ಡ್ರೋನ್ ಪ್ರತಾಪ್ ವಶಕ್ಕೆ, ಬೆಂಗಳೂರಿಗೆ ಕರೆತರುತ್ತಿರುವ ಪೊಲೀಸರು!
ಬೆಂಗಳೂರು, ಜು. 20: ಇಡೀ ನಾಡಿನ ಜನತೆಗೆ ಚಳ್ಳೆ ಹಣ್ಣು ತಿನ್ನಿಸಿರುವ ಡ್ರೋನ್ ಪ್ರತಾಪ್ ಕೊನೆಗೂ ಪತ್ತೆಯಾಗಿದ್ದಾನೆ. ವಂಚನೆ ಸೇರಿದಂತೆ ಹಲವು ದೂರುಗಳು ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರು, ಮಂಡ್ಯ ಸೇರಿದಂತೆ ಹಲವೆಡೆ ದಾಖಲಾಗಿದ್ದವು. ಜೊತೆಗೆ ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಕ್ವಾರಂಟೈನ್ ನಿಯಮಗಳ ಉಲ್ಲಂಘನೆ ಕುರಿತು ಎಫ್ಐಆರ್ ಕೂಡ ದಾಖಲಾಗಿತ್ತು.
Recommended Video
ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ತನ್ನ ಸುಳ್ಳು ಭಾಷಣಗಳಿಂದಲೇ ಜನರನ್ನು, ಸಂಘ-ಸಂಸ್ಥೆಗಳನ್ನು ನಂಬಿಸಿ ವಂಚಿಸಿದ್ದ ಆರೋಪಗಳನ್ನು ಡ್ರೋನ್ ಪ್ರತಾಪ್ ಎದುರಿಸುತ್ತಿದ್ದಾರೆ. ಸದ್ಯ ಅವನನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.

ದೂರುಗಳು ದಾಖಲು
ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರು ಹಾಗೂ ಮಂಡ್ಯದಲ್ಲಿ ದೂರು ದಾಖಲಾಗಿದ್ದವು. ಸರ್ಕಾರ, ಸಂಘ-ಸಂಸ್ಥೆಗಳು ಹಾಗೂ ಜನರನ್ನು ವಂಚಿಸಿರುವ ಆತನ ವಿರುದ್ಧ ಕನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಜೇಕಬ್ ಜಾರ್ಜ್ ಎಂಬುವರು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ಸಲ್ಲಿಸಿದ್ದರು.
ಡ್ರೋನ್ ಸಂಶೋಧನೆ ಹೆಸರಿನಲ್ಲಿ ಸಾರ್ವಜನಿಕರನ್ನು ವಿಜ್ಞಾನಿ ಎಂದು ನಂಬಿಸಿ ವಂಚನೆ ಮಾಡಿರುವ ನಕಲಿ ವಿಜ್ಞಾನಿ ಪ್ರತಾಪ್ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಪೊಲೀಸ್ ಮಹಾನಿರ್ದೇಶಕರು ಹಾಗೂ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನ್ಯಾಯವಾದಿ ಕೆ.ವಿ. ಪ್ರವೀಣ್ ಎಂಬುವರೂ ಕೂಡ ದೂರು ದಾಖಲಿಸಿದ್ದರು.

ಎಫ್ಐಆರ್ ದಾಖಲು
ವಂಚನೆ ದೂರುಗಳ ಜೊತೆಗೆ ಹೋಂ ಕ್ವಾರಂಟೇನ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಡ್ರೋನ್ ಪ್ರಾತಾಪ್ ವಿರುದ್ದ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಡಾ. ಪ್ರಯಾಗ್ ಅವರು ತಲಘಟ್ಟಪುರ ಪೊಲೀಸರಿಗೆ ದೂರು ನೀಡಿದ್ದರು.
ಹೋಂ ಕ್ವಾರಂಟೈನ್ ಎಂದು ಕೈಗೆ ಸೀಲು ಹಾಕಿದ್ದರೂ ಹೊರಗೆ ತಿರುಗಾಡಿದ್ದ ಡ್ರೋನ್ ಪ್ರತಾಪ್, ಖಾಸಗಿ ಸುದ್ದಿವಾಹಿನಿಯೊಂದರ ನೇರ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ತಲಘಟ್ಟಪುರದಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರತಾಪ್ನನ್ನು ಹುಡುಕಲು ವಿಶೇಷ ತಂಡ ರಚಿಸಲಾಗಿತ್ತು.

ಪೊಲೀಸ್ ವಶಕ್ಕೆ
ಕೊನೆಗೂ ಮೈಸೂರಿನಲ್ಲಿ ಡ್ರೋನ್ ಪ್ರತಾಪ್ನನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿ, ವಶಕ್ಕೆ ಪಡೆದಿದ್ದಾರೆ. ಪೊಲೀಸರಿಗೆ ಸಿಕ್ಕ ಸಮಯದಲ್ಲಿ ಮೈಸೂರಿನಲ್ಲಿ ಹೋಂ ಕ್ವಾರಂಟೈನ್ ಆಗುವುದಾಗಿ ಪ್ರತಾಪ್ ಮನವಿ ಮಾಡಿಕೊಳ್ಳುತ್ತಿದ್ದ. ಆದರೆ ಅದನ್ನು ಒಪ್ಪದ ಬಿಬಿಎಂಪಿ ಅಧಿಕಾರಿಗಳು ಹಾಗೂ ಬೆಂಗಳೂರು ಪೊಲೀಸರು ಪ್ರತಾಪ್ನನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಬೆಂಗಳೂರಿಗೆ ಕರೆತಂದು ಇಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು ಎಂದು ಬಿಬಿಎಂಪಿ ಹಾಗೂ ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಾಪ್ನನ್ನು ಪತ್ತೆಮಾಡಲು ನಿಯೋಜಿಸಿದ್ದ ಬಿಬಿಎಂಪಿ ಹಾಗು ಪೊಲೀಸ್ ಅಧಿಕಾರಿಗಳ ವಿಶೇಷ ತಂಡ ಅವನನ್ನು ವಶಕ್ಕೆ ಪಡೆದಿದೆ.

ನಿಯಮ ಉಲ್ಲಂಘನೆ
ಇತ್ತಿಚೇಗಷ್ಟೆ ಹೈದರಾಬಾದ್ಗೆ ಹೋಗಿ ತಲಘಟ್ಟಪುರ ಅಂಜನಾಪುರದ ಖಾಸಗಿ ಅಪಾರ್ಟ್ಮೆಂಟ್ಗೆ ಬಂದು ಪ್ರತಾಪ್ ವಾಸವಾಗಿದ್ದ. 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿರದೇ ಸರ್ಕಾರದ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದಿದ್ದ. ಕ್ವಾರಂಟೈನ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್
69,270,271, 188 ಅಡಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಮೈಸೂರಿನ ಸಂಬಂಧಿಕರ ಮನೆಯಲ್ಲಿ ಡ್ರೋನ್ ಪ್ರತಾಪ್ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.












Click it and Unblock the Notifications