ಕೊರೊನಾ: "ಕಾರ್ಮಿಕರನ್ನು ನೋಡಿಕೊಳ್ಳುವುದು ಗುತ್ತಿಗೆದಾರರ ಜವಾಬ್ದಾರಿ'
ಬೆಂಗಳೂರು ಮಾರ್ಚ್ 31: ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಮೇಲ್ಪಟ್ಟು ಕೂಲಿ ಕಾರ್ಮಿಕರಿದ್ದಾರೆ. ಗ್ರಾನೈಟ್, ಟೈಲ್ಸ್, ಕಾಂಕ್ರೀಟ್ ಹಾಕುವ ಕಾರ್ಮಿಕರು ಪ್ರತಿನಿತ್ಯ ಹೈವೇಗಳಲ್ಲಿ ಬೆಂಗಳೂರಿಂದ ಗುಳೇ ಹೋಗುತ್ತಿದ್ದಾರೆ. ಹೀಗಾಗಿ ಕೊರೊನಾ ಸೋಂಕು ಹರಡದಂತೆ ಕಠಿಣ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗುತ್ತಿಗೆದಾರರ ಸಭೆ ನಡೆದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಕಾರ್ಮಿಕರು ಶೆಡ್ಗಳನ್ನು ಬಿಟ್ಟು ಹೊರಹೋಗದಂತೆ, ಸಂಪೂರ್ಣ ಖರ್ಚುವೆಚ್ಚ ಅವರೇ ನೋಡಿಕೊಳ್ಳಬೇಕು. ಈಗಾಗಲೇ ಡೆವಲಪರ್ಸ್ಗಳ ಜೊತೆಗೂ ಮಾತನಾಡಿದ್ದೇವೆ. ಅವರೇ ಅವರ ಕಾರ್ಮಿಕರನ್ನು ನೋಡಿಕೊಳ್ಳಬೇಕು. ಹೊರಗೆ ಕಳುಹಿಸಿದರೆ ಸರ್ಕಾರ, ಪಾಲಿಕೆ ನಿಗಾವಹಿಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಟ್ಟಡಕ್ಕೆ ನೀಡಿರುವ ಪರವಾನಗಿ ರದ್ದು ಮಾಡಲಾಗುವುದು ಎಂದರು.

25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ
ಕಾರ್ಮಿಕರು ಟೆಂಪೋಗಳ ಮೂಲಕ ಗುಂಪುಗುಂಪಾಗಿ ಹೋಗುವುದನ್ನು ತಡೆಯಬೇಕಾಗಿದೆ. ಇದಕ್ಕಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಕಾರ್ಮಿಕರ ವಾಹನಗಳನ್ನೂ ನಿನ್ನೆಯೇ ಜಪ್ತಿ ಮಾಡಲಾಗಿದೆ. ಇದಕ್ಕಾಗಿ ಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಲು ಬೆಂಗಳೂರು ಜಿಲ್ಲಾಧಿಕಾರಿಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು..

ಊರಿಗೆ ತೆರಳಲು ಅವಕಾಶ ಕೊಡಬಾರದು
ಸದ್ಯ 34 ಕೋಟಿ ರೂ. ಹಣ ಇದೆ. ಅದರಲ್ಲಿ ಹತ್ತಿರವಿರುವ ಕಲ್ಯಾಣಮಂಟಪಗಳಲ್ಲಿ, ತುಮಕೂರು ವಸ್ತುಪ್ರದರ್ಶನ ಮೈದಾನದಲ್ಲಿ ವಸತಿ, ಊಟ, ವೈದ್ಯಕೀಯ ಸೌಲಭ್ಯ ಕೊಡಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಊರಿಗೆ ತೆರಳಲು ಅವಕಾಶ ಕೊಡಬಾರದು. ಶೆಡ್ ಬಿಟ್ಟು ತೆರಳಲು ಮಾಲೀಕರು ಒತ್ತಾಯ ಮಾಡಿದರೆ ಕೂಡಲೇ ದೂರು ಕೊಡಿ. ಅಂತಹ ಮಾಲೀಕರನ್ನು ಬಂಧಿಸಲಾಗುವುದು. ಅಲ್ಲದೆ ಯಾರೂ ಬಾಡಿಗೆ ಮನೆಯಿಂದ ಹೋಗೋಕೆ ಒತ್ತಾಯ ಮಾಡಬಾರದು ಎಂದು ತಿಳಿಸಿದರು.

ದೇಣಿಗೆ ನೀಡುವಾಗ ಎಚ್ಚರ
ನಗರದಲ್ಲಿ ಹಲವಾರು ಸ್ವಯಂ ಸೇವಾ ಸಂಘ ಸಂಸ್ಥೆಗಳು ಊಟದ ಪೊಟ್ಟಣಗಳನ್ನು ಹಂಚುತ್ತಿದ್ದಾರೆ. ಆ ರೀತಿ ಮಾಡದೆ ಹತ್ತಿರ ಪೊಲೀಸ್ ಠಾಣೆ ಅಥವಾ ಕಂದಾಯ ಅಧಿಕಾರಿ ಕಚೇರಿಗೆ ತೆರಳಿ ಆ ಮೂಲಕ ವಿತರಣೆ ಮಾಡಲು ಕ್ರಮವಹಿಸಲಾಗುದು. ದೇಣಿಗೆಯನ್ನು ಯಾವುದೇ ಖಾಸಗಿ ಖಾತೆಗಳಿಗೆ ಹಾಕಬೇಡಿ. ಮುಖ್ಯಮಂತ್ರಿಗಳ ಹಾಗೂ ಪ್ರಧಾನಮಂತ್ರಿಗಳ ನಿಧಿಗೆ ಮಾತ್ರ ಹಾಕಿ ಎಂದು ತಿಳಿಸಿದರು.

ಒಂದು ವರ್ಷದ ವೇತನ
ಕೊರೋನಾ ವೈರೆಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನನ್ನ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿ ನಿಧಿಗೆ ನೀಡಲಾಗುವುದು. ಹಾಗೂ ಪಾಲಿಕೆ ಎಲ್ಲಾ ಸದಸ್ಯರ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ನಿಧಿಗೆ ನೀಡಲು ಕ್ರಮ ವಹಿಸಲಾಗಿದೆ. ನಗರದಲ್ಲಿ ಪಕ್ಷಿಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಲಾಲ್ಬಾಗ್, ಕಬ್ಬನ್ ಉದ್ಯಾನ ಸೇರಿದಂತೆ ಇನ್ನಿತರ ಉದ್ಯಾನ/ ಪ್ರದೇಶಗಳಲ್ಲಿ ಪಕ್ಷಿಗಳಿಗೆ ದವಸ ಧಾನ್ಯಗಳನ್ನು ವಿತರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications