ರೇವಣ್ಣಗೆ ಕೊಲೆ ಬೆದರಿಕೆ, ಸಿಸಿಬಿಗೆ ತನಿಖೆ ವರ್ಗಾವಣೆ
ಬೆಂಗಳೂರು, ಮೇ 19 : ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಭೂಗತ ಪಾತಕಿ ರವಿ ಪೂಜಾರಿ ರೇವಣ್ಣ ಅವರಿಗೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ದೂರು ದಾಖಲಾಗಿತ್ತು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ. ತಮಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿದೆ ಎಂದು ಎಚ್.ಎಂ.ರೇವಣ್ಣ ಅವರು ಮೇಘರಿಕ್ ಅವರಿಗೆ ದೂರು ನೀಡಿದ್ದರು. [ಎಚ್.ಎಂ.ರೇವಣ್ಣಗೆ ಕೊಲೆ ಬೆದರಿಕೆ]

10 ಕೋಟಿಗೆ ಬೇಡಿಕೆ ಇಟ್ಟಿದ್ದ : ಮೇ 11ರಂದು ಎಚ್.ಎಂ.ರೇವಣ್ಣ ಅವರಿಗೆ ಎರಡು ಬಾರಿ ಕರೆ ಮಾಡಿದ್ದ ಭೂಗತ ಪಾತಕಿ ರವಿ ಪೂಜಾರಿ 10 ಕೋಟಿ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಜೀವ ಬೆದರಿಕೆ ಹಾಕಿದ್ದ ಮತ್ತು ಮಗನ ಚಿತ್ರ ಬಿಡುಗಡೆಗೆ ಅಡ್ಡಿ ಪಡಿಸುವುದಾಗಿ ಹೇಳಿದ್ದ. [ಬೆಂಕಿ ಜೊತೆ ಸರಸವಾಡಿದ 'ಲಕ್ಷ್ಮಣ' ಹೀರೋ ಅನೂಪ್]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾದ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು, ರಾಜಕೀಯದ ಜೊತೆ ಚಿತ್ರ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ರೇವಣ್ಣ ಪುತ್ರ ಅನೂಪ್ ನಾಯಕರಾಗಿರುವ ಚೊಚ್ಚಲ ಚಿತ್ರ 'ಲಕ್ಷ್ಮಣ' ತೆರೆಗೆ ಬರಲು ಸಿದ್ಧವಾಗಿದೆ. ಆರ್.ಚಂದ್ರು ಈ ಚಿತ್ರದ ನಿರ್ದೇಶಕರು. [ಸಚಿವರಿಗೆ ಬಂದಿದ್ದು ಹುಸಿ ಬೆದರಿಕೆ ಕರೆಯಲ್ಲ]
10 ಕೋಟಿ ರೂ. ಹಣ ನೀಡದಿದ್ದರೆ ನಿಮ್ಮನ್ನು, ಪುತ್ರನನ್ನು ಮತ್ತು ಸಿನಿಮಾ ನಿರ್ದೇಶಕರನ್ನೂ ಕೊಲ್ಲುತ್ತೇನೆ ಎಂದು ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ ಎಂದು ರೇವಣ್ಣ ಅವರು ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.












Click it and Unblock the Notifications