ಸಾಮೂಹಿಕ ಆತ್ಮಹತ್ಯೆ ಪ್ರಕರಣ; ಪತ್ರಕರ್ತ ಹಲ್ಲೆಗೆರೆ ಶಂಕರ್ ಬಂಧನ
ಬೆಂಗಳೂರು, ಅ. 01: ನಾಲ್ವರ ಸಾಮೂಹಿಕ ಆತ್ಮಹತ್ಯೆ ಹಾಗೂ ಮಗುವಿನ ಕೊಲೆ ಪ್ರಕರಣದಲ್ಲಿ ಕುಟುಂಬದ ಒಡೆಯ, ಪತ್ರಕರ್ತ ಹಲ್ಲೆಗೆರೆ ಶಂಕರ್ ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸಾಕ್ಷಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಶಂಕರ್ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಶುಕ್ರವಾರ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ರಾಜೀವ್ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ. ಬಂಧನವನ್ನು ಪೊಲೀಸರು ಖಚಿತ ಪಡಿಸಿದ್ದು, ಸಿಂಚನಾ ಹಾಗೂ ಸಿಂಧೂರಾಣಿ ಅವರ ಪತಿಯರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮಧು ಸಾಗರ್ ಡೆತ್ ನೋಟ್ ನಿಜವಾಯ್ತಾ ?: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರ ಪಾಳ್ಯದಲ್ಲಿದ್ದ ಐಶಾರಾಮಿ ಬಂಗಲೆಯಲ್ಲಿ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಶಾಸಕರ ವಾರ್ತೆ ಪತ್ರಿಕೆ ಸಂಪಾದಕ ಹಲ್ಲೆಗೆರೆ ಶಂಕರ್ ಅವರ ಪತ್ನಿ ಭಾರತಿ, ಪುತ್ರ ಮಧುಸಾಗರ್ , ಪುತ್ರಿಯರಾದ ಸಿಂಚನಾ, ಸಿಂಧೂರಾಣಿ ಆತ್ಮಹತ್ಯೆಗೆ ಶರಣಾಗಿದ್ದರು. 9 ತಿಂಗಳ ಮಗುವನ್ನು ಸಿಂಧೂರಾಣಿ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ದುರ್ಘಟನೆಯಲ್ಲಿ ಮೂರು ವರ್ಷದ ಕಂದಮ್ಮ ಜೀವ ಉಳಿಸಿಕೊಂಡಿತ್ತು. ಪ್ರಕರಣದ ತನಿಖೆ ನಡೆಸಿದಾಗ ಶಂಕರ್ ಅವರ ಪುತ್ರ ಮಧು ಸಾಗರ್ ಬರೆದಿದ್ದ 27 ಪುಟಗಳ ಡೆತ್ ನೋಟ್ ಪೊಲೀಸರ ಕೈಗೆ ಸಿಕ್ಕಿತ್ತು.

ಹಲ್ಲೆಗೆರೆ ಶಂಕರ್ ಒಬ್ಬ ಸ್ವಾರ್ಥಿ. ನನ್ನ ಅಪ್ಪ ಎಂದು ಹೇಳಿಕೊಳ್ಳಲು ನಾಚಿಕೆ, ಅತ ಒಬ್ಬ ಕಾಮುಕ, ತನ್ನ ಏರಿಯಾದ ಮಹಿಳೆ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಆಕೆಯ ಮಗಳನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸಿದ್ದ. End abuse against women and children!' ಕುಟುಂಬದ ಸಾಮೂಹಿಕ ಆತ್ಮಹತ್ಯೆ ಹಿಂದಿನ ರಹಸ್ಯ ಮಧುಸಾಗರ್ ಬರೆದಿರುವ ಡೈರಿ ಹಾಗೂ ಡೆತ್ ನೋಟ್ನಲ್ಲಿ ಬಹಿರಂಗವಾಗಿತ್ತು.
