ಬೆಂಗಳೂರು: 40 ದಿನದಲ್ಲಿ 350 ಮರಣ, ಸಾವಿನ ವಿಶ್ಲೇಷಣೆಗೆ ಹೊರಟ ಬಿಬಿಎಂಪಿ
ಬೆಂಗಳೂರು, ಫೆ 14: ಕೊರೊನಾ ಮೂರನೇ ಅಲೆ ಮತ್ತು ಓಮಿಕ್ರಾನ್ ಹಾವಳಿಯಿಂದ ನಿಧಾನವಾಗಿ ಎಲ್ಲವೂ ಸರಿದಾರಿಗೆ ಬರುತ್ತಿದೆ. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಜನ ಭಾಗವಹಿಸುವುದರಲ್ಲಿ ನಿಯಂತ್ರಣ ಹೊರತಾಗಿ ಇದ್ದ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಲಾಗಿದೆ.
ಜನವರಿ ಮಧ್ಯಭಾಗದಿಂದ ಫೆಬ್ರವರಿ ಮೊದಲ ವಾರದ ವರೆಗೆ ಮನೆಮನೆಯಲ್ಲೂ ಶೀತ, ಜ್ವರದ ರೀತಿಯ ಫ್ಲೂ ಕಾಯಿಲೆ ಕಾಣಿಸಿಕೊಂಡಿತ್ತು. ಈಗ ಅದೂ ಕಮ್ಮಿಯಾಗಿದ್ದು, ಕ್ಲಿನಿಕ್ ಮುಂದೆ ಜನರ ಸಂಖ್ಯೆಯೂ ಇಳಿಯುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಹೊಸ ಸೋಂಕಿತರ ಸಂಖ್ಯೆ ತೀವ್ರವಾಗಿ ಇಳಿಮುಖವಾಗುತ್ತಿದೆ, ಆದರೆ, ಸಾವಿನ ಪ್ರಮಾಣದಲ್ಲಿ ನಿರೀಕ್ಷಿತ ಮಟ್ಟದ ಬದಲಾವಣೆ ಕಾಣಿಸದೇ ಇರುವುದು ಗಂಭೀರ ವಿಚಾರವಾಗಿದೆ.
ಜನವರಿ ಒಂದರಿಂದ ಫೆಬ್ರವರಿ ಹತ್ತರ ವರೆಗೆ ರಾಜಧಾನಿಯಲ್ಲಿ ಸುಮಾರು 350 ಸಾವು ಸಂಭವಿಸಿದೆ. ಈ ಸಾವುಗಳಿಗೆ ಕಾರಣ ಏನು ಎನ್ನುವ ವಿಶ್ಲೇಷಣೆಗೆ ಬಿಬಿಎಂಪಿ ಮುಂದಾಗಿದೆ. ಜನವರಿ ಆದಿಯಲ್ಲಿ ಒಂದೇ ಸಮನೆ ಸೋಂಕಿತರ ಸಂಖ್ಯೆ ಏರಿಕೆಯಾಗಿ, ಅದೇ ವೇಗದಲ್ಲಿ ಕಮ್ಮಿಯಾಗಿದ್ದವು.

ಹೊಸ ಸೋಂಕಿತರ ಪ್ರಮಾಣ ಮೂವತ್ತು ಸಾವಿರಕ್ಕೆ ಏರಿತ್ತು
ಜನವರಿ ಮೊದಲ ವಾರದಲ್ಲಿ ನಾಲ್ಕು ಸಾವಿರ ಆಸುಪಾಸಿನಲ್ಲಿ ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದರೆ, ಸಾವಿನ ಸಂಖ್ಯೆ ಐದರ ಆಸುಪಾಸಿನಲ್ಲಿ ಇತ್ತು. ಜನವರಿ ಮಧ್ಯ ಭಾಗದಲ್ಲಿ ಹೊಸ ಸೋಂಕಿತರ ಪ್ರಮಾಣ ಮೂವತ್ತು ಸಾವಿರಕ್ಕೆ ಏರಿತ್ತು, ಆದರೂ ಸಾವಿನ ಪ್ರಮಾಣ ಹತ್ತರ ಕೆಳಗೆ ಇದ್ದವು. ಜನವರಿ ಅಂತ್ಯದ ವೇಳೆಗೆ ಹೊಸ ಕೇಸುಗಳ ಸಂಖ್ಯೆ ಹನ್ನೊಂದು ಸಾವಿರದ ಆಸುಪಾಸಿಗೆ ಇಳಿದಿದ್ದವು, ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣಲಾರಂಭಿಸಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಫೆಬ್ರವರಿ ಮೊದಲ ವಾರದಲ್ಲಿ ಆರು ಸಾವಿರಕ್ಕೆ ಇಳಿದಿದ್ದ ಹೊಸ ಕೇಸುಗಳಿದ್ದರೂ, ದೈನಂದಿನ ಸಾವಿನ ಸಂಖ್ಯೆ ಇಪ್ಪತ್ತರ ಆಸುಪಾಸಿಗೆ ಏರಿಕೆಯಾಗಲು ಆರಂಭವಾಯಿತು. ರಾಜ್ಯದಲ್ಲಿ ಸಾವಿನ ಸರಾಸರಿ ಪ್ರಮಾಣ ಶೇ. 1.18ರಷ್ಟಿದೆ. ಓಮಿಕ್ರಾನ್ ಆಗಲಿ ಮೂರನೇ ಅಲೆಯಾಗಲಿ ಮಾರಣಾಂತಿಕವಲ್ಲ ಎನ್ನುವ ತಜ್ಞರ ಖಚಿತ ವರದಿ/ಅಧ್ಯಯನದ ನಂತರವೂ ಬೆಂಗಳೂರಿನಲ್ಲಿ ಕಳೆದ ನಲವತ್ತು ದಿನಗಳಲ್ಲಿ 350 ಸಾವು ಸಂಭವಿಸಿರುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಿದ್ದೆಗೆಡಿಸಿದೆ.

