ಎಸಿಬಿ ರದ್ದುಪಡಿಸಲು ಎಎಪಿಯಿಂದ ಕೇಶಮುಂಡನ, ಮುಷ್ಕರ
ಬೆಂಗಳೂರು, ಮಾರ್ಚ್ 30: ಕರ್ನಾಟಕ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನೇ ನಾಶ ಮಾಡಿ ಜನದ್ರೋಹ ಎಸಗಿದೆ.ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ರದ್ದು ಪಡಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ಬುಧವಾರದಿಂದ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದೆ.[ಎಸಿಬಿ ಬಗ್ಗೆ ಗೊಂದಲದ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ]
ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆಯ ಬಳಿ 'ತಲೆ ಬೋಳಿಸಿಕೊಂಡು', ಶೋಕಾಚರಣೆ ಮಾಡುತ್ತ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.[ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮತ್ತಷ್ಟು ಅಧಿಕಾರಿಗಳ ನೇಮಕ]
ರಾಜ್ಯದಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. ಈ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ ಮಾಹಾಜನತೆಯ ನ್ಯಾಯಪರತೆ ಹಾಗೂ ಭ್ರಷ್ಟಾಚಾರ ವಿರೋಧಿ ನಿಲುವಿನ ಮೇಲೆ ವಿಶ್ವಾಸವಿಟ್ಟು ರಾಜ್ಯದ ಭ್ರಷ್ಟ ಸರ್ಕಾರದ ಜನವಿರೋಧಿ ಆದೇಶದ ವಿರುದ್ಧ ಹೋರಾಟಕ್ಕೆ ಧುಮುಕುತ್ತಿದೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮುಖಂಡರಾದ ರವಿಕೃಷ್ಣಾ ರೆಡ್ಡಿ, ಮೋಹನ್ ದಾಸರಿ, ವಿಜಯ್ ಕುಮಾರ್ ಶರ್ಮ ಸೇರಿದಂತೆ 6 ಹೋರಾಟಗಾರರು ಇಂದಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು.

ರವಿಕೃಷ್ಣಾ ರೆಡ್ಡಿ ಒಳಗೊಂಡಂತೆ 5 ಜನ ತಮ್ಮ ಕೇಶಮುಂಡನೆ ಮಾಡಿಸಿ, ಆ ಕೂದಲನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿ, ಕೂದಲನ್ನು ಮಾರಿ ಹಣ ಮಾಡಿಕೊಳ್ಳಿ, ಆದರೆ ಲೋಕಾಯುಕ್ತವನ್ನು ನಮಗೆ ಉಳಿಸಿ ಕೊಡಿ ಎಂದು ವಿನಂತಿಸಿಕೊಂಡರು.[ಭ್ರಷ್ಟಾಚಾರ ನಿಗ್ರಹ ದಳದ ಯಾವ ಕಚೇರಿ ಎಲ್ಲಿರುತ್ತದೆ?]
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್ ದೊರೆಸ್ವಾಮಿಯವರೂ ಕೂಡ ಸ್ಥಳದಲ್ಲಿಯೇ ಮುಖಕ್ಷೌರ ಮಾಡಿಸಿಕೊಂಡು, ಆಮ್ ಆದ್ಮಿ ಪಕ್ಷದ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ರಾಜ್ಯಕ್ಕೆ ಈ ಪರಿಸ್ಥಿತಿ ಬರಬಾರದಿತ್ತು, ಆದರೆ ಈ ಪರಿಸ್ಥಿತಿಗೆ ಮುಖ್ಯಮಂತ್ರಿಗಳೇ ನೇರವಾಗಿ ಕಾರಣರಾಗಿದ್ದಾರೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು,
