ಬಸ್ ನಿಲ್ಸ್ರಪ್ಪಾ, ನೆಲಮಂಗಲದಲ್ಲಿ ಸರಕಾರೀ ಬಸ್ ಸಿಬ್ಬಂದಿಗಳಿಗೆ ಪಾದಪೂಜೆ
ಬೆಂಗಳೂರು, ಮಾರ್ಚ್ 4: ಯಾವುದೇ ಗೌಜಿಗದ್ದಲ, ಪ್ರತಿಭಟನೆ, ಹಿಂಸಾಚಾರವಿಲ್ಲದೇ, ಹೀಗೂ ಪ್ರತಿಭಟನೆ ನಡೆಸಬಹುದು ಎನ್ನುವುದನ್ನು ನೆಲಮಂಗಲದ ಸ್ಥಳೀಯರು ತೋರಿಸಿಕೊಟ್ಟಿದ್ದಾರೆ.
ನೆಲಮಂಗದಲ್ಲಿ KSRTC ವಾಹನ ನಿಲ್ಲಿಸದೇ ಇರುವುದಕ್ಕೆ ಸ್ಥಳೀಯರು ಭಾನುವಾರ (ಮಾ 4) ಹೊಸ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಲವು ಬಾರಿ ರಾಜ್ಯ ರಸ್ತೆಸಾರಿಗೆ ಸಂಸ್ಥೆಗಳ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಬೆಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ ಬರುವ KSRTC ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಾಗದೇ, ಫ್ಲೈಓವರ್ ಮೇಲೆಯೇ ಹೋಗುತ್ತಿದ್ದವು.
ನೆಲಮಂಗಲ-ಬೆಂಗಳೂರಿಗೆ ಜೀವನಾಡಿಯಾಗಿರುವ ಸಾರಿಗೆ ಸಂಸ್ಥೆಗಳ ಈ ನಡೆಯಿಂದ ಸ್ಥಳೀಯರು ತೀವ್ರ ತೊಂದರೆ ಪಡುವಂತಾಗಿತ್ತು. ಹಾಗಾಗಿ, ಫ್ಲೈಓವರ್ ಮೇಲೆ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ತೆರಳಿದ ಪ್ರತಿಭಟನಾಕಾರರು, ಎಲ್ಲಾ ಕರ್ನಾಟಕ ಸಾರಿಗೆ ಬಸ್ಸುಗಳನ್ನು ನಿಲ್ಲಿಸಿ ಮನವಿ ಮಾಡಿದರು.
ಪ್ರತೀ ಬಸ್ಸಿನ ಡ್ರೈವರು, ಕಂಡಕ್ಟರುಗಳಿಗೆ ಹಾರಹಾಕಿ, ಸಿಹಿತಿನ್ನಿಸಿ, ಪಾದಕ್ಕೆ ನಮಸ್ಕರಿಸಿ, ಸರ್ವಿಸ್ ರಸ್ತೆಯ ಮೂಲಕ ಬನ್ನಿ ಎಂದು ಸ್ಥಳೀಯರು ಮನವಿ ಮಾಡಿದರು. ಪ್ರತಿಭಟನಾಕಾರರಲ್ಲಿ ಕೆಲವರು ಹಿರಿಯರೂ ಪಾದಕ್ಕೆ ನಮಸ್ಕರಿಸಿದ್ದರಿಂದ ಡ್ರೈವರು ಮತ್ತು ಕಂಡಕ್ಟರುಗಳು ತೀವ್ರ ಮುಜುಗರಕ್ಕೀಡಾದರು.
ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳಿಗೆ ನಿಮ್ಮ ಮನವಿಯನ್ನು ತಿಳಿಸುತ್ತೇವೆ ಎಂದು ಕೆಲವು ಬಸ್ ಡ್ರೈವರುಗಳು ಹೇಳಿದರೆ, ಮತ್ತಷ್ಟು ಸಾರಿಗೆ ಸಂಸ್ಥೆ ಸಿಬ್ಬಂದಿಗಳು, ಇನ್ನು ಮುಂದೆ ಸರ್ವಿಸ್ ರಸ್ತೆಯ ಮೂಲಕವೇ ಬರುವುದಾಗಿ ಭರವಸೆ ನೀಡಿದರು.
ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಕರ್ನಾಟಕ ಸಾರಿಗೆ ಬಸ್ಸುಗಳು ಸರ್ವಿಸ್ ರಸ್ತೆಯ ಮೂಲಕವೇ ಬಂದು ಬೈಪಾಸಿಗೆ ಹೋಗಬೇಕು, ಆದರೂ ಈ ಬಸ್ಸುಗಳು ಫ್ಲೈಓವರ್ ಮೂಲಕವೇ ಹೋಗುತ್ತಿವೆ. ನಾವು ಬೆಂಗಳೂರು ಅಪ್ & ಡೌನಿಗೆ ಈ ಬಸ್ಸುಗಳನ್ನೇ ಅವಲಂಬಿಸಿದ್ದೇವೆ ಎನ್ನುವುದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಕಾರರ ಈ ವಿಶಿಷ್ಟ ರೀತಿಯ ಪ್ರತಿಭಟನೆಯಿಂದಾಗಿ, ಮುಂದಿನ ದಿನಗಳಲ್ಲಿ ಕರ್ನಾಟಕ ಸಾರಿಗೆ ಬಸ್ಸುಗಳು ಸರ್ವಿಸ್ ರಸ್ತೆಯ ಮೂಲಕವೇ ಹಾದುಹೋಗುವ ಸಾಧ್ಯತೆಯಿದೆ.