ಬಿಎಂಟಿಸಿಯಲ್ಲಿ ಭ್ರಷ್ಟಾಚಾರ: 10ಮಂದಿ ಅಮಾನತು, ಇಬ್ಬರ ವರ್ಗಾವಣೆ
ಬೆಂಗಳೂರು, ಡಿಸೆಂಬರ್ 12: ಫೋನ್ಪೇ, ಗೂಗಲ್ ಪೇ ಮೂಲಕ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 10ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಇಬ್ಬರು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಲಂಚ ಪಡೆದು ಡ್ಯೂಟಿ ನೀಡುತ್ತಿದ್ದ ಅಧಿಕಾರಿಗಳು ಇದೀಗ ಅಮಾನತು ಆಗಿದ್ದಾರೆ. ಚಾಲಕರು ಮತ್ತು ನಿರ್ವಾಹಕರು ಡ್ಯೂಟಿ ಬೇಕಾದರೆ ತಮ್ಮ ಮೇಲಿನ ಅಧಿಕಾರಿಗಳಿಗೆ ಲಂಚ ನೀಡಬೇಕಿತ್ತು. ಈ ಕುರಿತು ಬಿಎಂಟಿಸಿಯ ಸುಮಾರು 90ಕ್ಕೂ ಅಧಿಕ ಅಧಿಕಾರಿಗಳ ವಿರುದ್ಧ ಆರೋಪಗಳ ಕೇಳಿ ಬಂದಿದ್ದವು.
ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಡ್ಯೂಟಿಗೆ ಹೋಗಬೇಕಾದರೆ ವಾರಕ್ಕೆ 200ರೂ. ಇಲ್ಲವೇ 500 ರೂ.ನಂತೆ ಮಾಸಿಕ 2000ರೂ. ನೀಡುತ್ತಿದ್ದರು. ಆ ಹಣವನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಅಧಿಕಾರಿಗಳು ಪಡೆಯುತ್ತಿದ್ದರು. ಈ ಕಾರಣಕ್ಕೆ ಬಿಎಂಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ ಹಾಗೂ ಜಗದೀಶ್ ರನ್ನು ವರ್ಗಾವಣೆ ಮಾಡಲಾಗಿದೆ.

ಜಗದೀಶ್ ಅವರನ್ನು ರಾಮನಗರದ ಕೆಎಸ್ಆರ್ಟಿಸಿ ವಿಭಾಗಕ್ಕೆ ಮತ್ತು ಚಂದ್ರಶೇಖರ್ರನ್ನು ಕೆಎಸ್ಆರ್ಟಿಸಿ ಕಲಬುರಗಿ ವಿಭಾಗಕ್ಕೆ ವರ್ಗಾಯಿಸಲಾಗಿದೆ. ನೌಕರರಿಂದ ಲಂಚ ಪಡೆದ ಹತ್ತು ಮಂದಿಯನ್ನು ಅಮಾನತು ಮಾಡಲಾಗಿದೆ.
ರಾಜರಾಜೇಶ್ವರಿ ನಗರ ಡಿಪೋ ಬಸ್ ಚಾಲಕ ಕಂ ನಿರ್ವಾಹಕರೊಬ್ಬರು ಲಂಚ ನೀಡಿರಲಿಲ್ಲ. ಲಂಚ ನೀಡದಿದ್ದಕ್ಕೆ ಡಿಪೋ ವ್ಯವಸ್ಥಾಪಕ ಮಲ್ಲಿಕಾರ್ಜುನಯ್ಯ ಅವರಿಗೆ ಡ್ಯೂಟಿ ನೀಡಿರಲಿಲ್ಲ. ಇದರಿಂದ ನೊಂದ ಹೊಳೆಬಸಪ್ಪ, ವಿಭಾಗದಲ್ಲಿನ ಲಂಚಾವತಾರದ ಬಗ್ಗೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ನೋಟ್ ಆಧಾರಿಸಿ ಬಿಎಂಟಿಸಿ ನಿರ್ದೇಶಕರು ತನಿಖೆಗೆ ಆದೇಶಿಸಿದ್ದರು. ಬಿಎಂಟಿಸಿ ಭದ್ರತೆ ಮತ್ತು ಜಾಗೃತದಳದ ಮುಖ್ಯಸ್ಥೆ ಜಿ.ರಾಧಿಕಾ ಅವರಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ತನಿಖಾ ಭಾಗವಾಗಿ ಹತ್ತು ಮಂದಿಯನ್ನು ಅಮಾನತು ಮಾಡಲಾಗಿದೆ.
ಫೋನ್ಪೇ ಮೂಲಕ ಹಣ ಪಡೆ ಬಿಎಂಟಿಸಿ ಡಿಪೋ 8ರ ಕಾನ್ಸ್ಟೇಬಲ್ ಕೆ.ರಮೇಶ್, ಡಿಪೋ 8ರ ಮೇಲ್ವಿಚಾರಕ ಮೊಹಮ್ಮದ್ ರಫಿ, ಕಿರಿಯ ಸಹಾಯಕ ಕೆ.ಎಸ್.ಚಂದನ್, ಕಾನ್ಸ್ಟೇಬಲ್ ಇಬ್ರಾಹಿಂ ಜಬೀವುಲ್ಲಾ, ಚಾಲಕ ಹೆಚ್.ಎಂ.ಗೋವರ್ಧನ್, ಅಂಕಿ ಅಂಶ ಸಹಾಯಕ ಕೆ.ಶರವಣ ಅವರನ್ನು ಅಮಾನತು ಮಾಡಲಾಗಿದೆ.












Click it and Unblock the Notifications