ಹೆಲೆನ್ ಅಬ್ಬರ: ಬೆಂಗಳೂರಲ್ಲಿ ಇನ್ನೂ 2 ದಿನ ಮಳೆ
ಬೆಂಗಳೂರು, ನ.24: ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ 'ಹೆಲೆನ್' ಚಂಡಮಾರುತದಿಂದ ಬೆಂಗಳೂರಿಗೆ ಅಷ್ಟೇನು ತೊಂದರೆಯಾಗುವುದಿಲ್ಲ ಎಂದು ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ ಹಾಗೂ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ಹೆಲೆನ್ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ. ನಿರೀಕ್ಷೆಗೂ ಮೀರಿದ ಆರ್ಭಟದಿಂದ ಉದ್ಯಾನ ನಗರಿಯನ್ನು ಆವರಿಸಿಕೊಂಡು ಜನರು ತತ್ತರಿಸುವಂತೆ ಮಾಡಿದ್ದಾಳೆ. ಇನ್ನೂ ಎರಡು ದಿನ ಸಂಜೆ ವೇಳೆ ಹೆಲೆನ್ ವಿಕೋಪಕ್ಕೆ ತುತ್ತಾಗಬೇಕಾಗಿರುವುದು ಅನಿವಾರ್ಯ.
ಬೆಂಗಳೂರು ಅಷ್ಟೇ ಅಲ್ಲದೆ, ರಾಜ್ಯಾದ್ಯಂತ ಗುಡುಗು ಸಹಿತ ಮಳೆ ನಿರೀಕ್ಷೆಯಿದೆ. ರಾಯಚೂರು, ಗುಲ್ಬರ್ಗ, ಬಳ್ಳಾರಿಯಲ್ಲೂ ಸಾಧಾರಣ ಮಳೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಪುಟ್ಟಣ್ಣ ಹೇಳಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ತಂಪು ಹವೆ ಮುಂದುವರೆಯಲಿದ್ದು, ಸಂಜೆ ವೇಳೆಗೆ ಭಾರಿ ಮಳೆ ಬೀಳಲಿದೆ. ಎರಡು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಮೋಡ ತುಂಬಿದ ವಾತಾವರಣವಿರಲಿದ್ದು ಸಂಜೆ ಹಾಗೂ ರಾತ್ರಿ ಮಳೆ ತನ್ನ ಅಬ್ಬರ ತೋರಿಸಲಿದೆ ಎಂದು ಬಿ. ಪುಟ್ಟಣ್ಣ ಹೇಳಿದ್ದಾರೆ.

ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆ ಸೃಷ್ಟಿಸಿದ ಅವಾಂತರವನ್ನು ಸರಿಪಡಿಸಲು ಬಿಬಿಎಂಪಿ ಸಜ್ಜಾಗಿರಲಿಲ್ಲ ಎಂಬುದು ಸಾಬೀತಾಗಿದೆ. ನಗರದಲ್ಲಿ ನಾಲ್ಕು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ದಾಖಲೆಯ ಭಾರಿ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಏಳು ಗಂಟೆಗೆ ಆರಂಭವಾದ ಮಳೆ ಕಚೇರಿ ಹಾಗೂ ಇತರೆ ಕೆಲಸದ ನಿಮಿತ್ತ ಮನೆಗೆ ತೆರಳುತ್ತಿದ್ದ ಜನರಿಗೆ ಸಾಕಷ್ಟು ತೊಂದರೆ ನೀಡಿತು.
ಭಾರಿ ಮಳೆಯಿಂದ ರಸ್ತೆಗಳಲ್ಲೇ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ರಸ್ತೆಯಲ್ಲಿ ನಿಂತಿದ್ದ ನೀರಿನಿಂದ ನಾಲ್ಕಾರು ಗಂಟೆ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಬಿಬಿಎಂಪಿ ಸಿಬ್ಬಂದಿ ನೀರು ತೆರವಿಗೆ ಪ್ರಯತ್ನಪಟ್ಟರಾದರೂ, ರಸ್ತೆಗಳು ಹದಗೆಟ್ಟಿದ್ದು, ಶೋಲ್ಡರ್ ಡ್ರೈನ್ಗಳಲ್ಲಿ ಮಣ್ಣು ತುಂಬಿದ್ದರಿಂದ ನೀರು ಸರಾಗವಾಗಿ ಹರಿಯಲಿಲ್ಲ. ಹೀಗಾಗಿ, ಮಧ್ಯರಾತ್ರಿ ಕಳೆದರೂ ಮಳೆ ನಿಂತು ಗಂಟೆ ಕಳೆದರೂ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ಮಳಿಗೆಗಳಿಗೆ ನೀರು: ಹೊರವರ್ತುಲ ರಸ್ತೆಯ ಕಾಮಾಕ್ಷಿ ಚಿತ್ರಮಂದಿರದ ಬಳಿ 15 ಮಳಿಗೆಗಳಿಗೆ ನೀರು ನುಗ್ಗಿತ್ತಲ್ಲದೆ, ಕತ್ತರಿಗುಪ್ಪೆಯ ಬಿಗ್ಬಜಾರ್ ಸಮೀಪ ಮರವೊಂದು ಧರೆಗುರುಳಿದೆ. ಶೇಷಾದ್ರಿಪುರದ ರೇಲ್ವೆ ಸೇತುವೆ ಕೆಳಗೆ, ಕೆ.ಆರ್. ವೃತ್ತದ ಸುರಂಗ ಮಾರ್ಗ, ಕಾವೇರಿ ಜಂಕ್ಷನ್ನ ಮ್ಯಾಜಿಕ್ ಬಾಕ್ಸ್ಗಳಲ್ಲಿ ನೀರು ನಿಂತು ವಾಹನಗಳು ಸಿಲುಕಿಕೊಂಡಿದ್ದು, ರಸ್ತೆಗಳು ನೀರುಮಯವಾಗಿದ್ದರಿಂದ ವಾಹನ ಸಂಚಾರಬದಲಿಸಿದರು.












Click it and Unblock the Notifications