ದೊಡ್ಡಬಳ್ಳಾಪುರ: ಕೊಲೆಯಲ್ಲಿ ಅಂತ್ಯವಾದ ತ್ರಿಕೋನ ಪ್ರೇಮಕತೆ
ದೊಡ್ಡಬಳ್ಳಾಪುರ, ಫೆಬ್ರವರಿ 14: ಪ್ರೇಮಿಗಳ ದಿನದ ಹಿಂದಿನ ದಿನ ತ್ರಿಕೋನ ಪ್ರೇಮ ಕತೆಯಲ್ಲಿ ದಾರುಣ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ಕಚ್ಚಿನಹಾಳ ಗ್ರಾಮದಲ್ಲಿ ಹರೀಶ್ ಎಂಬುವನನ್ನು ಸಂತೋಷ್ ಎಂಬಾತ ಚೂರಿಯಿಂದ ಇರುದು ಹತ್ಯೆ ಮಾಡಿದ್ದಾನೆ. ತ್ರಿಕೋನ ಪ್ರೇಮವೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ.
ಮೃತ ಹರೀಶ್ ಮತ್ತು ಕೊಲೆ ಆರೋಪಿ ಸಂತೋಷ್ ಇಬ್ಬರೂ ಕೊಚ್ಚಿನಹಾಳ ಗ್ರಾಮದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು. ಇದೇ ವಿಷಯವಾಗಿ ಹಲವು ಬಾರಿ ಇವರಿಬ್ಬರ ನಡುವೆ ಜಗಳಗಳೂ ನಡೆದಿದ್ದವು. ಮೂರು ದಿನಗಳ ಹಿಂದೆಕೂಡ ಇದೇ ವಿಷಯಕ್ಕೆ ಇಬ್ಬರೂ ಕೈ-ಕೈ ಮಿಲಾಯಿಸಿಕೊಂಡಿದ್ದರು.
ಇಬ್ಬರು ಯುವಕರ ಜಗಳ ನೋಡಿ ರೋಸಿ ಹೋಗಿದ್ದ ಗ್ರಾಮಸ್ಥರು ಫೆಬ್ರವರಿ 14ರಂದು ರಾಜಿ ಪಂಚಾಯಿತಿ ಮಾಡಲು ವ್ಯವಸ್ಥೆ ಮಾಡಿದ್ದರು. ಆದರೆ ಒಳಗೆ ಕುದ್ದು ಹೋಗಿದ್ದ ಸಂತೋಶ್ ಫೆಬ್ರವರಿ 13ರ ರಾತ್ರಿ ಗ್ರಾಮದಲ್ಲಿ ಓಡಾಡುತ್ತಿದ್ದ ಹರೀಶ್ನನ್ನು ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಹರೀಶ್ನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಪ್ರಕರಣದ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.