ರಸ್ತಾವನೆಯನ್ನು ವಾಪಸ್ ಪಡೆಯಲಾಗಿತ್ತು. ಈಗ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದ್ದರಿಂದ ಪ್ರಸ್ತಾವನೆಗೆ ಒಪ್ಪಿಗೆ ನೀಡಬೇಕು ಎಂದು ಗಾರ್ಮೆಂಟ್ಸ್ ನೌಕರರು ಬೇಡಿಕೆ ಮುಂದಿಡಲು ಸಿದ್ಧರಾಗತ್ತಿದ್ದಾರೆ.












Click it and Unblock the Notifications