E-RT Bus: ರಾಜ್ಯದ ಅವಳಿ ನಗರಕ್ಕೆ ಹೊಸ ಬಸ್ ಯೋಜನೆ: ಡಿಪಿಆರ್ಗೆ ಸಿಎಂ ಸೂಚನೆ
ಬೆಂಗಳೂರು, ಏಪ್ರಿಲ್ 13: ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳ ನಡುವೆ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ (Electric Rapid Transit : e-RT) ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇಲ್ಲಿ ಹೊಸ ಸಾರಿಗೆ ಸೌಲಭ್ಯ ಪರಿಚಯಿಸಲು ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಈಗಾಗಲೇ ವಿದೇಶಗಳಿಗೂ ಹೋಗಿ ಪರಿಶೀಲಿಸಿದ್ದಾರೆ. ಇದೀಗ e-RT ಸಾರಿಗೆ ಯೋಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಹತ್ವದ ವಿಷಯ ಚರ್ಚಿಸಿದ ಬಳಿಕ ಉದ್ದೇಶಿತ ಯೋಜನೆಯ ಸಾಧ್ಯಾ ಸಾಧ್ಯತೆ ಮತ್ತು ಅವಕಾಶಗಳನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸಭೆಯಲ್ಲಿ ವಿವರಿಸಿದರು.

ಈ ವೇಳೆ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ ಎಲೆಕ್ಟ್ರಿಕ್ ರಾಪಿಡ್ ಟ್ರಾನ್ಸಿಟ್ (e-RT) ಆರಂಭಿಸುವ ಕುರಿತು ಎಚ್ಇಎಸ್ಎಸ್ ಎಜಿ, ಹೆಸ್ ಇಂಡಿಯಾ ಮತ್ತು ಎಸ್ಎಸ್ಬಿ ಎಜಿ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಯೋಜನೆ ಅನುಷ್ಠಾನ ಕುರಿತು ಮೂರು ತಿಂಗಳ ಒಳಗಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ಇದು ಸಂಪೂರ್ಣ ವಿದ್ಯುತ್ ಚಾಲಿತ ವ್ಯವಸ್ಥೆಯಾಗಿದೆ. ನಗರದಲ್ಲಿ ಎತ್ತರಿಸಿದ ರಸ್ತೆ ಹಾಗೂ ಇತರೆಡೆ ನೆಲದ ಮೇಲೆ ಸಂಚರಿಸಲಿದೆ. ಇದರಲ್ಲಿ 250 ಜನರು ಒಮ್ಮೆಗೆ ಪ್ರಯಾಣಿಸಬಹುದಾಗಿದೆ. ಕಳೆದ ಒಂದು ವರ್ಷದಿಂದ ಯೋಜನೆ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗಿದೆ.

ಮೆಟ್ರೊ ಮಾದರಿಯ ಈ ಸಂಚಾರ ವ್ಯವಸ್ಥೆ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಕಂಪನಿಗಳ ಪ್ರತಿನಿಧಿಗಳು ಮಾಹಿತಿ ನೀಡಿದರು. ಹುಬ್ಬಳ್ಳಿ ಧಾರವಾಡದಲ್ಲಿ ಈ ಯೋಜನೆ ಯಶಸ್ವಿಯಾದರೆ, ರಾಜ್ಯದ ಇತರ ಎರಡನೇ ಹಂತದ ನಗರಗಳಿಗೂ ಇದನ್ನು ವಿಸ್ತರಿಸಬಹುದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಈ ಸಭೆಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್ ಸಿ ಮಹಾದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೆಚ್ಇಎಸ್ಎಸ್ ಎಜಿ ಕಂಪನಿಯ ಸುಸಾನ್ ವಾನ್ ಸುರಿ, ಎಸ್ಎಸ್ಬಿ ಕಂಪನಿಯ ನಿರ್ದೇಶಕ ಬುರಾಕ್ ಸೆನಸರ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications