ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿ: ಮಧು ಬಂಗಾರಪ್ಪ ಅಪ್ಡೇಟ್ಸ್
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಮಾತ್ರವೇ ದ್ವಿಭಾಷಾ ನೀತಿಯನ್ನು ಇದೇ ಶೈಕ್ಷಣಿಕ ವರ್ಷದಲ್ಲಿ (2026-27) ಜಾರಿ ತರಲಾಗಿದೆ. ಮುಂದಿನ ವರ್ಷದೊಳಗೆ ರಾಜ್ಯದ ಎಲ್ಲ ಶಾಲೆಗಳಲ್ಲೂ ಈ ನೀತಿ ಅನುಷ್ಠಾನವನ್ನು ವಿಸ್ತರಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ಎಸ್ಎಸ್ಎಲ್ಸಿ ಪರೀಕ್ಷೆಗು ಮುನ್ನ ದ್ವಿಭಾಷಾ ನೀತಿ ಜಾರಿಯು ಹೆಚ್ಚು ಸದ್ದು ಮಾಡಿತ್ತು. ಕೋರ್ಟ್ ನಿರ್ದೇಶನದ ಬಳಿಕ ಆವತ್ತಿನ ನಿರ್ಧಾರದಿಂದ ಹಿಂದೆ ಸರಿದಿದ್ದ ಶಿಕ್ಷಣ ಇಲಾಖೆ ರಾಜ್ಯವ್ಯಾಪಿ ಶಿಕ್ಷಣ ದ್ವಿಭಾಷಾ ನೀತಿ ಜಾರಿಗೊಳಿಸಲು ಸಜ್ಜಾಗುತ್ತಿದೆ.

ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಜೀರುಂಡೆ ಪುಸ್ತಕ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಚಿವರು ಕಾರ್ಯಕ್ರಮ ಉದ್ಘಾಟಿಸಿ 'ಶೂದ್ರ ಬಂಡಾಯ' ಕೃತಿಯನ್ನು ಬಿಡುಗಡೆಗೊಳಿಸಿದರು.
ತಳಮಟ್ಟದಿಂದಲೇ ಮಕ್ಕಳಿಗೆ ಇಂಗ್ಲಿಷ್ ಕಲಿಕೆ
ಈ ವೇಳೆ ಮಾತನಾಡಿದ ಸಚಿವರು, ರಾಜ್ಯದ ಕೆಲವು ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲಾಗಿದೆ. ಮುಂದಿನ ವರ್ಷದೊಳಗೆ ಎಲ್ಲ ಶಾಲೆಗಳಲ್ಲೂ ಈ ನೀತಿ ಜಾರಿಗೆ ಕ್ರಮ ಕೈಗೊಳ್ಳಿದ್ದೇವೆ. ಗ್ರಾಮೀಣ ಭಾಗದ ಮಕ್ಕಳಿಗೆ ವ್ಯವಹಾರಿಕ ಮತ್ತು ಔದ್ಯೋಗಿಕವಾಗಿ ಇಂಗ್ಲಿಷ್ ಕಲಿಕೆ ಅಗತ್ಯ. ಈ ಕಾರಣದಿಂದ ಜಾರಿಗೊಳಿಸುವ ದ್ವಿಭಾಷಾ ನೀತಿಯಿಂದ ಮಕ್ಕಳು ತಳಮಟ್ಟದಿಂದಲೆ ಇಂಗ್ಲಿಷ್ ಕಲಿಯಲಿದ್ದಾರೆ ಎಂದು ಅವರು ವಿವರಿಸಿದರು.
