ಮಾಜಿ ಸಿಎಂ ಬಿಎಸ್ವೈಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಆದೇಶ
ಬೆಂಗಳೂರು, ಆಗಸ್ಟ್ 07: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ಎಲ್ಲ ಸಂಪುಟ ಸಚಿವರಿಗೆ ಶನಿವಾರ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ, ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ರಾಜೇಶ ಶಂಕ್ರಪ್ಪ ಸೂಳಿಕೇರಿಯವರು ರಾಜ್ಯಪಾಲರ ಆದೇಶಾನುಸಾರ ಹೊರಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಸಂಪುಟ ದರ್ಜೆಯ ಸಚಿವರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದು ಬಸವರಾಜ ಬೊಮ್ಮಾಯಿ ಸಿಎಂ ಅಗಿ ಇರುವವರೆಗೆ ಸಂಪುಟ ದರ್ಜೆಯ ಸಚಿವರ ಎಲ್ಲಾ ಸೌಲಭ್ಯ ನೀಡಲಾಗುವುದು.

ಸಂಪುಟ ದರ್ಜೆಯ ಸಚಿವರಿಗೆ ಸಿಗುವ ಎಲ್ಲಾ ಸೌಲಭ್ಯಗಳಾದ ಸರ್ಕಾರಿ ನಿವಾಸ, ಎಸ್ಕಾರ್ಟ್, ಪೈಲಟ್ ವಾಹನಗಳು, ಗನ್ ಮ್ಯಾನ್ ಸೌಲಭ್ಯ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಸಿಗಲಿವೆ. ಸದ್ಯ ವಾಸಿಸುತ್ತಿರುವ ಕಾವೇರಿ ನಿವಾಸದಲ್ಲೇ ವಾಸ್ತವ್ಯ ಮುಂದುವರೆಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು, ಇಂದು (ಆಗಸ್ಟ್ 7) ಸಚಿವರಿಗೆ ಖಾತೆಯನ್ನೂ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಪಟ್ಟಿ ಹೊರಬಿದ್ದಿದ್ದು, ರಾಜ್ಯಪಾಲ ಅಂಕಿತ ಹಾಕಿ ಅನುಮೋದನೆ ನೀಡಿದ್ದಾರೆ.
ಬಿಜೆಪಿ ಹೈಕಮಾಂಡ್ ಅಣತಿಯಂತೆ 6 ಹೊಸಬರು, ಅನುಭವವುಳ್ಳರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಬಿಜೆಪಿ ಕಣ್ಣಿರಿಸಿಕೊಂಡು ಬೆಂಗಳೂರಿನ ಶಾಸಕರಿಗೆ ಮಣೆ ಹಾಕಲಾಗಿದೆ. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿವಾರು ಲೆಕ್ಕಾಚಾರದಂತೆ ಕೂಡಾ ಲಿಂಗಾಯತ, ದಲಿತ, ಹಿಂದುಳಿತ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.
ನೂತನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 18 ಸಚಿವರು ಪದವಿ ಶಿಕ್ಷಣವನ್ನು ಮುಗಿಸಿದ್ದರೆ, ಉಳಿದ 12 ಸಚಿವರಲ್ಲಿ ಪಿಯುಸಿ, ಎಸ್ಎಸ್ಎಲ್ಸಿ ಅಥವಾ ಅದಕ್ಕಿಂತ ಕಡಿಮೆ ಶಿಕ್ಷಣವನ್ನು ಪಡೆದಿದ್ದಾರೆ.
ರಾಜಭವನದಲ್ಲಿ ಕಳೆದ ಬುಧವಾರ ಮಧ್ಯಾಹ್ನ 2.15ಕ್ಕೆ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರ ಗೌಪ್ಯತಾ ವಿಧಿ, ಪ್ರತಿಜ್ಞೆ ಪ್ರಮಾಣ ವಚನ ಸ್ವೀಕಾರ ನಡೆದಿತ್ತು. ಇಂದು ಶನಿವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಯಾರಿಗೆ ಯಾವ ಖಾತೆ
* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ- ಹಣಕಾಸು, ಬೆಂಗಳೂರು ಅಭಿವೃದ್ಧಿ, ಗುಪ್ತಚರ ಹಾಗೂ ಹಂಚಿಕೆಯಾಗದಿರುವ ಖಾತೆಗಳನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.
