ಬೆಂಗಳೂರಲ್ಲಿ 487 ಸರ್ಕಾರಿ ಶಾಲೆಗಳ ಆಸ್ತಿ ರಕ್ಷಿಸಿದ ಜಿ.ಪಂ. ಮಾಜಿ ಅಧ್ಯಕ್ಷ ಟಿ.ಜಿ. ನರಸಿಂಹಮೂರ್ತಿ
ಬೆಂಗಳೂರು, ಏ. 05: ರಾಜಧಾನಿ ಬೆಂಗಳೂರು ನಗರದಲ್ಲಿ 1488 ಸರ್ಕಾರಿ ಶಾಲೆಗಳಿವೆ. ಅರ್ಧದಷ್ಟು ಶಾಲೆಗಳ ಕಟ್ಟಡಗಳಿಗೆ ಶಾಲೆ ಹೆಸರಿನಲ್ಲಿ ದಾಖಲೆಗಳೇ ಇರಲಿಲ್ಲ! ಇದನ್ನು ಅರಿತ ಭೂ ಮಾಫಿಯಾ ಮಕ್ಕಳ ಕಲಿಕಾ ಜಾಗವನ್ನೇ ಲಪಟಾಯಿಸಲು ಸಂಚು ಹಾಕಿತ್ತು. ಇಂತಹ ಸಂದಿಗ್ದ ಸ್ಥಿತಿಯಲ್ಲಿ ತನ್ನ ಸ್ವಂತ ಖರ್ಚಿನಿಂದ ವರ್ಷಗಳ ಕಾಲ ಏಕಾಂಗಿ ಹೋರಾಟ ನಡೆಸಿದ ವ್ಯಕ್ತಿಯೊಬ್ಬ ಬರೋಬ್ಬರಿ 487 ಸರ್ಕಾರಿ ಶಾಲೆಗಳಿಗೆ ಆಸ್ತಿ ಉಳಿಸಿದ್ದಾರೆ. ಇವುಗಳ ಇವತ್ತಿನ ಮಾರುಕಟ್ಟೆ ಬೆಲೆ 500 ಕೋಟಿ ರೂ.ಗೂ ಅಧಿಕ!
ಹೌದು. ಅದು ಬೇರೆ ಯಾರೂ ಅಲ್ಲ. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಶಿಕ್ಷಣ ಮತ್ತು ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ. ನರಸಿಂಹಮೂರ್ತಿ. ಬೆಂಗಳೂರಿನಲ್ಲಿ ಭೂ ಮಾಫಿಯಾ ವಿರುದ್ಧ ಹೋರಾಟ ನಡೆಸಿ ಸರ್ಕಾರಿ ಕನ್ನಡ ಶಾಲೆಗಳ ಆಸ್ತಿಗಳನ್ನು ರಕ್ಷಿಸಿ ಅವುಗಳನ್ನು ರಕ್ಷಿಸಿದ ರೋಚಕ ಸ್ಟೋರಿ ಇಲ್ಲಿದೆ.
ಮಂಗಳವಾರ ಶಿಕ್ಷಕರ ಸದನದಲ್ಲಿ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತರ ವಿಭಾಗದ 161 ಸರ್ಕಾರಿ ಶಾಲೆಗಳಿಗೆ ಆಸ್ತಿ ದಾಖಲೆಗಳನ್ನು ಹಸ್ತಾಂತರಿಸಲಾಯಿತು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮತ್ತು ಕಂದಾಯ ಸಚಿವ ಆರ್. ಅಶೋಕ್ ಸರ್ಕಾರಿ ಶಾಲೆಗಳ ಎಸ್ಡಿಎಂಸಿ ಗಳಿಗೆ ದಾಖಲೆಗಳನ್ನು ಹಸ್ತಾಂತರಿಸಿದರು. ಸರ್ಕಾರಿ ಶಾಲೆಗಳ ಆಸ್ತಿ ಉಳುವಿನ ಹಿಂದೆ ಇರೋದು ಟಿ.ಜಿ ನರಸಿಂಹಮೂರ್ತಿ ಅವರ ಪರಿಶ್ರಮ ಮತ್ತು ಏಕಾಂಗಿ ಹೋರಾಟ.