ಪಾಲಿಕೆಯ ವಿಶೇಷ ಆಯುಕ್ತರಾದ ಡಾ. ಕೆ.ವಿ.ತ್ರಿಲೋಕ ಚಂದ್ರ
"ಬಿಬಿಎಂಪಿ ವ್ಯಾಪ್ತಿಯಲ್ಲಿ ದೊಡ್ದ ಮಟ್ಟದಲ್ಲಿ ಕೊರೊನಾ ಹಾವಳಿಯಿಲ್ಲ, ಆದರೂ ಮೂರನೇ ಅಲೆಯಲ್ಲಿ ಮೃತಪಟ್ಟವರಿಗೆ ಬೇರೆ ಏನಾದರೂ ಸಮಸ್ಯೆಗಳಿದ್ದವೆಯೇ, ಬೆಡ್, ಆಕ್ಸಿಜನ್ ಸಮಸ್ಯೆ ಎದುರಾಗಿತ್ತಾ ಮುಂತಾದ ವಿಶ್ಲೇಷಣೆಯನ್ನು ಮಾಡಲು ಸೂಚಿಸಲಾಗಿದೆ. ಈ ಸಂಬಂಧ ವರದಿ ಸದ್ಯದಲ್ಲೇ ನಮ್ಮ ಕೈಸೇರಲಿದೆ"ಎಂದು ಪಾಲಿಕೆಯ ವಿಶೇಷ ಆರೋಗ್ಯ ಇಲಾಖೆಯ ಆಯುಕ್ತರಾದ ಡಾ. ಕೆ.ವಿ.ತ್ರಿಲೋಕ ಚಂದ್ರ ಹೇಳಿದ್ದಾರೆ.

ಹಳೆಯ ಪ್ರಕರಣವನ್ನು ಈಗ ಕೊರೊನಾಗೆ ಕಟ್ಟಲಾಗುತ್ತಿದೆಯಾ
ಕೋವಿಡ್ ಮೂರನೇ ಅಲೆಯ ಪ್ರಭಾವ ಅಷ್ಟಾಗಿ ಇಲ್ಲ ಎನ್ನುವ ತಜ್ಞರ ಮಾಹಿತಿಯಿದ್ದರೂ, ಸುಮಾರು 350 ಸಾವಿನ ಪ್ರಮಾಣದ ಬಗ್ಗೆ ಬಿಬಿಎಂಪಿ ವಿಶ್ಲೇಷಣೆ ನಡೆಸಲಿದೆ. ಕೋವಿಡ್ ಸಂಬಂಧವಿಲ್ಲದ ಸಾವನ್ನೂ ಈ ಅಂಕಿಅಂಶದಲ್ಲಿ ತೋರಿಸಲಾಗುತ್ತಿದೆಯಾ, ಅಥವಾ, ಹಳೆಯ ಪ್ರಕರಣವನ್ನು ಈಗ ಕೊರೊನಾಗೆ ಕಟ್ಟಲಾಗುತ್ತಿದೆಯಾ ಎನ್ನುವುದರ ಬಗ್ಗೆಯೂ ವಿಶ್ಲೇಷಣೆ ನಡೆಯಲಿದೆ. ಈ ಅಧ್ಯಯನದಲ್ಲಿ ಎರಡೂ ಡೋಸ್ ಪಡೆದವರೂ ಸಾವನ್ನಪ್ಪಿದಾರಾ ಎನ್ನುವ ಅಂಶವೂ ಹೊರಬರಲಿದೆ ಎನ್ನುವ ಮಾಹಿತಿಯಿದೆ.











Click it and Unblock the Notifications