ಮಧು ಸಾಗರ್ ಡೆತ್ ನೋಟ್ ಹಾಗೂ ಡೈರಿಯಲ್ಲಿ ಉಲ್ಲೇಖವಾಗಿರುವ ಮಾಹಿತಿ ಅಧರಿಸಿ ಬ್ಯಾಡರಹಳ್ಳಿ ಪೊಲೀಸರು ಪತ್ರಕರ್ತ ಹಲ್ಲೆಗೆರೆ ಶಂಕರ್ ಮತ್ತು ಮೃತ ಸಹೋದರಿಯರ ಗಂಡಂದಿರನ್ನು ವಿಚಾರಣೆ ನಡೆಸಿದ್ದಾರೆ. ಇಂದು ಸಹ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದು, ಮಧು ಸಾಗರ್ ಬರೆದಿರುವ ಪುಟಗಟ್ಟಲೇ ಡೆತ್ ನೋಟ್ಗೆ ಸಂಬಂಧಿಸದಿಂತೆ ಹಲ್ಲೆಗೆರೆ ಶಂಕರ್ ಮತ್ತು ಆತನ ಅಳಿಯಂದಿರು ಪೊಲೀಸರು ಉತ್ತರಿಸಿದ್ದಾರೆ. ಮಾತ್ರವಲ್ಲ, ಹಲ್ಲೆಗೆರೆ ಶಂಕರ್ ಅವರ ಲ್ಯಾಪ್ಟಾಪ್ ಹಾಗೂ ಮೊಬೈಲ್ ಶೋಧ ನಡೆಸಿದಾಗ ಮಧುಸಾಗರ್ ಮಾಡಿರುವ ಎಲ್ಲಾ ಆರೋಪಗಳಿಗೂ ಸಂಬಂಧಿಸಿದಂತೆ ಪೊಲೀಸರಿಗೆ ಸಾಕ್ಷಾಧಾರಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಹಲ್ಲೆಗೆರೆ ಶಂಕರ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿಸಿ ಬ್ಯಾಡರಹಳ್ಳಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಂಕರ್ ಪುತ್ರ ಸಾಯುವ ಮುನ್ನ ತಂದೆ ವಿರುದ್ಧ ಅವರ ಪುತ್ರ ಮಧು ಸಾಗರ್ ಪುಟಗಟ್ಟಲೇ ಆರೋಪ ಮಾಡಿದ್ದ. ತನ್ನ ತಂದೆಯ ವಿರುದ್ಧವೇ ಪುಟಗಟ್ಟಲೇ ಬರೆದು ಅದನ್ನು ಜೆರಾಕ್ಸ್ ಮಾಡಿ ಹಂಚಿದ್ದ. ಮಧು ಸಾಗರ್ ಬರೆದಿರುವ ಡೈರಿಯಲ್ಲಿ ಶಂಕರ್ ಬೇರೆ ಮಹಿಳೆಯರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಹೀಗಾಗಿ ಶಂಕರ್ ಮತ್ತು ಪತ್ನಿ ನಡುವೆ ಸಂಬಂಧ ಹದಗೆಟ್ಟಿತ್ತು. ಅದಾದ ಬಳಿಕ ಶಂಕರ್ ಪುತ್ರಿಯರಾದ ಸಿಂಧುರಾಣಿ ಮತ್ತು ಸಿಂಚನಾ ಮದುವೆ ಯಾಗಿದ್ದರೂ, ನೆಮ್ಮದಿ ಇರಲಿಲ್ಲ. ಅಳಿಯಂದಿರ ಪರ ನಿಂತಿದ್ದ ಶಂಕರ್ ಹೆಣ್ಣು ಮಕ್ಕಳ ದೃಷ್ಟಿಯಲ್ಲಿ ಕೂಡ ಕೆಟ್ಟವರಾಗಿದ್ದರು. ಮೂರು ಕೋಟಿ ವ್ಯಯಿಸಿ ಮನೆ ಕಟ್ಟಿದರೂ ಕಿಟಕಿಯಿಂದ ನೀರು ಬರುತ್ತಿತ್ತು. ಇದರ ಜತೆಗೆ ಅಕ್ಕಂದಿರನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಮಧುಸಾಗರ್ ಡೆತ್ ನೋಟ್ನಲ್ಲಿ ಬರೆದಿದ್ದು, ಕೊನೆಯಲ್ಲಿ End abuse against women and children ಎಂಬ ಶೀರ್ಷಿಕೆ ಪ್ರಿಂಟ್ ತೆಗೆದು ಇಟ್ಟಿರುವುದು ಪೊಲೀಸರ ಕೈಗೆ ಸಿಕ್ಕಿದೆ. ಈ ಎಲ್ಲಾ ದಾಖಲೆಗಳನ್ನು ಮುಂದಿಟ್ಟುಕೊಂಡು ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸಿದ್ದು, ಇದೀಗ ಶಂಕರ್ ನನ್ನು ಬಂಧಿಸಿದ್ದಾರೆ.












Click it and Unblock the Notifications