ಆಷಾಢ ಕಳೆದು ಶ್ರಾವಣದಲ್ಲಿ ಟಾಪ್ಗೆ ಏರಿದ ಹಣ್ಣು, ಹೂ, ತರಕಾರಿ ಬೆಲೆ: ಗ್ರಾಹಕರಿಗೆ ಶಾಕ್
ಬೆಂಗಳೂರು, ಆಗಸ್ಟ್ 15: ಆಷಾಢ ಕಳೆದು ಶ್ರಾವಣ ಮಾಸ ಆರಂಭವಾಗಿದ್ದು, ಹಬ್ಬಗಳ ಸೀಜನ್ ಆರಂಭವಾಗಿದೆ. ನಾಳೆ ವರಮಹಾಲಕ್ಷ್ಮಿ ಹಬ್ಬದ ಆಚರಣೆ ನಡೆಯಲಿದ್ದು, ಬೆಂಗಳೂರು ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ವ್ಯಾಪಾರ ಜೋರಾಗಿದೆ. ಹೂವು, ಹಣ್ಣು ಹಾಗೂ ತರಕಾರಿಗಳ ಖರೀದಿ ಜೋರಾಗಿ ನಡೆಯುತ್ತಿದ್ದು, ಬೆಲೆ ಏರಿಕೆ ಕಂಡು ಗ್ರಾಹಕರು ಶಾಕ್ ಆಗಿದ್ದಾರೆ. ಹೂವು, ಹಣ್ಣು ಹಾಗೂ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ .
ಬೆಂಗಳೂರಿನ ಪ್ರಮುಖ ಮಾರುಕಟ್ಟೆ ಕೆ.ಆರ್ ಮಾರುಕಟ್ಟೆಯಲ್ಲಿ ಹಬ್ಬದ ವ್ಯಾಪಾರದ ಭರಾಟೆ ಜೋರಾಗಿದೆ. ಗಾಂಧಿ ಬಜಾರ್, ಜಯನಗರ 4ನೇ ಬ್ಲಾಕ್, ಮಲ್ಲೇಶ್ವರಂ ಸೇರಿದಂತೆ ವಿವಿಧ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ವ್ಯಾಪಾರ ಭರದಿಂದ ನಡೆಯುತ್ತಿದೆ. ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ಹಬ್ಬಕ್ಕೆ ಬೇಕಾದ ಪ್ರಮುಖ ವಸ್ತುಗಳ ಬೆಲೆ ಏರಿಕೆ ಕಂಡಿದೆ. ನಗರದಲ್ಲಿ ಇದೀಗ ಕನಕಾಂಬರ ಕೆ.ಜಿಗೆ 4,000 ರೂಪಾಯಿ ಹಾಗೂ ಮಲ್ಲಿಗೆ ಹೂವು ಕೆ.ಜಿಗೆ 1600 ರೂಪಾಯಷ್ಟು ಏರಿಕೆ ಆಗಿದೆ ಎಂದು ತಿಳಿದು ಬಂದಿದೆ.

ಕನಕಾಂಬರ ಮಾರಿಗೆ 500, ಗುಲಾಬಿ ಹೂ ಮಾರಿಗೆ 160 ರೂ, ಮಲ್ಲಿಗೆ ಮಾರಿಗೆ 160 ರೂ, ಸೇವಂತಿಗೆ ಬೆಲೆ ಮಾರಿಗೆ 150 ರೂ, ಚೆಂಡೂ ಹೂ ಮಾರಿಗೆ 150 ರೂ, ಪರ್ಪಲ್ ಸೇವಂತಿಗೆ ಮಾರಿಗೆ 500 ರೂ, ಗಣಿಜಲು ಹೂವಿನ ಬೆಲೆ ಮಾರಿಗೆ 250 ರೂ, ತಾವರೆ ಹೂ ಜೋಡಿಗೆ 100 ರೂಪಾಯಿಯಾಗಿದೆ.
ಹಣ್ಣುಗಳ ದರ ಕೂಡ ಏರಿಕೆಯಾಗಿದ್ದು, ದ್ರಾಕ್ಷಿ 350 ರೂ, ಸೇಬು 300 ರೂ, ಬಟರ್ ಫ್ರುಟ್ 300 ರೂ, ಸಪೋಟ( ಚಿಕ್ಕು ಹಣ್ಣು) 250 ರೂ, ಡ್ರಾಗಾನ್ ಫ್ರುಟ್ 250 ರೂ, ಕಿತ್ತಳೆ 220 ರೂ, ಮೂಸಂಬಿ 160 ರೂ, ದಾಳಿಂಬೆ- 160 ರೂ, ಬಾಳೆಹಣ್ಣು 140 ರೂಪಾಯಿಯಾಗಿದೆ ಎಂದು ವರದಿಯಾಗಿದೆ. ಇನ್ನು ತರಕಾರಿ ಬೆಲೆ ಕೂಡ ಏರಿಕೆಯಾಗಿದ್ದು, ನುಗ್ಗೆಕಾಯಿ ಕೆಜಿಗೆ 160 ರೂ, ಮೆಣಸಿನಕಾಯಿ ಕೆಜಿಗೆ 120 ರೂ, ಶುಂಠಿ 200 ರೂ, ಬೆಳ್ಳುಳ್ಳಿ 350 ರೂ, ನಾಟಿ ಬೀನ್ಸ್ 400 ರೂ, ಕೊತ್ತಂಬರಿ ಸೊಪ್ಪು ಕಟ್ಟಿಗೆ 40 ರೂ, ಹೀರೇಕಾಯಿ 40 ರೂ, ಆಲೂಗಡ್ಡೆ 40 ರೂ, ಈರುಳ್ಳಿ 50 ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications