ನನ್ನ ಶಕ್ತಿ, ಪ್ರೇರಣೆ, ದಾರಿದೀಪ: ಎಚ್ಡಿ ದೇವೇಗೌಡರಿಗೆ ಶುಭ ಕೋರಿದ ಎಚ್ಡಿ ಕುಮಾರಸ್ವಾಮಿ
ಬೆಂಗಳೂರು, ಮೇ. 18: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಗುರುವಾರ ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಮಣ್ಣಿನ ಮಗ ಎಂದೇ ಖ್ಯಾತರಾಗಿರುವ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಕರ್ನಾಟಕದಿಂದ ದೇಶದ ಪ್ರಧಾನಿಯಾದ ಏಕೈಕ ರಾಜಕಾರಣಿ. ಅವರ ಹುಟ್ಟು ಹಬ್ಬಕ್ಕೆ ಗಣ್ಯರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ, ದೇವೇಗೌಡ ಅವರ ಪ್ರೀಯ ಮಗನಾದ ಎಚ್ ಡಿ ಕುಮಾರಸ್ವಾಮಿ ತಮ್ಮ ತಂದೆಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ನನ್ನ ಶಕ್ತಿ, ಪ್ರೇರಣೆ, ದಾರಿದೀಪ ಆಗಿದ್ದಿರಿ ಎಂದು ಹೇಳಿದ್ದಾರೆ.

"ಭಾರತದ 11ನೇ ಪ್ರಧಾನಮಂತ್ರಿಗಳು, ಜಾತ್ಯತೀತ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ನನ್ನ ಪೂಜ್ಯ ತಂದೆಯವರಾದ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ 91ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ನನ್ನ ಭಕ್ತಿಪೂರ್ವಕ ಪ್ರಣಾಮಗಳು" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
"ನನ್ನ ಶಕ್ತಿ, ಪ್ರೇರಣೆ, ದಾರಿದೀಪ ಆಗಿರುವ ಅವರು, ಜಾತ್ಯತೀತ ಜನತಾದಳ ಪಕ್ಷದ ಪಾಲಿನ ಮಹಾನ್ ಚೈತನ್ಯ. ದೇಶ ಮತ್ತು ಕನ್ನಡನಾಡಿಗೆ ಅವರ ಕೊಡುಗೆ ಅವಿಸ್ಮರಣೀಯ. ಅವರ ಅನುಭವಧಾರೆ ನಮಗೆಲ್ಲ ಅಮೃತಧಾರೆ. ಆ ಭಗವಂತ ಶ್ರೀಯುತರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ. ಅವರು ನಮ್ಮೆಲ್ಲರನ್ನು ಇನ್ನೂ ದೀರ್ಘಕಾಲ ಮುನ್ನಡೆಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ಭಾರತದ 11ನೇ ಪ್ರಧಾನಮಂತ್ರಿಗಳು, @JanataDal_S ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ನನ್ನ ಪೂಜ್ಯ ತಂದೆಯವರಾದ ಶ್ರೀ @H_D_Devegowda ಅವರಿಗೆ 91ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ನನ್ನ ಭಕ್ತಿಪೂರ್ವಕ ಪ್ರಣಾಮಗಳು. 1/2 pic.twitter.com/hRdkTDQouA
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) May 18, 2023
ಪ್ರಧಾನಿ ನರೇಂದ್ರ ಮೋದಿ ಕೂಡ ಎಚ್ ಡಿ ದೇವೇಗೌಡರಿಗೆ ಶುಭಾಶಯ ಹೇಳಿದ್ದಾರೆ. "ನಮ್ಮ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಅವರ ಜನ್ಮ ದಿನದಂದು ಶುಭಾಶಯಗಳು. ನಮ್ಮ ದೇಶಕ್ಕೆ ಅವರ ಕೊಡುಗೆ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.

90 ವರ್ಷವಾದರೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಇನ್ನೂ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದು, ಇತ್ತೀಚೆಗಷ್ಟೇ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎಂದು ಚುನಾವಣಾ ಪೂರ್ವದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಹಾಕಿದ್ದರು. ಈ ಬಾರಿ ಜೆಡಿಎಸ್ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ಹೊಂದಿದ್ದರು.
ಆದರೆ, ಚುನಾವಣೆಯಲ್ಲಿ ಜೆಡಿಎಸ್ ಕೇವಲ 19 ಸ್ಥಾನಗಳನ್ನು ಗೆದ್ದುಕೊಂಡಿದೆ. ಎಚ್.ಡಿ. ಕುಮಾರಸ್ವಾಮಿ ಕಿಂಗ್ ಮೇಕರ್ ಆಗುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ, ಅದು ಸುಳ್ಳಾಗಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸರ್ಕಾರ ರಚಿಸುತ್ತಿದೆ. ದೇವೇಗೌಡರು ಇಂದಿಗೂ ರಾಜ್ಯದ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಹಾಗೂ ಒಕ್ಕಲಿಗ ಸಮುದಾಯದ ಪ್ರಬಲ ವ್ಯಕ್ತಿಯಾಗಿ ಉಳಿದಿದ್ದಾರೆ.












Click it and Unblock the Notifications