ಪ್ರಜ್ವಲ್ ಗೆ ಅಸೆಂಬ್ಲಿ ಟಿಕೆಟ್, ದೊಡ್ಡ ಗೌಡರಿಗೆ ಕಾರ್ಯಕರ್ತರ ಆಗ್ರಹ
ಬೆಂಗಳೂರು, ಫೆಬ್ರವರಿ 28: 'ದೇವೇಗೌಡರ ಕಣ್ಣು ಸಂಸತ್ತಿನ ಮ್ಯಾಲೆ, ಪ್ರಜ್ವಲ್ ಕಣ್ಣು ಅಸೆಂಬ್ಲಿ ಮ್ಯಾಲೆ' ಎಂಬ ಮಾತು ಪದ್ಮನಾಭನಗರದ ಸುತ್ತಾ ಮುತ್ತಾ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಜೆಡಿಎಸ್ ಕಾರ್ಯಕರ್ತರು ದಿನ ಬಿಟ್ಟು ದಿನ, ಪದ್ಮನಾಭನಗರದ ದೇವೇಗೌಡ ಮನೆ ಮುಂದೆ ಜಮಾಯಿಸಿ, ಪ್ರಜ್ವಲ್ ರೇವಣ್ಣ ಅವರಿಗೆ ಅಸೆಂಬ್ಲಿ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ.
ಜೆಡಿಎಸ್ ಪಕ್ಷ ಬಲವರ್ಧನೆಗಾಗಿ ರಾಜ್ಯ ಪ್ರವಾಸದಲ್ಲಿ ತೊಡಗಿರುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ತಮ್ಮ ಚುನವಾವಣಾ ಸ್ಪರ್ಧೆಗೆ ಇಳಿಯುವ ಊಹಾಪೋಹಕ್ಕೆ ಆಗಾಗ ತೆರೆ ಎಳೆಯುತ್ತಾ ಬಂದಿದ್ದಾರೆ. ಆದರೆ, ಕಾರ್ಯಕರ್ತರು ಕೇಳಬೇಕಲ್ಲ. ಹೇಳಿ ಕೇಳಿ ಜೆಡಿಎಸ್ ನಲ್ಲಿ ಕಾರ್ಯಕರ್ತರ ಒತ್ತಾಯ, ಒತ್ತಡ, ಆಗ್ರಹದ ಮೇರೆಗೆ ಈ ಹಿಂದೆ ಕೂಡಾ ದೇವೇಗೌಡರ ಕುಟುಂಬದವರು ಚುನಾವಣಾ ಕಣಕ್ಕೆ ಇಳಿದಿದ್ದರು, ಕ್ಷೇತ್ರ ಬದಲಾಯಿಸಿದ್ದರು ಎಂಬುದು ಈಗ ಇತಿಹಾಸ.
In Pics : ಯಾದಗಿರಿಯ ಶಹಾಪುರದಲ್ಲಿ ಕುಮಾರಸ್ವಾಮಿ ಪ್ರವಾಸ
"ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಆಸಕ್ತಿಯಿಲ್ಲ. ನನಗೂ 86 ವರ್ಷ ವಯಸ್ಸಾಗಿದೆ. ಆದ್ದರಿಂದ ಪ್ರಜ್ವಲ್ ಕಣಕ್ಕಿಳಿಸುವ ಬಗ್ಗೆ ಯೋಚನೆ ಇದೆ," ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಕೆಲ ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ.
ಪ್ರಜ್ವಲ್ ಎಲ್ಲಿಂದ ಸ್ಪರ್ಧೆ?
ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್. ನಗರ) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ, ಜೆ.ಡಿ.ಎಸ್. ಕಾರ್ಯಕರ್ತರು ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡರ ಪದ್ಮನಾಭನಗರದಲ್ಲಿರುವ ನಿವಾಸದ ಎದುರು ಧರಣಿ ನಡೆಸಿದ್ದರು.
ದೇವೇಗೌಡರ ನಿವಾಸದ ಎದುರು ಆರ್.ಆರ್. ನಗರದ ಜೆ.ಡಿ.ಎಸ್. ಪಕ್ಷದ ಮುಖಂಡ ಮಂಜುನಾಥ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಹೋರಾಟ ಮಾಡುತ್ತಾ ಬಂದಿದ್ದಾರೆ.
ಚುನಾವಣೆ ಬಹಿಷ್ಕರಿಸುತ್ತೇವೆ ಎಂದ ಕಾರ್ಯಕರ್ತರು
ಆರ್. ಆರ್. ನಗರದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಿದರೆ ಶ್ರಮವಹಿಸಿ ಅವರನ್ನು ಗೆಲ್ಲಿಸುತ್ತೇವೆ. ಇಲ್ಲವಾದಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಧರಣಿ ನಿರತರೊಂದಿಗೆ ಮಾತನಾಡಿದ ದೇವೇಗೌಡರು, ನಿಮ್ಮ ಹೋರಾಟಕ್ಕೆ ಸಮಹಮತವಿದೆ. ಆದರೆ, ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನನ್ನ ವಿರುದ್ಧ ಪಿತೂರಿ ನಡೆದಿದೆ
'ನಾನು ರಾಜಕೀಯವಾಗಿ ಬೆಳೆದೆರೆ ತಮ್ಮ ಕಳ್ಳಾಟ ನಡೆಯುವುದಿಲ್ಲವೆಂದು ಕೆಲವರು ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ನನ್ನ ಶಕ್ತಿ ಕುಂದಿಸುವ ಕೆಲಸ ಮಾಡಿದ್ದಾರೆ ಆದರೆ ನಾನು ಈವರೆಗೆ ಬಿದ್ದಿಲ್ಲ, ಬೀಳುವುದಿಲ್ಲ. ತಾಯಿ ರಾಜರಾಜೇಶ್ವರಿ ಆಶೀರ್ವಾದ ಮಾಡಿದರೆ ನಿಮ್ಮ ಮಗನಾಗಿ ದುಡಿಯುತ್ತೇನೆ' ಎಂದು ಪ್ರಜ್ವಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಇದು ಹುಣಸೂರು ಕ್ಷೇತ್ರ ಸೂಟ್ ಕೇಸ್ ಡೈಲಾಗ್ ಕಿರಿಕಿರಿ ನಂತರ ಬಂದ ಮಾತುಗಳು.
ಲೋಕಸಭೆಗೆ ಸ್ಪರ್ಧಿಸುವುದಂತೂ ಖಚಿತ
ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಈ ಹಿಂದೆ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರಜ್ವಲ್ ಕೂಡಾ ಒಲವು ತೋರಿದ್ದರು. ಆದರೆ, ಹುಣಸೂರಿನಲ್ಲಿ ಸ್ಪರ್ಧೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ ಎನ್ನಲಾಗಿದೆ. ಆದರೆ, ಪ್ರಜ್ವಲ್ ಅವರ ತಾಯಿ ಭವಾನಿ ಅವರಿಗೆ ತಮ್ಮ ಮಗ ಬೇಲೂರಿನಿಂದ ಸ್ಪರ್ಧಿಸಲಿ ಎಂಬ ಆಸೆಯಿದೆ. ಅಸೆಂಬ್ಲಿಗೆ ಸ್ಪರ್ಧಿಸುವುದು ಸಾಧ್ಯವಾಗದಿದ್ದರೆ, ಲೋಕಸಭೆಗೆ ಸ್ಪರ್ಧಿಸುವುದಂತೂ ಖಚಿತ.
ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