ಸತೀಶ್ ಜಾರಕಿಹೊಳಿ ಸಾಹುಕಾರರು, ನಾವು ಪ್ರಜೆಗಳು: ಡಿಕೆ ಶಿವಕುಮಾರ್
ಬೆಂಗಳೂರು, ಏಪ್ರಿಲ್ 29: ಸತೀಶ್ ಜಾರಕಿಹೊಳಿ ಅವರು ಸಾಹುಕಾರರು, ನಾಯಕರು ನಾವೆಲ್ಲ ಕೇವಲ ಪ್ರಜೆಗಳಷ್ಟೆ ಎಂದು ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯವಾಗಿ ಸಚಿವ ಸತೀಶ್ ಜಾರಕಿಹೊಳಿ ಕಾಲೆಳೆದಿದ್ದಾರೆ.
ಕುಂದಗೋಳ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದಕ್ಕೆ ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ 'ಉತ್ತರ ಕರ್ನಾಟಕಕ್ಕೆ ನಾವಿದ್ದೇವೆ' ಎಂದಿದ್ದರು, ಸತೀಶ್ ಅವರ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಕುಂದಗೋಳ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿರುವುದು ಸತೀಶ್ ಜಾರಕಿಹೊಳಿ ಅವರ ಕಣ್ಣು ಕೆಂಪಗಾಗಿಸಿದೆ, ಉತ್ತರ ಕರ್ನಾಟಕದ ನಾಯಕರನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕೆಲವು ನಾಯಕರು ಅಪಸ್ವರ ಎತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷ ನನ್ನನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ ಅದಕ್ಕೆ ನಾನು ಬದ್ಧವಾಗಿ ಕಾರ್ಯ ನಿರ್ವಹಿಸುತ್ತೇನೆ, ಪಕ್ಷ ಬೇಡವೆಂದರೆ ಹೋಗುವುದಿಲ್ಲ ಎಂದು ಹೇಳಿದರು.
ಬಳ್ಳಾರಿಯಲ್ಲೂ ದೊಡ್ಡ ದೊಡ್ಡ ನಾಯಕರಿದ್ದರು. ಮೈಸೂರು, ಗುಂಡ್ಲುಪೇಟೆ ಸೇರಿ ಹಲವು ಉಪಚುನಾವಣೆಯಲ್ಲಿ ಕೆಲಸ ಮಾಡಿ ಅಂದಿದ್ರು. ಹೋಗಿ ಅಂದ್ರೆ ಹೋಗುತ್ತೇನೆ, ಬೇಡ ಅಂದ್ರೆ ಹೋಗೋದಿಲ್ಲ. ಪಕ್ಷ ಹೇಳಿದ ಮೇಲೆ ನಾನು ಕೇಳಲೇಬೇಕಾಗುತ್ತದೆ ಎಂದರು.
ನ್ಯಾಯಾಲಯದಲ್ಲಿ ಪ್ರಕರಣ ಇದ್ದ ಕಾರಣ ಇಂದು ಕುಂದಗೋಳಕ್ಕೆ ಹೋಗಲು ಸಾಧ್ಯವಾಗಲಿಲ್ಲ, ನಾಳೆ ಕುಂದಗೋಳ ಕ್ಷೇತ್ರಕ್ಕೆ ಹೋಗುತ್ತೇನೆ ಎಂದರು, ದಿವಂಗತ ಸಿ.ಎಸ್.ಶಿವಳ್ಳಿ ಅವರ ಬಗ್ಗೆ ಮಾತನಾಡಿದ ಅವರು, ಶಿವಳ್ಳಿ ಹಾಗೂ ನನ್ನ ಬಾಂದವ್ಯದ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದದ್ದೇ ನಾನು ಎಂದರು.












Click it and Unblock the Notifications