ಆರ್ಎಸ್ಎಸ್ ರ್ಯಾಲಿಯಿಂದ ಗಢಗಢ ನಡುಗುತ್ತಿದ್ದೇನೆ: ಡಿಕೆ ಶಿವಕುಮಾರ್
Recommended Video
ಬೆಂಗಳೂರು, ಜನವರಿ 13: ಆರ್ಎಸ್ಎಸ್ ರ್ಯಾಲಿಯನ್ನು ನೋಡಿ ಭಯದಿಂದ ಗಢಗಢ ನಡುಗುತ್ತಿದ್ದೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಂಗಳೂರಿಗೆ ಯಾಕೆ ಬಂದೆ, ಹೇಗೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಕಲ್ಲಡ್ಕ ಪ್ರಭಾಕರ್ ಕನಕಪುರಕ್ಕೆ ಬಂದು ಭಾಷಣ ಮಾಡಿದ್ದಾರೆ. ಅವರು ಯಾರೆಂದು ನನಗೆ ಗೊತ್ತಿಲ್ಲ. ಅವರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಇರಬಹುದು. ನನಗಂತೂ ಗೊತ್ತಿಲ್ಲ ಎಂದು ತಳ್ಳಿಹಾಕಿದ್ದಾರೆ.
ಕನಕಪುರದ ಜನರಿಗೆ ಶಾಸಕ ಡಿ. ಕೆ. ಶಿವಕುಮಾರ್ ಪತ್ರ
ಮಾಗಡಿಯಲ್ಲಿ ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರಕ್ಕೆ ಜಾರ್ಜ್ ಅವರು ಐದು ಎಕರೆ ಜಾಗ ಕೊಟ್ಟಿದ್ದಾರೆ. ಯಾವುದೋ ಕಾರಣಕ್ಕೆ ಅವರು ಕಾಯ್ದಿರಿಸಿಕೊಂಡಿದ್ದ ಜಾಗವನ್ನು ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ.
ಶಿವಕುಮಾರ ಸ್ವಾಮೀಜಿಯವರ ಜನ್ಮಸ್ಥಳದ ಅಭಿವೃದ್ದಿಗೆ 16 ಎಕರೆ ಗೋಮಾಳದ ಭೂಮಿ ಬೇಕು ಎಂದು ಪ್ರಸ್ತಾವನೆ ಬಂದಾಗ ನಾನು ಅದನ್ನು ಬೆಂಬಲಿಸಿದ್ದೇನೆ. ಧರ್ಮದ ಕಾರಣಕ್ಕಾಗಿ ಸುಳ್ಳು ಹೇಳಬೇಡಿ. ರಾಜಕಾರಣ ಮಾಡಬೇಡಿ ಎಂದು ಸಲಹೆ ನೀಡಿದರು.
ರ್ಯಾಲಿಯಿಂದ ನಾನೇನು ಹೆದರಿಲ್ಲ. ಚಳಿಗೆ ಒಳಗೆ ನಡುಗುತ್ತಾ ಕೂತಿದ್ದೆ. ಈಗಷ್ಟೇ ಹೊರಗೆ ಬಂದಿದ್ದೇನೆ. ಅದನ್ನು ಹೆದರಿಕೆ ಎಂದು ಭಾವಿಸುವುದಾದರೆ ಹಾಗೇ ಅಂದುಕೊಳ್ಳಿ ಎಂದರು.