ಶಿಕ್ಷಣದಿಂದ ಸಾಮಾಜಿಕ ನ್ಯಾಯ
ಗ್ರಾಮೀಣ ಮಕ್ಕಳು ಒಳಗೊಂಡಂತೆ ಎಲ್ಲರಿಗೂ ಇಂಗ್ಲಿಷ್ ಕಲಿಕೆ ಪೂರಕವಾಗುವ ಈ ನೀತಿಯನ್ನು ಒಂದೇ ವರ್ಷದಲ್ಲಿ ಶೇ.100 ರಷ್ಟು ಅನುಷ್ಠಾನಕ್ಕೆ ತರಲಿದ್ದೇವೆ ಎಂದರು. ಸಮಾಜದಲ್ಲಿ ಸಮಾನತೆ ತರಲು ಶಿಕ್ಷಣವೇ ಪ್ರಬಲ ಅಸ್ತ್ರ. ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ. ಶೂದ್ರ ಬಂಡಾಯದಂತಹ ಕೃತಿಗಳು ಓದುಗರಲ್ಲಿ ವೈಚಾರಿಕ ಕ್ರಾಂತಿಯನ್ನುಂಟು ಮಾಡುತ್ತವೆ. ಸರ್ಕಾರವು ಸರ್ವರಿಗೂ ಸಮಾನ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇಂತಹ ಸಾಮಾಜಿಕ ಕಳಕಳಿಯ ಕೃತಿಗಳು ನಮ್ಮ ಆಲೋಚನೆಗಳಿಗೆ ಬಲ ತುಂಬುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರಖ್ಯಾತ ಚಿಂತಕರಾದ ಶ್ರೀ ಕಂಚ ಐಲಯ್ಯ ಶೆಫರ್ಡ್ ಅವರು ಭಾರತೀಯ ಸಮಾಜದಲ್ಲಿ ಶೂದ್ರ ಸಮುದಾಯಗಳ ಐತಿಹಾಸಿಕ ಹಿನ್ನೆಲೆ, ಅವರ ಶ್ರಮ, ಸಂಸ್ಕೃತಿ ಮತ್ತು ಅವರು ಎದುರಿಸುತ್ತಿರುವ ಸಾಮಾಜಿಕ ಸವಾಲುಗಳ ಕುರಿತು ಈ ಕೃತಿಯಲ್ಲಿ ಆಳವಾಗಿ ವಿಶ್ಲೇಷಿಸಿದ್ದಾರೆ. ಜೊತೆಗೆ ಜಾತಿ ಪದ್ಧತಿಯ ಬೇರುಗಳನ್ನು ಗುರುತಿಸುತ್ತಾ, ಸಾಮಾಜಿಕ ಸಮಾನತೆಯನ್ನು ಸಾಧಿಸಲು ಶೂದ್ರ ಸಮುದಾಯಗಳು ಒಗ್ಗೂಡಿ ನಡೆಸಬೇಕಾದ ಬೌದ್ಧಿಕ ಮತ್ತು ಸಾಂಸ್ಕೃತಿಕ ಹೋರಾಟದ ಅಗತ್ಯವನ್ನು ಇಲ್ಲಿ ಒತ್ತಿಹೇಳಿದ್ದಾರೆ ಎಂದು ಕೃತಿ ಮತ್ತು ಲೇಖಕರ ಕುರಿತು ಮೆಚ್ಚುಗೆ ಮಾತುಗಳನ್ನಾಡಿದರು. .
ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಮೀಡಿಯಂ ತರಬೇತಿ
ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲು ಮುಂದಾಗಿದೆ. ಮಕ್ಕಳಿಗೆ ಇಂಗ್ಲಿಷ್ ಬೋಧಿಸಲು ಅನುಕೂಲವಾಗುವಂತೆ ಶಿಕ್ಷಕರಿಗೆ ಈಗಾಗಲೇ ಇಂಗ್ಲಿಷ್ ತರಬೇತಿ ನೀಡಲಾಗುತ್ತಿದೆ. ಆರಂಭದಲ್ಲಿ 15 ಶಾಲೆಗಳಲ್ಲಿ ನೀತಿ ಆರಂಭಿಸಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ 1,55,950 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಮೀಡಿಯಂ ಟೀಚರ್ಸ್ ಟ್ರೈನಿಂಗ್ (EMTT) ಕೊಡಲಾಗಿದೆ. ಒಟ್ಟು ಮೂರು ಹಂತಗಳಲ್ಲಿ ಶಿಕ್ಷಕರು ತರಬೇತಿ ಪಡೆದಿದ್ದಾರೆ. ಜಾಗತಿಕವಾಗಿ ಸರ್ಕಾರಿ ಶಾಲೆಯ, ಗ್ರಾಮೀಣ ಮಕ್ಕಳು ಗುರುತಿಸಿಕೊಳ್ಳಲು, ಕಲಿಯಲು ಹಾಗೂ ಭವಿಷ್ಯ ರೂಪಿಸಿಕೊಳ್ಳಲು ಈ ದ್ವಿಭಾಷಾ ನೀತಿ ಸಹಾಯಕಾರಿ ಎಂದು ಇಲಾಖೆ ತಿಳಿಸಿದೆ.













Click it and Unblock the Notifications