ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ: ಡಿಕೆ ಶಿವಕುಮಾರ್ ವ್ಯಂಗ್ಯ
ಬೆಂಗಳೂರು, ಜುಲೈ 29: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಎಲ್ಲ ಶಾಸಕರನ್ನೂ ಅನರ್ಹಗೊಳಿಸಿದ ಮರುದಿನವಾದ ಸೋಮವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ. ಸದನದ ಒಟ್ಟು ಬಲಾಬಲದ ಆಧಾರದಲ್ಲಿ ಬಹುಮತಕ್ಕೆ ಕಡಿಮೆ ಸಂಖ್ಯೆಯ ಶಾಸಕರನ್ನು ಹೊಂದಿದ್ದರೂ ಅತೃಪ್ತ ಶಾಸಕರ ಗೈರು ಮತ್ತು ಅನರ್ಹತೆಯ ಲಾಭ ಪಡೆದ ಬಿಜೆಪಿ ಸುಲಭವಾಗಿಯೇ ಬಹುಮತ ಸಾಬೀಪಡಿಸಿಕೊಂಡಿದೆ.
ಈ ಬಗ್ಗೆ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ವ್ಯಂಗ್ಯದ ದಾಟಿಯಲ್ಲಿ ಸಲಹೆ ನೀಡಿದ್ದಾರೆ. ನಿಮ್ಮನ್ನೇ ನಂಬಿರುವ ಆ ಶಾಸಕರ ಕೈಬಿಡಬೇಡಿ ಎಂದಿದ್ದಾರೆ.
ವಿಶ್ವಾಸಮತ ಗೆದ್ದ ಯಡಿಯೂರಪ್ಪ, 6 ತಿಂಗಳು ಸರ್ಕಾರ ಸೇಫ್
'ಯಡಿಯೂರಪ್ಪ ಅವರಿಗೆ ಒಂದು ಸಲಹೆ ಕೊಡಲು ಬಯಸುತ್ತೇನೆ. ನಿಮ್ಮನ್ನು ಸಿಎಂ ಮಾಡಿದ ಅನರ್ಹರನ್ನು ಕೈಬಿಡಬೇಡಿ. ಅವರನ್ನು ತಬ್ಬಲಿಗಳನ್ನಾಗಿ ಮಾಡಬೇಡಿ ಎಂದು ಮನವಿ ಮಾಡುತ್ತೇನೆ' ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 'ಅನರ್ಹಗೊಂಡ ಶಾಸಕರಿಗೆ ಏನೇ ಕೊಡ್ತೀವಿ ಅಂದಿದ್ದೀರೋ ಅವುಗಳನ್ನು ಕೊಡಿ. ಅವರನ್ನು ಮಂತ್ರಿ ಮಾಡ್ತೀರೋ, ಏನು ಮಾಡ್ತೀರೋ ನೋಡಿ. ಅವರಿಗೂ ನಿಮ್ಮ ಜತೆಯೇ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಿ' ಎಂದು ಲೇವಡಿ ಮಾಡಿದರು.
ಅತೃಪ್ತರೆಲ್ಲಾ ಅನರ್ಹ: ಸಿದ್ದರಾಮಯ್ಯಗೆ ಕಾಡಿದ ಹೊಸ ಗುಮಾನಿ
'ವಿಪ್ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದಿದ್ರಿ. ಈಗ ಅನರ್ಹ ಶಾಸಕರ ಕಥೆ ಏನಾಯ್ತು ನೋಡಿ. ವಿಪ್ಗೆ ಕವಡೆ ಕಾಡಿನ ಕಿಮ್ಮತ್ತಿಲ್ಲ ಎನ್ನುವುದನ್ನು ಪ್ರೂವ್ ಮಾಡಿ ಅವರಿಗೆ ಒಳ್ಳೊಳ್ಳೆ ಇಲಾಖೆಗಳನ್ನು ನೀಡಿ. ನಿಮ್ಮನ್ನು ಮುಖ್ಯಮಂತ್ರಿ ಮಾಡಿದ ಶಾಸಕರಿಗೆ ಸದನದಲ್ಲಿ ಕೃತಜ್ಞತೆ ಸಲ್ಲಿಸಿಲ್ಲ. ಈಗಲಾದರೂ ಅವರಿಗೆ ಕೃತಜ್ಞತೆ ಸಲ್ಲಿಸಿ. ಅವರನ್ನು ಮಂತ್ರಿಗಳನ್ನಾಗಿ ಮಾಡಿ ಎಂದು ಅವರ ಪರವಾಗಿ ಕೋರಿಕೊಳ್ಳುತ್ತೇನೆ' ಎಂದು ಹೇಳಿದರು.