ರಾಜ್ಯದಲ್ಲಿ 55,000 ಸರ್ಕಾರಿ ಶಾಲೆಗಳಿವೆ. ಅವುಗಳ ಪೈಕಿ ಸುಮಾರು 12 ಸಾವಿರ ಸರ್ಕಾರಿ ಶಾಲೆಗಳು ಇರುವ ಜಾಗ ಶಾಲೆಗಳ ಹೆಸರಿಗೆ ನೋಂದಣಿಯಾಗಿಲ್ಲ. ಹಳ್ಳಿ ಪ್ರದೇಶದ ಸರ್ಕಾರಿ ಶಾಲೆಗಳಿಗೆ ದಾಖಲೆ ಇಲ್ಲದಿದ್ದರೂ ಕೇಳುವರು ಇಲ್ಲ. ಆದರೆ ಬೆಂಗಳೂರಿನಲ್ಲಿ ಇಂಚು ಭೂಮಿ ಬೆಲೆ ಸಾವಿರಗಳ ಗಡಿ ದಾಟಿದೆ. ದಶಕಗಳ ಹಿಂದೆ ಸರ್ಕಾರಿ ಶಾಲೆಗಳಿಗೆ ಮಾತಿನ ಮೂಲಕವೇ ನೀಡಿದ್ದ ಜಮೀನಿನಲ್ಲಿ ಶಿಕ್ಷಣ ಇಲಾಖೆ ಶಾಲೆಗಳನ್ನು ನಿರ್ಮಿಸಿತ್ತು. ಆದರೆ, ಜಮೀನು ಬೆಲೆ ದುಬಾರಿಯಾಗುತ್ತಿದ್ದಂತೆ ಜಮೀನು ದಾನ ಮಾಡಿದವರ ಮಕ್ಕಳು ಮರಿ ಮಕ್ಕಳು ಆಸ್ತಿ ವಾಪಸು ಪಡೆಯುವ ಕಾರ್ಯಕ್ಕೆ ಕೈ ಹಾಕಿದ್ದರು. ಬೆಂಗಳೂರಿನ ನಗರ ವಿಚಾರಕ್ಕೆ ಬಂದ್ರೆ ಸುಮಾರು 528 ಕ್ಕೂ ಅಧಿಕ ಶಾಲೆಗಳ ಹೆಸರಿನಲ್ಲಿ ದಾಖಲೆಗಳೇ ಇರಲಿಲ್ಲ.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ತಾವರೆಕೆರೆ ಟಿ.ಜಿ. ನರಸಿಂಹಮೂರ್ತಿ ಅವರ ಗಮನಕ್ಕೆ ಈ ವಿಚಾರ ಬಿದ್ದಿದ್ದೇ ತಡ, ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಶಾಲೆಗಳ ಮಾಹಿತಿ ಸಂಗ್ರಹಿಸಿದ್ದಾರೆ. ಯಾವ ಶಾಲೆಗಳಿಗೆ ದಾಖಲೆಗಳು ಇಲ್ಲ ಎಂಬುದರ ಮಾಹಿತಿ ಕಲೆ ಹಾಕಿದ ಕೂಡಲೇ ವೈಯಕ್ತಿಕವಾಗಿ ಅವರೇ ಸ್ವತಃ ಸರ್ಕಾರಿ ಶಾಲೆಗಳಿಗೆ ಆಸ್ತಿ ನೋಂದಣಿ ಮಾಡುವಂತೆ 487 ಕ್ಕೂ ಅಧಿಕ ಕೇಸು ದಾಖಲಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ ಆರು ವಕೀಲರನ್ನೂ ಪೂರ್ಣ ಪ್ರಮಾಣವಾಗಿ ನೇಮಿಸಿ ಕಾನೂನು ಸಮರ ಮಾಡಿಸಿ ಜಯಿಸಿದ್ದಾರೆ. ಸರ್ಕಾರಿ ಶಾಲೆಗಳ ಆಸ್ತಿ ಉಳಿಸುವ ನರಸಿಂಹಮೂರ್ತಿ ಅವರ ಕಾರ್ಯಕ್ಕೆ ಕೆಲವು ಕಂದಾಯ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಸತತ ಮೂರು ವರ್ಷ ನಡೆಸಿದ ಹೋರಾಟದ ಫಲವಾಗಿ ಸುಮಾರು ಈವರೆಗೂ 357 ಸರ್ಕಾರಿ ಶಾಲೆಗಳ ಆಸ್ತಿಗಳನ್ನು ಶಾಲೆಗಳ ಹೆಸರಿಗೆ ನೋಂದಣಿ ಮಾಡಿಸಿ ಯಶಸ್ವಿಯಾಗಿದ್ದಾರೆ. ಈ ಆಸ್ತಿಗಳ ಮಾರುಕಟ್ಟೆ ಮೌಲ್ಯ ಇವತ್ತಿನ ಲೆಕ್ಕಾಚಾರದಲ್ಲಿ 500 ಕೋಟಿ ರೂ. ಗಡಿದಾಟುತ್ತದೆ. ಮಂಗಳವಾರ ಶಿಕ್ಷಕರ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಷ್ಟೂ ಸರ್ಕಾರಿ ಶಾಲಾ ಎಸ್ ಡಿಎಂಸಿಗಳಿಗೆ ದಾಖಲೆಗಳನ್ನು ಕಂದಾಯ ಸಚಿವ ಆರ್. ಅಶೋಕ್ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಸ್ತಾಂತರಿಸಿದ್ದು ಗಮನಾರ್ಹ.