ಕನ್ನಡದ ಮತ್ತೊಬ್ಬ ಪ್ರಮುಖ ನಟ,ಗಾಯಕನ ಮೇಲೆ ದಾಖಲಾಯ್ತು ಎಫ್ಐಆರ್!
ಸ್ಯಾಂಡಲ್ವುಡ್ ಹಾಗೂ ವಿವಾದ ಕಳೆದ ಮೂರು ವರ್ಷದಿಂದ ಒಂದನ್ನೊಂದು ಬಿಟ್ಟು ಇರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನ ಯಾವುದಾರೂ ಒಬ್ಬರು ಸ್ಟಾರ್ ನಟರು ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ತಪ್ಪುತ್ತಿಲ್ಲ. ಈಗಾಗಲೇ ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತಿ ಗಳಿಸಿದ್ದ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದು ಮೂರು ತಿಂಗಳಿಗೂ ಹೆಚ್ಚಾಗಿದೆ. ಇದೀಗ ಮತ್ತೊಬ್ಬ ಸ್ಟಾರ್ ನಟನ ಮೇಲೆ ಎಫ್ಐಆರ್ ದಾಖಲಾಗಿದೆ.
ಸ್ಯಾಂಡಲ್ವುಡ್ನಲ್ಲಿ ಒಂದಿಲ್ಲೊಂದು ವಿವಾದ ಸೃಷ್ಟಿಯಾಗುತ್ತಲ್ಲೇ ಇದೆ. ಈ ವಿವಾದ ಹಾಗೂ ಕೋರ್ಟ್ ಕೇಸ್ಗಳಿಂದ ಕನ್ನಡ ಚಿತ್ರರಂಗಕ್ಕೆ ಭಾರೀ ಹಿನ್ನಡೆಯಾಗಿರುವುದು ಸುಳ್ಳಲ್ಲ. ಇನ್ನು ಕನ್ನಡ ಕಿರುತೆರೆಯೂ ವಿವಾದಗಳಿಂದ ದೂರ ಉಳಿದಿಲ್ಲ. ಈ ಬೆಳವಣಿಗೆಗಳ ನಡುವೆ ಕನ್ನಡಚಿತ್ರರಂಗದ ( ಸ್ಯಾಂಡಲ್ವುಡ್) ನಟ ಮಯೂರ್ ಪಟೇಲ್ ಮೇಲೆ ಎಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಶಾಲಿನಿ ಎಂಬ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಾಗಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅತಿಕ್ರಮ ಪ್ರವೇಶ ಮಾಡಿರುವ ಆರೋಪ ನಟನ ವಿರುದ್ಧ ಕೇಳಿ ಬಂದಿದೆ. ಮಯೂರ್ ಪಟೇಲ್ ಅವರು ರೌಡಿಗಳೊಂದಿಗೆ ಬಂದು ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಟ ಮಯೂರ್ ಅವರ ವಿರುದ್ಧ ಶಾಲಿನಿ ಎನ್ನುವ ಮಹಿಳೆಯೊಬ್ಬರು ಜಮೀನು ವಿಚಾರವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಶಾಲಿನಿ ಎನ್ನುವವರಿಗೆ ಸೇರಿದೆ ಎನ್ನಲಾಗಿರುವ 14.5 ಗುಂಟೆ ಜಮೀನು ಈಗಾಗಲೇ ವ್ಯಾಜ್ಯದಲ್ಲಿದೆ ಎನ್ನಲಾಗಿದೆ. ಶಾಲಿನಿ ಅವರ ಪತಿ ಮಂಜುನಾಥ ರೆಡ್ಡಿಗೆ ದಾನವಾಗಿ ಬಂದಿದ್ದ ಜಮೀನಿನಲ್ಲಿ ಹಕ್ಕು ಸ್ವಾಧೀನದಲ್ಲಿದೆ.
ಸುಬ್ರಮಣ್ಯಂ ಮಾಸ್, ಎನ್ ಆರ್ ಭಟ್ ಮತ್ತು ಮಯೂರ್ ಪಟೇಲ್ ಮೂವರು ಜಿಪಿಎ ಹೋಲ್ಡರ್ ಆಗಿದ್ದಾರೆ. ಈ ಕಾರಣಕ್ಕಾಗಿ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಮಂಜುನಾಥ್ ರೆಡ್ಡಿ ಅವರ ಪರವಾಗಿ ಆದೇಶ ಬಂದಿತ್ತು. ಆದರೆ, ಈ ಆದೇಶವನ್ನ ಉಲ್ಲಂಘಿಸಿರುವ ನಟ ಮಯೂರ್ ಕಡೆಯವರು ಅಕ್ರಮವಾಗಿ ಶಾಲಿನಿ ಅವರ ಜಾಗಕ್ಕೆ ಜೆಸಿಬಿ ನುಗ್ಗಿಸಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ. ಅಲ್ಲದೇ, ಈ ಜಾಗದಲ್ಲಿ ಈಗಾಗಲೇ ಇದ್ದ ಕಾಂಪೌಂಡ್ ಕೆಡವಿದ ಮಯೂರ್ ಪಟೇಲ್ ಅವರು ಅಕ್ರಮವಾಗಿ ಶೆಡ್ ನಿರ್ಮಿಸಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬರುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯಾರು ಈ ಮಯೂರ್ ಪಟೇಲ್: ಮಯೂರ್ ಪಟೇಲ್ ಕನ್ನಡ ಚಿತ್ರರಂಗದ ನಟ ಮತ್ತು ಗಾಯಕ ಸಹ ಹೌದು. 2000ನೇ ಇಸವಿಯಲ್ಲಿ ತೆರೆಕಂಡ ಆಂಧ್ರ ಹೆಂಡತಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಇವರ ಎಂಟ್ರಿಯಾಗಿತ್ತು. ಮಣಿ ಎನ್ನುವ ಸಿನಿಮಾದಲ್ಲಿ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದ್ದರು. ಈ ಚಿತ್ರವನ್ನು ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿಸಿದ್ದರು. ಮಯೂರ್ ಅವರು, ಲವ್ಸ್ಟೋರಿ, ಗುನ್ನ, ಹೆತ್ತವರ ಕನಸು, ಮುನಿಯ ಹುಂಜ, ಯಾರಿವನು, ಸ್ಲಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.












Click it and Unblock the Notifications