* ಆರಗ ಜ್ಞಾನೇಂದ್ರ- ಮೊದಲ ಬಾರಿಗೆ ಸಚಿವ ಸ್ಥಾನ ಪಡೆದಿರುವ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರಗೆ ಗೃಹ ಖಾತೆ ನೀಡಲಾಗಿದೆ.
* ಗೋವಿಂದ ಕಾರಜೋಳ- ಬೃಹತ್ ಹಾಗೂ ಮಧ್ಯಮ ನೀರಾವರಿ (ಜಲಸಂಪನ್ಮೂಲ)
* ಡಾ. ಸಿ.ಎನ್. ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಹೆಚ್ಚುವರಿಯಾಗಿ ಕೌಶಲ್ಯಾಭಿವೃದ್ಧಿ
* ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
* ಆರ್. ಅಶೋಕ- ಕಂದಾಯ ಇಲಾಖೆ
* ಬಿ. ಶ್ರೀರಾಮುಲು- ಸಾರಿಗೆ, ಪರಿಶಿಷ್ಠ ಪಂಗಡ ಅಭಿವೃದ್ದಿ ಇಲಾಖೆ
* ವಿ. ಸೋಮಣ್ಣ- ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ
* ಬಿ.ಸಿ. ಪಾಟೀಲ್- ಕೃಷಿ ಇಲಾಖೆ
* ಎಸ್.ಟಿ. ಸೋಮಶೇಖರ್- ಸಹಕಾರ ಇಲಾಖೆ
* ಡಾ.ಕೆ. ಸುಧಾಕರ್- ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ
* ಕೆ. ಗೋಪಾಲಯ್ಯ- ಅಬಕಾರಿ ಇಲಾಖೆ
* ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್ ಮತ್ತು ವಕ್ಛ್
* ಎಂಟಿಬಿ ನಾಗರಾಜ್- ಪೌರಾಡಳಿತ, ಸಣ್ಣ ಕೈಗಾರಿಕೆ ಇಲಾಖೆ
* ಬಿ.ಸಿ. ನಾಗೇಶ್- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
* ವಿ. ಸುನಿಲ್ಕುಮಾರ್- ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
* ಉಮೇಶ್ ಕತ್ತಿ- ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು
* ಜೆ.ಸಿ. ಮಾಧುಸ್ವಾಮಿ- ಕಾನೂನು, ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
* ಆನಂದ್ ಸಿಂಗ್- ಪರಿಸರ ಮತ್ತು ಪ್ರವಾಸೋದ್ಯಮ
* ಪ್ರಭು ಚೌಹಾಣ್- ಪಶುಸಂಗೋಪನೆ
* ಮುರುಗೇಶ್ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
* ಶಿವರಾಮ್ ಹೆಬ್ಬಾರ್- ಕಾರ್ಮಿಕ
* ಎಸ್. ಅಂಗಾರ- ಮೀನುಗಾರಿಕೆ, ಬಂದರು
* ಕೋಟಾ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ
* ಕೆ.ಸಿ. ನಾರಾಯಣ ಗೌಡ- ಕ್ರೀಡೆಮತ್ತು ಯುವಜನ ಸಬಲೀಕರಣ
* ಮುನಿರತ್ನ- ತೋಟಗಾರಿಕೆ
* ಭೈರತಿ ಬಸವರಾಜ್- ನಗರಾಭಿವೃದ್ಧಿ
* ಹಾಲಪ್ಪ ಆಚಾರ್- ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ
* ಸಿ.ಸಿ. ಪಾಟೀಲ್- ಲೋಕೋಪಯೋಗಿ,
Recommended Video
* ಶಂಕರ ಪಾಟೀಲ್ ಮುನೇನಕೊಪ್ಪ- ಜವಳಿ ಖಾತೆ












Click it and Unblock the Notifications