ಲೋಕಾಯುಕ್ತ ಸಂಸ್ಥೆಗೆ ತನ್ನ ಘನತೆ ಎಂಬುದಿದೆ, ಅದನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಉಳಸಬೇಕೇ ಹೊರತು, ಅದನ್ನು ಕಳೆಯಬಾರದು. ಸಿದ್ಧರಾಮಯ್ಯ ಈಗಲೂ ಮಣಿಯದಿದ್ದರೆ, ಈ ಹೋರಾಟವನ್ನು ಇನ್ನಷ್ಟು ಉಗ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಮ್ ಆದ್ಮಿ ಪಕ್ಷದಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ
ಆಮ್ ಆದ್ಮಿ ಪಕ್ಷದ ರಾಜ್ಯ ನಾಯಕರಾದ ರವಿಕೃಷ್ಣಾ ರೆಡ್ಡಿ ಮಾತನಾಡಿ, ಸಿದ್ಧರಾಮಯ್ಯನವರ ಮುಖ್ಯಮಂತ್ರಿ ಸ್ಥಾನ, ಲೋಕಾಯುಕ್ತ ಸಂಸ್ಥೆಯ ಬಿಕ್ಷೆ. ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದು, ಅಂದಿನ ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗ್ಡೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ರಾಜ್ಯದ ಮುಂದಿಟ್ಟಿದ್ದು ಲೋಕಾಯುಕ್ತ ಸಂಸ್ಥೆ. ಸಿದ್ಧರಾಮಯ್ಯನವರು ತಿಂದ ಮನೆಗೆ ಕನ್ನ ಬಗೆಯಿತ್ತಿದ್ದಾರೆ. ಇದನ್ನು ಈಗಲೇ ನಿಲ್ಲಿಸಬೇಕು, ತಮ್ಮಲ್ಲಿ ಇನ್ನು ಸಮಾಜವಾದಿತನ ಬದುಕಿದೆಯ? ಎಂಬುದನ್ನು ನಿರೂಪಿಸಬೇಕು ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಮುಂದೆ ನಮ್ಮ ಬೇಡಿಕೆಗಳು: ಈ ಕೂಡಲೇ ACB ಯನ್ನು ರದ್ದು ಪಡಿಸಿ, ಲೋಕಾಯುಕ್ತದ ಪೊಲೀಸ್ ಅಂಗದ ಸ್ವಾಯತ್ತತೆಯನ್ನು ಮರುಸ್ಥಾಪಿಸಬೇಕು.
* ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದ ಹಾಗೂ ಜನರು ವಿಶ್ವಾವಿಡಬಹುದಾದ ವ್ಯಕ್ತಿಯನ್ನು ಈ ಕೂಡಲೇ ಲೋಕಾಯುಕ್ತರನ್ನಾಗಿ ನೇಮಿಸಬೇಕು.
* ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ಕೊಟ್ಟಿದ್ದಂತೆ ಲೋಕಾಯುಕ್ತ ಪರಮಾಧಿಕಾರವನ್ನು, ಸ್ವಯಂಪ್ರೇರಿತವಾಗಿ ಸರ್ಕಾರದಲ್ಲಿರುವ ಯಾರ ಮೇಲೇ ಆಗಲಿ ದೂರು ದಾಖಲಿಸಿಕೊಳ್ಳುವ ಅಧಿಕಾರ ನೀಡಬೇಕು.
* ಲೋಕಾಯುಕ್ತದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನೂ ಈ ಕೂಡಲೇ ತುಂಬಬೇಕು.
ರಾಜ್ಯದ ಜನತೆಯ ಮುಂದೆ ಇಂದು ಒಂದು ಗಂಭೀರವಾದ ಸವಾಲು ಮತ್ತು ಅದನ್ನು ಎದುರಿಸುವ ಆಹ್ವಾನ ಇದೆ. ಜನತೆ ಇದನ್ನು ಈಗ ಸ್ವೀಕರಿಸಲೇ ಬೇಕಿದೆ.
ಆಮ್ ಆದ್ಮಿ ಪಕ್ಷ ರಾಜ್ಯದ ಮಹಾ ಜನತೆಯ ಮೇಲೆ ನ್ಯಾಯಪರತೆ ಮತ್ತು ಭ್ರಷ್ಟಾಚಾರ ವಿರೋಧಿ ನಿಲುವಿನ ವಿಶ್ವಾಸವಿಟ್ಟು ಈ ಹೋರಾಟಕ್ಕೆ ಧುಮುಕುತ್ತಿದ್ದು, ಆಮ್ ಆದ್ಮಿ ಪಕ್ಷದ ಈ ಹೋರಾಟ ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣವಾಗಿ ಬಲಗೊಳಿಸುವವರೆಗೂ ನಿಲ್ಲದು, ನಾಳೆಯಿಂದ ಈ ಹೋರಾಟ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮುಂದುವರೆಯಲಿದ್ದು, ಇದನ್ನು ಸಂಪೂರ್ಣವಾಗಿ ಬೆಂಬಲಿಸಲು ಮತ್ತೊಮ್ಮೆ ಕಳಕಳಿಯ ಮನವಿ ಮಾಡುತ್ತಿದೆ.












Click it and Unblock the Notifications