ವಿಶೇಷವಾಗಿ ಸಿದ್ಧವಾದ KIA ಟರ್ಮಿನಲ್ 2 ಒಮ್ಮೆ ನೋಡಿ: ಸುಧಾಕರ್
ಬೆಂಗಳೂರು, ಅಕ್ಟೋಬರ್ 19: ಉದ್ಯಾನ ನಗರಿಯ ಬೆಂಗಳೂರಿನ ಅಭಿವೃದ್ಧಿ ಥೀಮ್, ತತ್ವವನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್-2 (T2) ನಿರ್ಮಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್-2 (T2) ಹೇಗಿದೆ ಒಮ್ಮೆ ನೋಡಿ ಎಂದು ವಿಡಿಯೋ ಸಮೇತ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ ಮಾಡಿದ್ದಾರೆ. ಅತ್ಯಾಧುನಿಕ ಹಾಗೂ ಭಾರಿ ಪ್ರಯಾಣಿಕರ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಟರ್ಮಿನಲ್ ಅನ್ನು ನಿರ್ಮಿಸಲಾಗಿದೆ. ಇದು ಉದ್ಯಾನ ನಗರಿಯ ಹಿರಿಮೆ ಎಂದಿದ್ದಾರೆ.
108 ಅಡಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ಭರದ ಸಿದ್ಧತೆ
ಈ ಟರ್ಮಿನಲ್-2ಅನ್ನು ಇದೇ ನವೆಂಬರ್ 11ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ರಾಜ್ಯ ಸರ್ಕಾರವು ಪ್ರಧಾನಮಂತ್ರಿಯವರನ್ನು ಟರ್ಮಿನಲ್ ಉದ್ಘಾಟನೆಗೆ ಆಹ್ವಾನಿಸಿದೆ. ಆದರೆ ಈ ಬಗ್ಗೆ ಪ್ರಧಾನಮಂತ್ರಿ ಕಚೇರಿಯಿಂದ ಯಾವುದೇ ಪ್ರತ್ಯುತ್ತರ ದೊರೆತಿಲ್ಲ ಎನ್ನಲಾಗಿದೆ.
ಟರ್ಮಿನಲ್-2 ಅನ್ನು ಗಾರ್ಡನ್ ಟರ್ಮಿನಲ್ ಎಂದು ಬಿಲ್ ಮಾಡಲಾಗಿದೆ. ಉದ್ಯಾನ ನಗರಿ ಬೆಂಗಳೂರಿನ ಅಭಿವೃದ್ಧಿ ನೀತಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ವಿಶೇಷವಾಗಿ ಟರ್ಮಿನಲ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ವಿನೂನತ ವಿನ್ಯಾಸದ ಟರ್ಮಿನಲ್ -2
ಒಟ್ಟು ಅಂದಾಜು 13,000 ಕೋಟಿ ವೆಚ್ಚದಲ್ಲಿ ಈ ಟರ್ಮಿನಲ್ 2ಅನ್ನು ನಿರ್ಮಿಸಲಾಗಿದೆ. ಇದು ಸರಿಸುಮಾರು 2.5 ಲಕ್ಷ ಚದರ ಮೀಟರ್ಗಳಷ್ಟು ವಿಶಾಲ ಪ್ರದೇಶ ಹೊಂದಿದೆ. ಎರಡು ಹಂತದಲ್ಲಿ ನಿರ್ಮಾಣವಾಗುತ್ತಿರುವ ಈ ಟರ್ಮಿನಲ್ನ ಒಂದನೇ ಹಂತದ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಎರಡನೇ ಹಂತದಲ್ಲಿ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಎರಡನೇ ಹಂತದ ಟರ್ಮಿನಲ್ ಸುಮಾರು 4.41 ಲಕ್ಷ ಚದರ ಮೀಟರ್ ನಷ್ಟು ವಿಶಾಲವಾಗಿದೆ. ಟರ್ಮಿನಲ್ ಆಕರ್ಷಕವಾಗಿ, ವಿನೂತನವಾಗಿ ಕಾಣುವಂತೆ ಮಾಡಲು ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್ಮೋರ್, ಓವಿಂಗ್ಸ್ ಮತ್ತು ಮೆರಿಲ್ ಸಂಸ್ಥೆಗಳು ಶ್ರಮಿಸಿವೆ.
ಬೆಂಗಳೂರಿಗೆ ನ.11ಕ್ಕೆ ಪ್ರಧಾನಿ ಆಗಮನ
ರಾಜ್ಯ ರಾಜಧಾನಿ ಬೆಂಗಳೂರಿಗೆ ನವೆಂಬರ್ 11ರಂದು ಪ್ರಧಾನಿ ನರೆಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಅವರು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರು 108ಅಡಿ ಎತ್ತರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ವಿಮಾನ ನಿಲ್ದಾಣದ ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ಪಾರಂಪರಿಕ ಉದ್ಯಾನ (ಥೀಮ್ ಪಾರ್ಕ್)ವನ್ನು ಸಹ ಅಂದೆ ಪ್ರಧಾನಿಗಳು ಉದ್ಘಾಟನೆ ಮಾಡಲಿದ್ದಾರೆ.
ಈ ಸಂಬಂಧ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅಕ್ಟೋಬರ್ 21ರಿಂದ ನವೆಂಬರ್ 7ರವರೆಗೆ ಮೃತ್ತಿಕಾ ಸಂಗ್ರಹಣಾ ಅಭಿಯಾನ ಆರಂಭವಾಗಲಿದೆ. ಅದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.