ಜಿಲ್ಲಾಧಿಕಾರಿ ‘ಜನತಾ ದರ್ಶನ’ಕ್ಕೆ ಜನರಿಂದ ಬಂದ ಅರ್ಜಿಗಳೆಷ್ಟು?
ಬೆಂಗಳೂರು: ರಾಜಧಾನಿ ಬೆಂಗಳೂರಿನ ನಿವಾಸಿಗಳು ಹಲವು ರೀತಿಯ ಸಮಸ್ಯೆಗಳ ಸುಳಿಗೆ ಸಿಲುಕಿ ಪರದಾಡುತ್ತಿದ್ದಾರೆ. ಅದರಲ್ಲೂ ಬೆಂಗಳೂರು ಹೊರವಲಯಕ್ಕೆ ಅಂಟಿಕೊಂಡಿರುವ ಪ್ರದೇಶಗಳು, ಈಗಿನ್ನೂ ಅಭಿವೃದ್ಧಿ ಹೊಂದುತ್ತಿವೆ. ಹೀಗಾಗಿ ಅಲ್ಲಿ ಸಮಸ್ಯೆಗಳ ಸರಮಾಲೆ ಇದ್ದೇ ಇರುತ್ತದೆ. ಈಗ ಆ ಸಮಸ್ಯೆಗಳನ್ನ ಸರಿ ಮಾಡಲು ಬೆಂಗಳೂರು ಜಿಲ್ಲಾಡಳಿತ ಹೊಸ ಕ್ರಮ ಕೈಗೊಂಡಿದೆ.
ಹೌದು, ಬೆಂಗಳೂರಿನ ನಿವಾಸಿಗಳ ಸಮಸ್ಯೆ ಕೇಳಲು 'ಜನತಾ ದರ್ಶನ' ಕಾರ್ಯಕ್ರಮವನ್ನ ಇಂದು ಆಯೋಜನೆ ಮಾಡಲಾಗಿತ್ತು. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ಚೋಳನಾಯಕನ ಹಳ್ಳಿ ಗ್ರಾಮ ಪಂಚಾಯಿತಿಯ, ಮಾರೇನಹಳ್ಳಿ ಗ್ರಾಮದಲ್ಲಿ ಜನತಾ ದರ್ಶನ ಆಯೋಜನೆಯಾಗಿತ್ತು. ಇಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ 'ಜನತಾ ದರ್ಶನ' ಕಾರ್ಯಕ್ರಮದಲ್ಲಿ ಸ್ಥಳೀಯರು ಭಾಗವಹಿಸಿ ತಮ್ಮ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟರು. ಹಾಗೇ ಬೆಂಗಳೂರು ಜಿಲ್ಲಾಧಿಕಾರಿಗೆ ತಮ್ಮ ಮನವಿ ಅರ್ಜಿಗಳನ್ನು ಸಲ್ಲಿಸಿದರು.

ಜಿಲ್ಲಾಧಿಕಾರಿ ದಯಾನಂದ್ ಹೇಳಿದ್ದೇನು?
ಕಾರ್ಯಕ್ರಮದಲ್ಲಿ ಹಾಜರಿದ್ದು ನಾಗರಿಕರ ಸಮಸ್ಯೆ ಆಲಿಸಿರುವ ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ಈ ವೇಳೆ 'ಜನತಾ ದರ್ಶನ'ದ ಕುರಿತಾಗಿ ಮಾತನಾಡಿದರು. ಜನತಾ ದರ್ಶನ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಸಾರ್ವಜನಿಕರ ಕುಂದುಕೊರತೆಗಳ ಜಿಲ್ಲಾ ಮಟ್ಟದಲ್ಲೇ ಆಲಿಸಿ, ನಿಗದಿತ ಕಾಲಾವಧಿ ಒಳಗಾಗಿ ಸೂಕ್ತ ಪರಿಹಾರವನ್ನು ಒದಗಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಮಾಹಿತಿ ನೀಡಿದರು.
