ಬೆಂಗಳೂರು ಗಲಭೆ: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೇಲೆ ಡಿಕೆಶಿ ಗರಂ!
ಬೆಂಗಳೂರು, ಅ. 16: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ಪಕ್ಷದ ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮೇಲೆ ಕಿಡಿಕಾರಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪಗಳು ಈ ಹಿಂದೆಯೆ ಬಂದಿದ್ದವು.
ಬೆಂಗಳೂರು ಗಲಭೆ ಎಂದು ಕುಖ್ಯಾತಿ ಪಡೆದ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಅವರ ನಿವಾಸದ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಸ್ಥಳೀಯ ನಾಯಕ ಸಂಪತ್ ರಾಜ್ ಅವರ ಮೇಲೆ ಆರೋಪ ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಅಖಂಡ ಶ್ರೀನಿವಾಸ ಮೂರ್ತಿ ಆಗ್ರಹಿಸಿದ್ದರು.
ಆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮೇಲೆಯೇ ಗರಂ ಆಗಿದ್ದಾರೆ. ಅದಕ್ಕೆ ಕಾರಣವಾದರೂ ಏನು? ಮುಂದಿದೆ.

ಬಿಜೆಪಿಯವರ ಎದುರು ಹೇಳೋದಲ್ಲ
ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಮಾಧ್ಯಮಗಳ ಎದುರು, ಬಿಜೆಪಿ ಪಕ್ಷದವರ ಎದುರು ಮಾತನಾಡುವುದಲ್ಲ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ನೋವಿದ್ದರೆ ನನ್ನ ಬಳಿ ಬಂದು ಮಾತನಾಡಲಿ, ಮಾಧ್ಯಮದ ಎದುರು ಮಾತನಾಡುವುದು ಶಿಸ್ತಲ್ಲ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಅವರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ನಾನು ಜಾತಿ ರಾಜಕಾರಣ ಮಾಡಲ್ಲ
ಇದೇ ಸಂದರ್ಭದಲ್ಲಿ ಆರ್ ಆರ್ ನಗರ ಉಪ ಚುನಾವಣೆಗೆ ಸಂಬಂಧಿಸಿದಂತೆ ಡಿಕೆಶಿ ಮಾತನಾಡಿದ್ದಾರೆ. ನಾನು ಒಂದು ಜಾತಿಗೆ ಸೀಮಿತವಾಗಿ ಅದರ ಮೇಲೆ ರಾಜಕೀಯ ಮಾಡುವುದಿಲ್ಲ. ನನ್ನ ತಂದೆ ತಾಯಿ ಒಕ್ಕಲಿಗರು. ನಾನು ಮೂಲತಃ ಕೃಷಿಕ ಹೀಗಾಗಿ ನಾನು ಒಕ್ಕಲಿಗ. ಶಾಲೆಯಲ್ಲಿ ಅರ್ಜಿ ನೀಡುವಾಗ ಒಕ್ಕಲಿಗ ಎಂದು ಕೊಟ್ಟಿದ್ದೇನೆ. ಆದರೆ ಜಾತಿ ಮೇಲೆ ರಾಜಕೀಯ ಮಾಡಲ್ಲ. ನಮಗೆ ಪಕ್ಷವೇ ಜಾತಿ ಎಂದಿದ್ದಾರೆ.

ನಂದು ಕಾಂಗ್ರೆಸ್ ಜಾತಿ
ಆದರೆ ನಾನೊಬ್ಬ ಕಾಂಗ್ರೆಸ್ ಪಕ್ಷದ ಅಧ್ಯಕ್ಷ. ಹೀಗಾಗಿ ನನ್ನ ಜಾತಿ ಅದು ಕಾಂಗ್ರೆಸ್ ಜಾತಿ. ಜಾತಿ ವಿಚಾರದಲ್ಲಿ ಮಾತನಾಡೋದಕ್ಕೆ ನಾನು ಹಿಂದೆಯೂ ಹೋಗಿಲ್ಲ ಮುಂದೆಯೂ ಇಷ್ಟವಿಲ್ಲ. ನಮಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಮುಖ್ಯ. ಅದಕ್ಕಾಗಿ ನಾವು ಬಿಜೆಪಿಯವರ ಮತವನ್ನೂ ಸೆಳೆಯುತ್ತೇವೆ, ಜೆಡಿಎಸ್ ಪಕ್ಷದ ಮತಗಳನ್ನೂ ಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ ಎಂದು ಹೇಳಿಕೆ ಕೊಟ್ಟಿದ್ದಾರೆ.
Recommended Video

ಕುಮಾರಸ್ವಾಮಿ ನನ್ನ ಹೆಸರು ಹೇಳಿಲ್ಲ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಅವರು ನನ್ನ ಬಗ್ಗೆ ಯಾಕೆ ಟೀಕೆ ಮಾಡುತ್ತಾರೆ? ಸುಮ್ಮನೆ ಇಲ್ಲಸಲ್ಲದು ಹೇಳಬೇಡಿ. ಅವರ ಪಕ್ಷ ಅವರದು, ನಮ್ಮ ಪಕ್ಷ ನಮ್ಮದು. ಅವರು ತಮ್ಮ ಕರ್ತವ್ಯ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೊಡುವ ಸಲಹೆಯನ್ನು ನಾನು ಸ್ವೀಕಾರ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications