ರೈತರ ವಿರುದ್ಧ ಟ್ವೀಟ್: ಕಂಗನಾ ವಿಚಾರಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಕಾರ
ಬೆಂಗಳೂರು, ಮಾರ್ಚ್ 2: ದೇಶದ ವಿವಿಧೆಡೆ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಅವಹೇಳನಾಕಾರಿ ಟ್ವೀಟ್ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧದ ವಿಚಾರಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
'ಕೃಷಿ ಕಾಯ್ದೆಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಜನರೇ ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆಯೂ ತಪ್ಪು ಮಾಹಿತಿ ನೀಡಿ ಗಲಭೆಗೆ ಕಾರಣರಾಗಿದ್ದರು. ಇವರು ದೇಶದಲ್ಲಿ ಭಯದ ವಾತಾವರಣ ಉಂಟುಮಾಡುತ್ತಿರುವ ಭಯೋತ್ಪಾದಕರಾಗಿದ್ದಾರೆ' ಎಂದು ಸೆಪ್ಟೆಂಬರ್ 21ರಂದು ಕಂಗನಾ ರನೌತ್ ಮಾಡಿದ್ದ ಟ್ವೀಟ್ ತೀವ್ರ ವಿವಾದ ಸೃಷ್ಟಿಸಿತ್ತು. ಕಂಗನಾ ವಿರುದ್ಧ ದೇಶದ ಅನೇಕ ಭಾಗಗಳಲ್ಲಿ ದೂರುಗಳು ದಾಖಲಾಗಿದ್ದವು.
ಕಂಗನಾ ರನೌತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಬೆಂಗಳೂರಿನ ಪ್ರಥಮ ದರ್ಜೆ ಜೆಎಂಎಫ್ಸಿ ನ್ಯಾಯಾಲಯವು ಕಳೆದ ಅಕ್ಟೋಬರ್ ತಿಂಗಳಲ್ಲಿ ಪೊಲೀಸರಿಗೆ ಸೂಚಿಸಿತ್ತು. ಇದರ ಬಳಿಕ ವಕೀಲ ರಮೇಶ್ ನಾಯ್ಕ್ ಅವರು ಕಂಗನಾ ವಿರುದ್ಧ ದೂರು ನೀಡಿದ್ದರು. ಜೆಎಂಎಫ್ಸಿ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಎಫ್ಐಆರ್ ದಾಖಲಿಸುವಂತೆ ಕೋರಿ ಕಂಗನಾ ರನೌತ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಕಂಗನಾ ಪರ ಹಾಜರಾದ ವಕೀಲ ರಿಜ್ವಾನ್ ಸಿದ್ದಿಕಿ, ನಟಿ ವಿರುದ್ಧದ ವಿಚಾರಣೆಗೆ ತಡೆ ನೀಡುವಂತೆ ಕೋರಿದರು. ಇದಕ್ಕೆ ನ್ಯಾಯಪೀಠ, ಮೊದಲು ನೀವು ಕಚೇರಿ ಆಕ್ಷೇಪಣೆ ಸಲ್ಲಿಸಿ. ಬಳಿಕವಷ್ಟೇ ನಿಮ್ಮ ವಾದವನ್ನು ನಾವು ಪರಿಗಣಿಸಬಹುದು ಎಂದಿತು. ಕಂಗನಾ ಅವರಿಗೆ ಒಂದು ವಾರಗಳ ಕಾಲ ಸಮಯ ನೀಡಿದ ನ್ಯಾಯಮೂರ್ತಿ ಎಚ್ಪಿ ಸಂದೇಶ್ ಅವರು ಪ್ರಕರಣವನ್ನು ಮಾರ್ಚ್ 18ಕ್ಕೆ ಮುಂದೂಡಿದರು.












Click it and Unblock the Notifications