15 ದಿನಕ್ಕೆ ಒಮ್ಮೆ ಜನತಾ ದರ್ಶನ
ಹಾಗೇ ಮಾತು ಮುಂದುವರಿಸಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಆಡಳಿತ ಯಂತ್ರ ಚುರುಕುಗೊಳಿಸಲು, ಮುಖ್ಯಮಂತ್ರಿಗಳ ನಿರ್ದೇಶನದಂತೆ 15 ದಿನಕ್ಕೆ ಒಮ್ಮೆ ಜನತಾ ದರ್ಶನ ಕಾರ್ಯಕ್ರಮ ನಡೆಸಬೇಕೆಂದು ನಿರ್ಧರಿಸಲಾಗಿದೆ. ಹೀಗಾಗಿ ಜನತಾ ದರ್ಶನವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಸಮಯದೊಳಗೆ ಅರ್ಜಿಗಳ ಇತ್ಯರ್ಥ
ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆ ಅಥವಾ ಅಹವಾಲುಗಳಿದ್ದಲ್ಲಿ ಪ್ರತಿ ತಿಂಗಳು ನಡೆವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರ್ಜಿಗಳನ್ನು ಸಲ್ಲಿಸಬಹುದು. ಸ್ವೀಕರಿಸಿದ ಅಹವಾಲನ್ನು ಸಾಧ್ಯವಾದರೆ ಸ್ಥಳದಲ್ಲೇ ಇತ್ಯರ್ಥಪಡಿಸಲಾಗುತ್ತೆ. ಸಮಯದ ಅಗತ್ಯವಿದ್ದರೆ, ಮಾಹಿತಿ ನೀಡಿ ಸಮಯದ ಒಳಗಾಗಿ ಪರಿಹರಿಸಿಕೊಡಬೇಕು. ಇದನ್ನ ಬಿಟ್ಟು, ವಿನಾಃ ಕಾರಣ ಕರ್ತವ್ಯದಲ್ಲಿ ವಿಳಂಬ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಇದೇ ವೇಳೆ ಅಧಿಕಾರಿಗಳಿಗೂ ಸೂಚನೆ ನೀಡಿದರು.
ನೀರಿನ ಸಮಸ್ಯೆ ಶೀಘ್ರ ಬಗೆಹರಿಯುತ್ತೆ
ಇದೇ ವೇಳೆ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ 5 ಯೋಜನೆ ಜಾರಿಗೆ ತಂದಿದೆ. ಇನ್ನು ಈ ಪೈಕಿ 4, ಯೋಜನೆ ಅನುಷ್ಠಾನವಾಗಿದೆ. ಈ ಯೋಜನೆಗಳನ್ನ ಸಾರ್ವಜನಿಕರು ಕೂಡ ಸದುಪಯೋಗ ಮಾಡಿಕೊಳ್ಳಬೇಕು. ತಾವರೆಕೆರೆ ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಶೀಘ್ರದಲ್ಲಿ ನಿವಾರಿಸಲಾಗುವುದು, ಜನರ ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ವೇಳೆ ಸೂಚಿಸಿದರು.
'ಜನತಾ ದರ್ಶನ'ದಲ್ಲಿ ಎಷ್ಟು ಅರ್ಜಿ?
ಇಂದಿನ ಜನತಾ ದರ್ಶನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದ 13, ಪಹಣಿ ತಿದ್ದುಪಡಿ ಸಂಬಂಧಿಸಿದ 9, ಪೋಡಿ ಮುಕ್ತ ಗ್ರಾಮಕ್ಕೆ ಸಂಬಂಧಿಸಿದ 8, ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಬಗ್ಗೆ 7, ಸರ್ಕಾರಿ ಉದ್ದೇಶಕ್ಕೆ ಜಮೀನು ಮಂಜೂರಿಗೆ ಸಂಬಂಧಿಸಿ 6 ಹಾಗೂ ಇತರ ಇಲಾಖೆಗೆ ಸಂಬಂಧಿಸಿದ 24 ಅರ್ಜಿಗಳು ಸೇರಿದಂತೆ ಒಟ್ಟಾರೆ 67 ಅರ್ಜಿಗಳನ್ನ ಸ್ವೀಕರಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಟಿ.ಎನ್. ಕೃಷ್ಣಮೂರ್ತಿ & ಬೆಂಗಳೂರು ದಕ್ಷಿಣ ಉಪ ವಿಭಾಗಧಿಕಾರಿ, ಬೆಂಗಳೂರು ದಕ್ಷಿಣ ತಹಶೀಲ್ದಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ವೇಳೆ ಹಾಜರಿದ್ದರು. ಹಾಗೇ ವಿವಿಧ ಇಲಾಖೆಗಳಿಂದ ರೈತರಿಗೆ & ಮಹಿಳೆಯರಿಗೆ ವಿವಿಧ ಸೌಲಭ್ಯಗಳ ವಿತರಣೆ ಕೂಡ ಈ ಸಂದರ್ಭದಲ್ಲಿ ಮಾಡಲಾಯಿತು.












Click it and Unblock the Notifications