ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ: ಖಂಡ್ರೆ
ಬೆಂಗಳೂರು, ಮೇ 10: ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ, ಇರುವಾಗಲೇ ಬದುಕು ಕಲ್ಪಿಸುವುದು ಸರ್ಕಾರದ ಕರ್ತವ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಮರಳಲಿಚ್ಚಿಸುವ ಕನ್ನಡಿಗರಿಗೆ ಸರ್ಕಾರದಿಂದ ಅನ್ಯಾಯವಾಗಿದೆ. ಲಾಕ್ ಡೌನ್ ಅವಧಿಯಲ್ಲಿ ದುಡಿಯುವ ಕೈಗೆ ಕೆಲಸ ಇಲ್ಲದೆ ಸರ್ಕಾರ ಅಥವಾ ದಾನಿಗಳು ನೀಡುವ ದವಸ ಧಾನ್ಯಕ್ಕೆ ಕೈಯೊಡ್ಡಲು ಮನಸ್ಕೊಪ್ಪದೆ ಸಾವಿರಾರು ಸ್ವಾಭಿಮಾನಿ ಕಾರ್ಮಿಕರು ತಮ್ಮ ತಮ್ಮ ಊರಿಗೆ ಮರಳಲು ಉತ್ಸುಕರಾಗಿದ್ದು, ಇವರ ವಿಚಾರದಲ್ಲಿ ಸರ್ಕಾರ ಮಾನವೀಯತೆಯಿಂದ ವರ್ತಿಸಬೇಕು ಎಂದಿದ್ದಾರೆ.
ಹೊರ ರಾಜ್ಯಗಳಲ್ಲಿ ಹೋಗಿ ದುಡಿಯುತ್ತಿರುವ ಲಕ್ಷಾಂತರ ಕನ್ನಡಿಗರ ಪೈಕಿ ಪ್ರಸ್ತುತ 91,077ಕ್ಕೂ ಹೆಚ್ಚು ಜನರು ರಾಜ್ಯಕ್ಕೆ ಮರಳಲು ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಈವರೆಗೆ 706 ಜನರಿಗೆ ಅನುಮತಿ ನೀಡಿದೆ. ಇನ್ನೂ 51,241 ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಮಾಡದೆ ಸರ್ಕಾರ ವಿಳಂಬ ಮಾಡುತ್ತಿದೆ. ಕೆಲವು ಅರ್ಜಿಗಳು ಜಿಲ್ಲಾಧಿಕಾರಿಗಳ ಬಳಿಯೇ ಇದೆ ಮತ್ತೆ ಕೆಲವು ನೋಡಲ್ ಅಧಿಕಾರಿಗಳ ಬಳಿ ಇವೆ ಎಂದರು.

ಕೋಲ್ಕತ್ತಾದ ಮುಖ್ಯಮಂತ್ರಿ ತಮ್ಮ ರಾಜ್ಯದವರು ಬರುವ ರೈಲಿಗೆ ಪ್ರವೇಶ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವರು ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಇರುವ ಕರ್ನಾಟಕದಲ್ಲಿ 52 ಸಾವಿರ ಅರ್ಜಿ ಬಾಕಿ ಇರುವುದು ಕೇಂದ್ರ ಗೃಹ ಸಚಿವರ ಗಮನಕ್ಕೆ ಬಂದಿಲ್ಲವೇ? ಇದು ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದರು. ವಿದೇಶಗಳಿಂದ ಬರುವವರಿಗೆ ಎಲ್ಲ ರೀತಿಯ ಅನುಕೂಲತೆ ಕಲ್ಪಿಸುವ ಸರ್ಕಾರ, ಬಡವರ ವಿಚಾರದಲ್ಲಿ ಹೀಗೆ ತಾರತಮ್ಯ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.
ಅದೇ ರೀತಿ ರಾಜ್ಯದಿಂದ ತಮ್ಮ ಊರುಗಳಿಗೆ ಹೋಗಲು ಬಯಸುವವರಿಗೂ ಸರ್ಕಾರ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅವರೆಲ್ಲರೂ ಹೊರಟು ಹೋದರೆ, ಕಾರ್ಮಿಕರ ಸಮಸ್ಯೆ ಬರುತ್ತದೆ ಎಂಬ ವಾದ ಇದೆ. ಆದರೆ, ಹೊರ ರಾಜ್ಯಗಳಿಂದ ಬರುವ ರಾಜ್ಯದ ಕಾರ್ಮಿಕರಿಗೆ ಉದ್ಯೋಗ ಕೊಡಿ. ನಮ್ಮ ರಾಜ್ಯದವರಿಗೆ ಉದ್ಯೋಗ ಭದ್ರತೆ ಸಿಕ್ಕರೆ ಅವರೇಕೆ ವಲಸೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.
ಬೇರೆ ರಾಜ್ಯಗಳಿಂದ ಬರುವವರನ್ನು ಅವರವರ ಜಿಲ್ಲೆಗಳ ಹೊರವಲಯದಲ್ಲಿ ಅಥವಾ ನಿರ್ಜನವಾದ ಕಟ್ಟಡಗಳಲ್ಲಿ ಕ್ಯಾರಂಟೈನ್ ಮಾಡಿ, ಶಿಷ್ಟಾಚಾರ ಪಾಲಿಸಿ, ಆದರೆ ಅವರ ಮಾನವ ಹಕ್ಕುಗಳನ್ನು ದಮನ ಮಾಡಬೇಡಿ ಎಂದು ಹೇಳಿದರು.












Click it and Unblock the Notifications