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ನನಗೆ ಸರ್ಕಾರಿ ಶಾಲೆಗಳ ಹೆಸರಿನಲ್ಲಿ ಆಸ್ತಿ ದಾಖಲೆಗಳು ಇಲ್ಲದಿರುವ ವಿಚಾರ ಗೊತ್ತಾಯಿತು. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡೆ. ಬೆಂಗಳೂರಿನಲ್ಲಿ ಭೂ ಮಾಫಿಯಾ ವಿರುದ್ಧ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ನಾನೇ ಸ್ವತಃ ಶಾಲೆಗಳ ಪರವಾಗಿ ಕೇಸು ದಾಖಲಿಸಿದೆ. ಆರು ವಕೀಲರನ್ನು ನೇಮಿಸಿದೆ. ಭೂ ಮಾಫಿಯಾದಿಂದ ಬೆದರಿಕೆ ಕರೆಗಳು ಬಂದರೂ ಜಗ್ಗಲಿಲ್ಲ. ಅಂತಿಮವಾಗಿ ಸರ್ಕಾರಿ ಶಾಲೆಗಳಿಗೆ ಆಸ್ತಿ ಉಳಿಸಿ ಕೊಟ್ಟ ಸಂತಸ ನನಗಿದೆ ಎಂದು ಟಿ.ಜಿ. ನರಸಿಂಹಮೂರ್ತಿ 'ಒನ್ಇಂಡಿಯಾ' ಕನ್ನಡಕ್ಕೆ ತಿಳಿಸಿದ್ದಾರೆ.
ರಾಜ್ಯದಲ್ಲಿ 12 ಸಾವಿರ ಸರ್ಕಾರಿ ಶಾಲೆಗಳ ಹೆಸರಿನಲ್ಲಿ ಆಸ್ತಿಯ ದಾಖಲೆಗಳು ಇಲ್ಲ. ಅತಿ ತ್ವರಿತವಾಗಿ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆ ಒಗ್ಗೂಡಿ ಶಾಲೆಗಳ ಆಸ್ತಿಗಳನ್ನು ಉಳಿಸಬೇಕಿದೆ. ಇಲ್ಲದಿದ್ದರೆ ಆಸ್ತಿ ಬೆಲೆ ಹೆಚ್ಚಾದರೆ,, ಅದರ ಮೂಲ ಮಾಲೀಕರ ಸಂಬಂಧಿಕರು ಆಸ್ತಿಯನ್ನು ಪಡೆಯಲು ಮುಂದಾಗುತ್ತಾರೆ. ಈ ಬಗ್ಗೆ ಇಲಾಖೆ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂಬ ಸಲಹೆಯನ್ನು ನರಸಿಂಹಮೂರ್ತಿ ನೀಡಿದ್ದಾರೆ.

ಅಪ್ಪುಗೆ ಅರ್ಪಣೆ :
ಸರ್ಕಾರಿ ಶಾಲೆಗಳ ರಾಯಭಾರಿ ನಟ ಪುನೀತ್ ರಾಜ್ ಕುಮಾರ್ ಆಗಿದ್ದರು. ಅವರ ಗಮನಕ್ಕೂ ಈ ವಿಚಾರ ತಂದಾಗ ನಮ್ಮ ಆಸ್ತಿಗಳಿಗೆ ದಾಖಲೆ ಮಾಡಿಸುವುದೇ ಕಷ್ಟದ ಕೆಲಸ. ನೀವು ಇಷ್ಟು ಸರ್ಕಾರಿ ಶಾಲೆಗಳ ಅಸ್ತಿ ಉಳಿಸುವುದು ಸಾಧ್ಯವೇ ಎಂದಿದ್ದರು. ಸರ್ಕಾರಿ ಶಾಲೆಗಳ ದಾಖಲೆ ಹಸ್ತಾಂತರ ಕಾರ್ಯಕ್ರಮಕ್ಕೆ ನಾನು ಖಂಡಿತ ಬರುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಅವರು ನಮ್ಮೊಂದಿಗೆ ಇಲ್ಲ. ಹೀಗಾಗಿ ಇವತ್ತು ಪ್ರಾಯೋಗಿಕವಾಗಿ 361 ಸರ್ಕಾರಿ ಶಾಲೆಗಳಿಗೆ ದಾಖಲೆಗಳನ್ನು ಹಸ್ತಾಂತರಿಸಿದ್ದು ನಟ ಅಪ್ಪುಗೆ ಅರ್ಪಿಸುತ್ತಿದ್ದೇವೆ ಎಂದು ನಟ ಪುನೀತ್ ಅವರನ್ನು ನರಸಿಂಹಮೂರ್ತಿ ಸ್ಮರಿಸಿದರು.
Recommended Video













Click it and Unblock the Notifications