ಅರಗ ಜ್ಞಾನೇಂದ್ರ ಹೆಸರಿನಲ್ಲಿ ವಸೂಲಿ: ಬಿಜೆಪಿ ಮುಖಂಡ ಸೇರಿ ಇಬ್ಬರ ಬಂಧನ
ಬೆಂಗಳೂರು, ನ. 04: ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಪುತ್ರನ ಹೆಸರಿನಲ್ಲಿ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಹಣ ವಸೂಲಿ ಮಾಡುತ್ತಿದ್ದ ಬಿಜೆಪಿ ಮುಖಂಡ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ನಾಯಕನೆಂದು ಗುರುತಿಸಿಕೊಂಡಿದ್ದ ಭವಾನಿ ರಾವ್ ಮೊರೆ ಹಾಗೂ ಗೃಹ ಸಚಿವರ ಪುತ್ರನ ಹೆಸರಿನವನಾದ ಅಭಿ ಬಂಧಿತ ಅರೋಪಿಗಳು. ಇವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಹೋಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೆಸರು ಹಾಗೂ ಪುತ್ರನ ಹೆಸರು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದರಂತೆ. ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಬಾರ್ಗಳಲ್ಲಿ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದಾರೆ. ವಾಸ್ತವದಲ್ಲಿ ಈ ವಿಚಾರ ಗೃಹ ಸಚಿವರಾಗಲೀ, ಅವರ ಮಗನ ಗಮನಕ್ಕಾಗಲೀ ಬಂದಿಲ್ಲ. ಆದರೆ, ಬಾರ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ವತಿಯಿಂದ ಗೃಹ ಸಚಿವರಿಗೆ ಮನವಿ ನೀಡಿ, ತಮ್ಮ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ತಿಳಿಸಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ದೂರನ್ನು ತನಿಖೆಯ ಜವಾಬ್ದಾರಿಯನ್ನು ಸಿಸಿಬಿ ಪೊಲೀಸರಿಗೆ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭವಾನಿ ರಾವ್ ಮೊರೆ ಹಾಗೂ ಅಭಿ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಭವಾನಿರಾವ್ ಮೊರೆ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ವಿಸ್ತಾರಕನಾಗಿದ್ದು, ಬಿಜೆಪಿ ನಾಯಕರ ಹಿಂದೆ ಸುತ್ತಾಡಿಕೊಂಡಿದ್ದ ಎನ್ನಲಾಗಿದೆ. ಕೆಪಿಟಿಸಿಎಲ್ ನಿರ್ದೆಶಕನಾಗಿಯೂ ಭವಾನಿರಾವ್ ಮೊರೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ವಿಚಾರಣೆ ನಡೆಸಿದ ಬಳಿಕ ಅಸಲಿ ಸತ್ಯಾಂಶಗಳು ಹೊರ ಬರಲಿವೆ.
ಗೃಹ ಸಚಿವರ ಮಗನ ಹೆಸರೂ ಅದೇ!:
ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಇಬ್ಬರಲ್ಲಿ ಒಬ್ಬರ ಹೆಸರು ಅಭಿ. ವಿಪರ್ಯಾಸವೆಂದರೆ ಗೃಹ ಸಚಿವರ ಪುತ್ರನ ಹೆಸರು ಕೂಡ ಅಭಿ. ಆರಗ ಜ್ಞಾನೇಂದ್ರ ಗೃಹ ಸಚಿವರಾದ ಬಳಿಕ ತನ್ನ ಹೆಸರಿಗೆ ಕಳಂಕ ಬಂದೀತು ಎಂಬ ಕಾರಣಕ್ಕೆ ಪುತ್ರನ ಆಪ್ತ ಬಳಗದಿಂದಲೂ ದೂರ ಇರಿಸಿದ್ದರು. ಆದರೆ, ಗೃಹ ಸಚಿವರ ಪುತ್ರನ ಹೆಸರಿನ ವ್ಯಕ್ತಿ ಸಚಿವರ ಮಗನೆಂದೇ ಹೇಳಿಕೊಂಡು ವಸೂಲಿ ಮಾಡಿರುವುದು ವಿಶೇಷ.