ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರದ ಹಣ ಬಳಸಲು ಸೂಚನೆ- ಅಶೋಕ್
ಬೆಂಗಳೂರು, ಮಾರ್ಚ್ 16: ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ಮಾತನಾಡಿದ್ದಾರೆ. ಕರೋನಾ ವೈರಸ್ ತಡೆಯಲು 84 ಕೋಟಿ ರೂಪಾಯಿ ಖರ್ಚು ಮಾಡಲು ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ ಎಂದಿದ್ದಾರೆ.
ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯಲ್ಲಿ ಮೀಸಲಿರುವ 84 ಕೋಟಿ ಖರ್ಚು ಮಾಡಲು ಕಂದಾಯ ಇಲಾಖೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕರೋನಾ ನಿಯಂತ್ರಣಕ್ಕೆ ಬೇಕಾಗುವ ಔಷಧಗಳು, ಸ್ವಚ್ಚತೆ, ಸ್ಯಾನಿಟೇಷನ್, ಉಪಕರಣಗಳ ಖರೀದಿ, ಪೊಲೀಸ್ ಭದ್ರತೆ ಹಾಗೂ ಅಗ್ನಿಶಾಮಕ ಇಲಾಖೆಗೆ ಹಣ ಬಳಕೆ ಮಾಡಲು ಕೇಂದ್ರ ತಿಳಿಸಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ.

ಎಸ್ ಡಿ ಆರ್ ಎಫ್ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಸದ್ಯಕ್ಕೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಎಸ್ ಡಿ ಆರ್ ಎಫ್ ಮೀಸಲು ಹಣದಲ್ಲಿ ಶೇ.25 ರಷ್ಟು ಹಣ ಬಳಸಲು ಕೇಂದ್ರ ಅನುಮತಿ ನೀಡಿದೆ. ಕರೋನಾ ವೈರಸ್ ರಾಷ್ಟ್ರೀಯ ವಿಪತ್ತು ಎಂಬ ಕಾರಣಕ್ಕೆ ಕೇಂದ್ರದ ಹಣ ಬಳಕೆಗೆ ಅನುಮತಿ ಕೊಟ್ಟಿದೆ.
ಇದುವರೆಗೆ ಕೊರೊನಾ ತಡೆಗೆ ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಬೇಕಿತ್ತು. ಆದರೆ, ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಜತೆ ಸಭೆ ನಡೆಸಿ, ಹಣ ಬಳಕೆ ಕುರಿತು ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರ ಹಣ ಖರ್ಚು ಮಾಡಲು ರಾಜ್ಯ ಸರ್ಕಾರಕ್ಕೆ ಅನುಮತಿ ಸಿಕ್ಕಿದೆ.
ಕರ್ನಾಟಕ ರಾಜ್ಯದಲ್ಲಿಯು ಕೊರೊನಾ ಹಬ್ಬುತ್ತಿದೆ. ಕಲಬುರ್ಗಿಯ ವೃದ್ದ ಕೊರೊನಾದಿಂದ ಮೃತಪಟ್ಟಿದ್ದಾರೆ. ಐವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.












Click it and Unblock the Notifications