Lawyer Jagadeesh: ಲಾಯರ್ ಜಗದೀಶ್ ಮೇಲೆ ಮಾರಣಾಂತಿಕ ಹಲ್ಲೆ
ಬಿಗ್ ಬಾಸ್ 11ನೇ ಸೀಸನ್ನ ಮಾಜಿ ಸ್ಪರ್ಧಿ ಹಾಗೂ ವಕೀಜ ಜಗದೀಶ್ ಮೇಲೆ ಮತ್ತೊಮ್ಮೆ ಮಾರಣಾಂತಿಕ ಹಲ್ಲೆ ನಡೆದಿದೆ. ತನ್ನ ಮೇಲೆ ಹಾಗೂ ತನ್ನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಲಾಗಿದೆ, ಎಂದು ರಕ್ತ ಸುರಿಸುತ್ತಲೇ ಲಾಯರ್ ಜಗದೀಶ್ ಲೈವ್ ಬಂದಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಕೂಡ ಕಿಡಿ ಕಾರಿರುವ ಅವರು, ಇದು ಗೂಂಡಾ ರಾಜ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗದೀಶ್ ಮತ್ತು ಆತನ ಪುತ್ರನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಅವರು ಹೇಳಿದ್ದು, ರಕ್ತ ಬರುತ್ತಿರುವಾಗಲೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಲೈವ್ ಬಂದಿದ್ದಾರೆ. "ಇಂದು ನನ್ನ ಹಾಗೂ ನನ್ನ ಕುಟುಂಬದವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಪೊಲೀಸರು ಬಂದು ನಮ್ಮನ್ನು ಕಾಪಾಡಿದರು. ಮನೆಯ ಬಳಿ ನಿಂತಿದ್ದ ಸ್ಕಾರ್ಪಿಯೋ ಕಾರನ್ನು ಧ್ವಂಸ ಮಾಡಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಗನ್ ಮ್ಯಾನ್ಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಏನು ಮಾಡ್ತಾ ಇದಿರಾ? ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಇಂದು ಈ ಪರಿಸ್ಥಿತಿ ಬಂದಿದೆ, ಕರ್ನಾಟಕ ಭಯೋತ್ಪಾದಕರ ರಾಜ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಜೀಪ್ನಿಂದಲೇ ಲೈವ್
ಪೊಲೀಸರ ಜೊತೆ ಜೀಪಿನಲ್ಲಿ ಪ್ರಯಾಣಿಸುವಾಗಲೇ ಲಾಯರ್ ಜಗದೀಶ್ ಲೈವ್ ಬಂದಿದ್ದಾರೆ. ಜಗದೀಶ್ಗೆ ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ, ಅವರ ಮಗನಿಗೂ ಸಹ ಮುಖ, ಕಿವಿ ಗಾಯವಾಗಿದೆ.
ಪುಡಿ ರೌಡಿಗಳು ನಮ್ಮ ಮೇಲೆ ದಾಳಿ ಮಾಡಿದ್ದು, ನನ್ನ ಕುಟುಂಬವನ್ನು ಕೂಡ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲಿ ಪೊಲೀಸರಿಗಿಂತ ಪುಡಿ ರೌಡಿಗಳ ಹಾವಳಿಯೇ ಹೆಚ್ಚಾಗಿದೆ. ಇವರು ಕಾನೂನಿಗಿಂತ ದೊಡ್ಡವರಾಗಿದ್ದಾರೆ, ರಾಜ್ಯದ ಧ್ವನಿಯಾಗಿದ್ದ ನನ್ನನ್ನೇ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.
500ಕ್ಕೂ ಹೆಚ್ಚು ಜನ ಮದ್ಯ, ಗಾಂಕಾ ಮತ್ತಿನಲ್ಲಿ ದಾಳಿ ಮಾಡಿದ್ದಾರೆ. ನಾವು ನ್ಯಾಯ ಕೇಳಲ್ಲ, ಇಲ್ಲಿ ನ್ಯಾಯವೇ ಅನ್ಯಾಯವಾಗಿದೆ. ನನ್ನ ಜೀವ ಹೋದರೂ ನಾನು ಹೆದರಲ್ಲ, ಅನ್ಯಾಯ ಗೆಲ್ಲಬಾರದು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇಲ್ಲದಂತಾಗಿದೆ. ಏನೇ ಆದರೂ ನನ್ನ ನಿಲುವು ಬದಲಾಗಲ್ಲ ಎಂದಿದ್ದಾರೆ. ತಮ್ಮ ವಿರುದ್ಧ ಹಲ್ಲೆ ಮಾಡಿದ್ದವರ ವಿರುದ್ಧ ಜಗದೀಶ್ ದೂರು ಕೊಟ್ಟಿದ್ದಾರೆ.












Click it and Unblock the Notifications