Bengaluru Rain: ನಾವು ಎದುರಿಸುತ್ತಿರುವ ಸಮಸ್ಯೆಗಳು ಹೊಸದಲ್ಲ: ಮಳೆ ಅವಾಂತರದ ಬಗ್ಗೆ ಡಿಸಿಎಂ ಏನಂದ್ರು?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಇಡೀ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಂದು ಮಳೆಯಾದರೆ ಬದುಕು ಬೀದಿಗೆ ಬರುತ್ತೆ ಎಂದು ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಭರವಸೆಯ ಮಾತುಗಳನ್ನು ಹೇಳಿದ್ದಾರೆ. ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಉಂಟಾದ ಹಾನಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದಿದ್ದಾರೆ.
ನಾನು ಯಾವಾಗಲೂ ಬೆಂಗಳೂರಿಗೆ ಬದ್ಧನಾಗಿರುತ್ತೇನೆ. ಈ ಸವಾಲುಗಳನ್ನು ಎದುರಿಸಲು ಮತ್ತು ಪರಿಹಾರವನ್ನು ಖಚಿತಪಡಿಸಿಕೊಳ್ಳಲು ದಿನದ 24 ಗಂಟೆಗಳೂ ಕೆಲಸ ಮಾಡುತ್ತಿದ್ದೇನೆ. ಬಿಬಿಎಂಪಿ ವಾರ್ ರೂಮ್ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ವಾಸ್ತವಿಕವಾಗಿ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ನಾವು ಸ್ಪಷ್ಟವಾಗಿ ಹೇಳಬೇಕೆಂದರೆ, ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳು ಹೊಸದಲ್ಲ. ಸರ್ಕಾರಗಳು ಮತ್ತು ಆಡಳಿತಗಳಲ್ಲಿ ಅವುಗಳನ್ನು ವರ್ಷಗಳಿಂದ ನಿರ್ಲಕ್ಷಿಸಿವೆ. ಈಗ ಒಂದೇ ವ್ಯತ್ಯಾಸವೆಂದರೆ, ನಾವು ಆ ಸಮಸ್ಯೆಗಳನ್ನು ಪರಿಹರಿಸಲು ತಾತ್ಕಾಲಿಕ ಪರಿಹಾರಗಳೊಂದಿಗೆ ಅಲ್ಲ, ಆದರೆ ದೀರ್ಘಕಾಲೀನ, ಸುಸ್ಥಿರ ಪರಿಹಾರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಬೆಂಗಳೂರಿಗರೇ ನಾನು ನಿಮ್ಮಲ್ಲಿ ಒಬ್ಬ, ನಿಮ್ಮ ಕಾಳಜಿಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಿಮ್ಮ ಹತಾಶೆಯನ್ನು ನಾನು ಹಂಚಿಕೊಳ್ಳುತ್ತೇನೆ ಮತ್ತು ಅವುಗಳನ್ನು ಪರಿಹರಿಸಲು ನನ್ನ ಬದ್ಧತೆಯ ಬಗ್ಗೆ ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರಲ್ಲ, ಬೀಚ್ ಬೆಂಗಳೂರು!
ಬೆಂಗಳೂರು ಮಳೆ ಅವಾಂತರದ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಕನ್ನಡಿಗರಿಗೆ ಬೀಚ್ ಬೆಂಗಳೂರು ನೀಡಿರುವ ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ತಮ್ಮ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹಾಲು ಒಕ್ಕೂಟ ಚುನಾವಣೆ ಉಸಾಬರಿ ಮುಗಿದಿದ್ದರೆ, ದಯವಿಟ್ಟು ಸ್ವಲ್ಪ ಬೆಂಗಳೂರಿನ ಅವಸ್ಥೆ ಕಡೆ ಗಮನ ಹರಿಸಿ ಎಂದು ಹರಿಹಾಯ್ದಿದ್ದಾರೆ.
ಬ್ರ್ಯಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಎಂದು ಪುಂಗಿ ಊದುವ ಡಿಕೆ ಶಿವಕುಮಾರ್ ಅವರ ಕೊತ್ವಾಲ್ ಕಾಲದ ಬೆಂಗಳೂರು ಇಂದು ಅನಾವರಣಗೊಂಡಿದೆ. ಒಂದು ಸಣ್ಣ ಮಳೆಗೆ ರಾಜಧಾನಿಯ ರಸ್ತೆಗಳು ಜಲಾವೃತಗೊಂಡು ಕಾಲುವೆಗಳಂತಾಗಿವೆ. ಮಳೆ ನೀರನ್ನು ಸಮಪರ್ಕವಾಗಿ ಕಾಲುವೆಗೆ ಸೇರಿಸಲು ಕೈಲಾಗದ ಕಾಂಗ್ರೆಸ್ ಸರ್ಕಾರ ಇದೇ ನಮ್ಮ 2 ವರ್ಷದ ಸಾಧನೆ ಎಂದು ನಾಚಿಕೆ ಬಿಟ್ಟು ಸಮಾವೇಶ ಮಾಡುತ್ತಿದೆ ಎಂದು ಬಿಜೆಪಿ ಕೂಡ ವಾಗ್ದಾಳಿ ನಡೆಸಿದೆ.
ನೀರಿನ ಜಲಾಶಯಕ್ಕಾಗಿ ಟನಲ್ ನಿರ್ಮಾಣ
ಒಂದೇ ಮಳೆಗೆ ನೀರು ನಿಂತ ರಸ್ತೆಗಳನ್ನು ಅಥವಾ ಬಿದ್ದ ಮರಗಳನ್ನು ತೆರವುಗೊಳಿಸಲು ಅವರಿಗೆ ಸಾಧ್ಯವಾಗುವುದಿಲ್ಲ, ಆದರೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಪರಿಹರಿಸಲು 48,000 ಕೋಟಿ ವೆಚ್ಚದ ಟನಲ್ಗಳನ್ನು ಅಗೆಯಲು ಅವರು ಬಯಸುತ್ತಾರೆಯೇ? ಬಹುಶಃ ಸುರಂಗದ ನಿಜವಾದ ಉದ್ದೇಶ ನೀರಿನ ಜಲಾಶಯವಾಗಿ ಕಾರ್ಯನಿರ್ವಹಿಸುವುದು ಆಗಿರಬಹುದು ಎಂದು ಬಿಜೆಪಿ ಸಂಸದ ಪಿಸಿ ಮೋಹನ್ ವ್ಯಂಗ್ಯವಾಡಿದ್ದಾರೆ.












Click it and Unblock the Notifications