ರಾಹುಲ್ ಗಾಂಧಿ ಅನರ್ಹ ಸದಸ್ಯತ್ವ ಆದೇಶ ಶೀಘ್ರವೇ ತೆರವುಗೊಳಿಸಿ: ಡಿಕೆಶಿ
ಬೆಂಗಳೂರು, ಆಗಸ್ಟ್ 04: ಅನ್ಯಾಯ ಆದಾಗ ನ್ಯಾಯ ಕೊಡಿಸಲು ನ್ಯಾಯಾಂಗದ ಶಕ್ತಿ ಪೀಠ ಇದೆ ಎಂಬುದಕ್ಕೆ ಸುಪ್ರೀಂ ಕೋರ್ಟಿನ ಇಂದಿನ ತೀರ್ಪು ಸಾಕ್ಷಿ ಆಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಎಷ್ಟು ಬೇಗ ಅನರ್ಹವಾಗಿತ್ತೋ ಅಷ್ಟೇ ಬೇಗ ಆ ಆದೇಶ ತೆರವಾಗಬೇಕು ಎಂದು ರಾಜ್ಯ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದರು.
ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಈ ಮೂಲಕ ರಾಹುಲ್ ಗಾಂಧಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಬಿಜೆಪಿಗೆ ಮುಖಭಂಗವಾಗಿದೆ. ಈ ಕುರಿತು ಡಿಸಿಎ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದರು.

ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿ ಅವರ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ. ದೇಶ ಹಾಗೂ ಜನರ ಹಿತಕ್ಕಾಗಿ ರಾಹುಲ್ ಗಾಂಧಿ ಅವರು ಎತ್ತುತ್ತಿರುವ ಧ್ವನಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೊರ್ಟ್ ತೀರ್ಪು ಮಹತ್ವದ್ದಾಗಿದೆ ಎಂದರು.
ನ್ಯಾಯಾಲಯದ ಆದೇಶ ಬಂದ 24 ತಾಸುಗಳಲ್ಲಿ ಅವರ ಸದಸ್ಯತ್ವವನ್ನು ಹೇಗೆ ವಜಾಗೊಳಿಸಲಾಗಿತ್ತು. ಇದೀಗ ಅದೇ ರೀತಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಬೇಕು. ಇಲ್ಲದಿದ್ದರೆ ಸ್ಪೀಕರ್ ಅವರೂ ಸಮಸ್ಯೆಗೆ ಸಿಲುಕುತ್ತಾರೆ ಎಂದು ಅವರು ಎಚ್ಚರಿಸಿದರು.
ದ್ವೇಷದ ರಾಜಕಾರಣಕ್ಕೆ ಜಾಗವಿಲ್ಲ
ನ್ಯಾಯ ನೀಡುವ ಪೀಠದಿಂದ ಅನ್ಯಾಯ ಆಗುವುದಿಲ್ಲ ಎಂಬ ಮಾತನ್ನು ನಾನು ಹಿಂದೆಯೇ ಹೇಳಿದ್ದೆ. ಈ ದೇಶದ ಅತ್ಯುನ್ನತ ನ್ಯಾಯಾಲಯದ ತೀರ್ಮಾನ ಪ್ರಜಾಪ್ರಭುತ್ವದಲ್ಲಿ ದ್ವೇಷದ ರಾಜಕಾರಣಕ್ಕೆ ಜಾಗವಿಲ್ಲ ಎಂಬ ಸಂದೇಶ ಸಾರಿದೆ.

ಈ ವಿಚಾರವನ್ನು ಲೋಕಸಭೆ ಚುನಾವಣೆ ವಿಷಯವಾಗಿ ಬಳಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ ಅವರು, ಈಗಾಗಲೇ ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ 7 ಲಕ್ಷ ಮತಗಳ ಅಂತರದಲ್ಲಿ ಗೆದ್ದಂತಹವರ ಸದಸ್ಯತ್ವವನ್ನು ಯಾವ ರೀತಿ ಕುತಂತ್ರದ ಮೂಲಕ ಅನರ್ಹ ಮಾಡಿಸಿದ್ದಾರೆ ಎಂದು ಜನ ಹಾಗೂ ಇಡೀ ವಿಶ್ವವೇ ಗಮನಿಸಿದೆ ಎಂದು ಅವರು ಹೇಳಿದರು.












Click it and Unblock the Notifications