ಬೆಂಗಳೂರಿಗೆ ಹಳ್ಳಿಗಳು & ಹೊಸ ಪ್ರದೇಶ ಸೇರ್ಪಡೆ: ಡಿ.ಕೆ ಶಿವಕುಮಾರ್ ಬಿಗ್ ಗುಡ್ನ್ಯೂಸ್!
ಬೆಂಗಳೂರನ್ನು ಐದು ಮಹಾನಗರ ಪಾಲಿಕೆಗಳನ್ನಾಗಿ ಮಾಡುವ ಮಹತ್ವದ ನಿರ್ಧಾರಕ್ಕೆ ಅಂತಿಮ ಅಂಕಿತವೂ ಬುಧವಾರ ಕರ್ನಾಟಕದ ವಿಧಾನಸಭೆಯಲ್ಲಿ ಆಗಿದೆ. ಬೆಂಗಳೂರು ಐದು ಮಹಾನಗರ ಪಾಲಿಕೆಗಳಾಗಿ ವಿಭಜನೆ ಆಗುವ ಸಂದರ್ಭದಲ್ಲಿಯೇ ಬೆಂಗಳೂರಿಗೆ ಹೊಸ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸೇರ್ಪಡೆಯ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಇದೀಗ ಬೆಂಗಳೂರಿಗೆ ಹೊಸ ಪ್ರದೇಶಗಳನ್ನು ಸೇರಿಸುವ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ.
2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಟನೆಗೆ ತಿದ್ದುಪಡಿ ತರಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಹಳ್ಳಿಗಳು ಹಾಗೂ ಪ್ರದೇಶಗಳನ್ನು ಹೊಸ ಪಾಲಿಕೆಗಳಿಗೆ ಸೇರಿಸಬೇಕು ಎನ್ನುವ ಪ್ರಸ್ತಾವನೆ ಇದೆ.

ಈ ಹಂತದಲ್ಲಿ ಬೆಂಗಳೂರಿನ ಐದು ಹೊಸ ಪಾಲಿಕೆಗಳಿಗೆ ನಾವು ಹಳ್ಳಿಗಳನ್ನು ಸೇರಿಸುವುದಕ್ಕೆ ಹೋಗಿಲ್ಲ. ಪಂಚಾಯಿತಿ ಸದಸ್ಯರೂ ಪಾಲಿಕೆಯ ಸದಸ್ಯರಾಗಬೇಕಾಗುತ್ತದೆ. ಅಲ್ಲದೇ ಈ ಹಂತದಲ್ಲಿ ಹೊಸ ಪ್ರದೇಶಗಳನ್ನು ಸೇರಿಸಿದರೆ ಅದಕ್ಕೆ ಆಕ್ಷೇಪಣೆಗಳು ಹಾಗೂ ಅದನ್ನು ತೆಗೆಯುವುದು ಸೇರಿದಂತೆ ಹಲವು ಗೊಂದಲಗಳು ಸೃಷ್ಟಿ ಆಗಲಿವೆ. ಹೀಗಾಗಿ, ಈ ಹಂತದಲ್ಲಿ ಅಥವಾ ಈಗಾಗಲೇ ಅಸ್ತಿತ್ವದಲ್ಲಿ ಇರುವ 198 ವಾರ್ಡ್ಗಳಿಗೆ ಐದು ಮಹಾನಗರ ಪಾಲಿಕೆಗಳನ್ನಾಗಿ ಮಾಡಿ ಚುನಾವಣೆ ನಡೆಸಲಾಗುವುದು. ಮೊದಲು ಈ ಐದು ಪಾಲಿಕೆಗಳ ಚುನಾವಣೆ ನಡೆದು ಬಿಡಲಿ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮುಂದುವರಿದು ಈ ಐದು ಪಾಲಿಕೆಗಳಿಗೆ ಒಂದು ಬಾರಿ ಚುನಾವಣೆ ನಡೆದು ಆ ಪಾಲಿಕೆಗಳ ಚುನಾವಣಾ ಅವಧಿ ಮುಕ್ತಾಯವಾದ ಮೇಲೆ ಹೊಸ ಪ್ರದೇಶಗಳನ್ನು ಬೆಂಗಳೂರು ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಬೆಂಗಳೂರಿನ ಮಹದೇವಪುರದಲ್ಲಿ ಭಾರೀ ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ. ಆದರೆ ಬೆಂಗಳೂರು ಸೆಂಟ್ರಲ್ನಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆ ಇದೆ. ಬೆಂಗಳೂರ ದಕ್ಷಿಣದಲ್ಲೂ ಅಷ್ಟೊಂದು ಆಸ್ತಿ ತೆರಿಗೆ ಸಂಗ್ರಹ ಇಲ್ಲ. ಒಂದು ಪಾಲಿಕೆಯಿಂದ ಮತ್ತೊಂದು ಪಾಲಿಕೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇದೆಲ್ಲವನ್ನೂ ವಿಚಾರ ಮಾಡಿಯೇ ನಾವು ಹೊಸ ಐದು ಪಾಲಿಕೆಗಳನ್ನು ರಚನೆ ಮಾಡಿದ್ದೇವೆ. ಸರ್ಕಾರವು ಪಾಲಿಕೆಗಳ ಮೇಲೆ ಹಿಡಿತ ಸಾಧಿಸುವುದಿಲ್ಲ. ನಾವು ಎಲ್ಲಾ ಪಾಲಿಕೆಗಳಿಗೂ ಸ್ವಾತಂತ್ರ್ಯ ಕೊಡಲಿದ್ದೇವೆ ಎಂದು ಕರ್ನಾಟಕ ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಈ ಮೂಲಕ ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ ಆಗುವುದು ಫಿಕ್ಸ್ ಆದರೆ ಸ್ವಲ್ಪ ತಡವಾಗಬಹುದು ಅಷ್ಟೇ ಎಂದು ರಾಜ್ಯ ಸರ್ಕಾರ ಹೇಳಿದೆ.












Click it and Unblock the Notifications