ಸದನದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಾಹರದ ಬಗ್ಗೆ ಕಾವೇರಿದ ಚರ್ಚೆ
ಬೆಂಗಳೂರು, ಜುಲೈ 12: ನಿನ್ನೆ ಬಿಜೆಪಿ ಶಾಸಕ ರಾಮದಾಸ್ ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್ ಅವ್ಯವಹಾರದ ಚರ್ಚೆ ಇಂದೂ ಸಹಿತ ಜೋರಾಗಿ ಮುಂದುವರೆಯಿತು.
ನಿನ್ನೆ ಸದನದಲ್ಲಿ ಮಾತನಾಡಿದ್ದ ಶಾಸಕ ರಾಮದಾಸ್ ಇಂದಿರಾ ಕ್ಯಾಂಟೀನ್ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ ಸದನದ ಬಾವಿಗಿಳಿದು ಕೆಲ ಕಾಲ ಪ್ರತಿಭಟನೆಯನ್ನೂ ಮಾಡಿದ್ದರು.
ರಾಮದಾಸ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅವರು, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಚರ್ಚೆ ಮಾಡುವಂತೆ ಮನವಿ ಮಾಡಿದ್ದರು.
ಇಂದೂ ಸಹ ಇದೇ ವಿಷಯ ಮುಂದುವರೆಯಿತು, ಆಗ ಎಚ್ಚರಿಕೆ ನೀಡಿದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ಸದನದಲ್ಲಿ ಆರೋಪ ಮಾಡುವಾಗ ಹಿಟ್ ಆಂಡ್ ರನ್ ಕೇಸ್ ಮಾಡಬಾರದು, ನಿಯಮಾವಳಿಗಳ ಪ್ರಕಾರ ದಾಖಲೆ ಸಲ್ಲಿಸಿ ನೊಟೀಸ್ ನೀಡಿ ಆರೋಪ ಮಾಡಬೇಕು ಎಂದರು.
ರಾಮದಾಸ್ ಮಾತಿಗೆ ಧನಿ ಕೂಡಿಸಿದ ಶಾಸಕ ಬಿಟಿ ರವಿ ಸಹ, ಇಂದಿರಾ ಹೆಸರು ಹೇಳುತ್ತಿದ್ದಂತೆ ಕಾಂಗ್ರೆಸ್ಗೆ ನಡುಕ ಬರುತ್ತದೆ, ಇಂದಿರಾ ಕ್ಯಾಂಟೀನ್ ಇರುವುದು ಬಡವರ ಒಳಿತಿಗೋ ಅಥವಾ ಕಾಂಗ್ರೆಸ್ನ ಉಳಿವಿಗೋ ಎಂದು ಛೇಡಿಸಿದರು.