ಕನಕಪುರದಲ್ಲಿ ಇದುವರೆಗೂ ಕೋಮುಗಲಭೆಗಳು ನಡೆದಿಲ್ಲ
ಹಾರೋಬೆಲೆಯ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡುವ ನಿರ್ಧಾರ ಸಚಿವ ಸಂಪುಟ ಸಭೆಯಲ್ಲಿ ತಿಳಿದುಕೊಳ್ಳಲಾಗಿದೆ. ಈವರೆಗೂ ಕನಕಪುರದಲ್ಲಿ ಒಂದೇ ಒಂದೂ ಜಾತಿ ಸಂಘರ್ಷ, ಕೋಮುಗಲಭೆಗಳು ನಡೆದಿಲ್ಲ. ಈಗ ಆರ್ಎಸ್ಎಸ್ನವರು ಬಂದು ರಾಜಕಾರಣ ಮಾಡುತ್ತಿದ್ದಾರೆ. ಯೇಸುಕ್ರಿಸ್ತ ಪ್ರತಿಮೆ ವಿಷಯವನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ನನ್ನದು ಮಾನವ ಧರ್ಮ, ಅದಕ್ಕೆ ಜಯವಾಗಲಿ
ನನ್ನದು ಮಾನವ ಧರ್ಮ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ನನ್ನ ಅಜ್ಜಯ್ಯ ಧೀಕ್ಷೆ ಕೊಟ್ಟಿದ್ದಾರೆ. ಅದರಂತೆ ನಡೆದುಕೊಂಡು ಬರುತ್ತಿದ್ದೇನೆ. ನನಗೆ ಜಾತಿಬೇಧ ಮುಖ್ಯವಲ್ಲ. ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ದಿ ಮುಖ್ಯ. ನನ್ನ ಅಭಿವೃದ್ದಿ ಕೆಲಸಗಳೇನು ಎಂಬುದು ಜನರಿಗೆ ಗೊತ್ತಿದೆ. ಎಲ್ಲಿಂದಲೋ ಬಂದು ಭಾಷಣ ಮಾಡಿ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಯಶಸ್ವಿಯಾಗುವುದಿಲ್ಲ.
ಕನಕಪುರ ಜನತೆಗೆ ಪ್ರಚೋದನೆಗೆ ಒಳಗಾಗಬೇಡಿ ಎಂದು ಮನವಿ
ಕನಕಪುರ ಜನರಿಗೆ ಪ್ರಚೋದನೆಗೆ ಒಳಗಾಗದಂತೆ ಮನವಿ ಮಾಡಿದ್ದೇನೆ. ಬಂದವರು ಎಷ್ಟೇ ಕೂಗಾಡಿಕೊಳ್ಳಲಿ, ಟೀಕೆ ಮಾಡಲಿ ಯಾರೂ ತಿರುಗಿಸಿ ಹೇಳಬೇಡಿ ಎಂದು ಮನವಿ ಮಾಡಿದ್ದೇನೆ ಎಂದರು. ಇಂದಿನ ರ್ಯಾಲಿಗೆ ಕನಕಪುರ, ಚನ್ನಪಟ್ಟಣ, ರಾಮನಗರದಿಂದ ಎಷ್ಟು ಜನರನ್ನು ಕರೆತರಲಾಗಿದೆ,ರ್ಯಾಲಿಗೆ ಏನೆಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ರ್ಯಾಲಿಯ ಬಗ್ಗೆ ತಪ್ಪು ತಿಳಿಯಬೇಡಿ
ರಾಮನಗರದ ಮಾಜಿ ಸಚಿವರೇ ನನಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ರ್ಯಾಲಿಯ ಬಗ್ಗೆ ತಪ್ಪು ತಿಳಿಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ನಾನು ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಅವರು ಇನ್ನು ಶಾಸಕರಾಗಬೇಕು, ಸಚಿವರಾಗಬೇಕು, ನಿಗಮಮಂಡಳಿ ಅಧ್ಯಕ್ಷರಾಗಬೇಕು, ರಾಜಕಾರಣದಲ್ಲಿ ಯಾರು ಯಾವಾಗ ಏನಾಗುತ್ತದೆ ಮತ್ತು ಯಾರು ಯಾವ ಪಕ್ಷದಲ್ಲಿರುತ್ತಾರೆ ಎಂಬುದೂ ಗೊತ್ತಿರುವುದಿಲ್ಲ. ಸಂಜೆಯಾದರೆ ನಮ್ಮ ನೆರಳೇ ನಮ್ಮ ಜೊತೆ ಇರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು.