ಗಾರ್ಡನ್ ಸಿಟಿ ಪದವಿ ಪೂರ್ವ ಕಾಲೇಜು ಲೋಕಾರ್ಪಣೆ
ಬೆಂಗಳೂರು, ಮೇ 25 : 'ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಹಾಗೂ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ' ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂ ಗಾರ್ಡನ್ ಸಿಟಿ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಗಾರ್ಡನ್ ಸಿಟಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು. ' ವಿದ್ಯಾರ್ಥಿಗಳು ಪ್ರಾಮಾಣಿಕತೆ, ನಿಷ್ಠೆ ಮತ್ತು ಉತ್ಸಾಹ ಹೊಂದಿದ್ದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ' ಎಂದರು.

'ಅಧ್ಯಯನ ಒಂದು ನಿರಂತರ ಕಾರ್ಯ. ಅದು ಪ್ರತಿಯೊಬ್ಬ ಮನುಷ್ಯನ ಜೀವಿತಾವಧಿಯವರೆಗೂ ನಡೆಯುವಂಥದ್ದು. ಅದರಲ್ಲಿ ಯಶಸ್ಸು ಕಾಣಲು ನಿರಂತರ ಅಧ್ಯಯನ ಮಾಡುತ್ತಿರಬೇಕು. ವಿಜ್ಞಾನ ವಿದ್ಯಾರ್ಥಿಗಳು, ಪ್ರಸ್ತುತ ಪ್ರಗತಿಯಲ್ಲಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಒಲವು ತೋರಬೇಕು' ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಶಾಸಕ ಭೈರತಿ ಬಸವರಾಜು ಅವರು, 'ಕೆ.ಆರ್ ಪುರಂ ಭಾಗದಲ್ಲಿ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಾಗಿದ್ದಾರೆ. ಅವರು ಶಿಕ್ಷಣ ಸಿಗದೆ ವಂಚಿತರಾಗುತ್ತಿದ್ದಾರೆ. ಆದ್ದರಿಂದ, ಪದವಿ ಪೂರ್ವ ಕಾಲೇಜಿನ ಅವಶ್ಯ ಇತ್ತು. ಇದೇ ಭಾಗದಲ್ಲಿ ಸರ್ಕಾರಿ ಮಹಿಳಾ ಕಾಲೇಜು ತೆರೆಯಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ' ಎಂದು ತಿಳಿಸಿದರು. [ದ್ವಿತೀಯ ಪಿಯುಸಿ ಫಲಿತಾಂಶ ಇಲ್ಲಿ ಲಭ್ಯ]

'ಗಾರ್ಡನ್ ಸಿಟಿ ಸಂಸ್ಥೆಯು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. ಗುಣಮಟ್ಟದ ಶಿಕ್ಷಣ ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಹೀಗಾಗಿ ಇದು ಸಧೃಢವಾಗಿ ಬೆಳೆದು ನಿಂತಿದೆ' ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಓಬಯ್ಯ ಹೇಳಿದರು.
ಗಾರ್ಡನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ವಿ.ಜಿ.ಜೋಸೆಫ್ ಮಾತನಾಡಿ, 'ಪಿಯುಸಿ ಕಾಲೇಜು ತೆರೆಯಲು ಆರು ವರ್ಷಗಳ ಹಿಂದೆಯೇ ಅನುಮೋದನೆ ಸಿಕ್ಕಿತ್ತು. ಆದರೆ, ಕೆಲವು ಕಾರಣದಿಂದ ತೆರೆಯಲು ತಡವಾಯಿತು' ಎಂದರು.












Click it and Unblock the Notifications