ಬೆಂಗಳೂರು: ಸುಗಮ ವಾಹನ ಸಂಚಾರಕ್ಕೆ 'ಕನ್ನಡಿ' ತಂತ್ರ
ಬೆಂಗಳೂರು, ಜ. 29: ವಾಹನ ಸಂಚಾರ ಹೆಚ್ಚಿರುವ ನಗರದ ಒಳ ರಸ್ತೆಗಳಲ್ಲಿ, ವೃತ್ತಗಳಲ್ಲಿ ಆಗಾಗ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಇಲ್ಲಿ ಸಿಗ್ನಲ್ ಅಳವಡಿಕೆ ಸಾಧ್ಯವಿಲ್ಲದ ಮಾತು. ಹಾಗಾದರೆ ಅಪಘಾತ ತಡೆಗೆ ಪರಿಹಾರವೇನು? ಉತ್ತರ ಒಂದು ಕನ್ನಡಿ!
ಹೌದು... ಸರ್ಕಲ್ ಗೆ ಸಿಗ್ನಲ್ ಅಳವಡಿಕೆ ಸಾಧ್ಯವಿಲ್ಲದ ಸರ್ಕಲ್ ಗಳಲ್ಲಿನ ಸುಗಮ ವಾಹನ ಸಂಚಾರಕ್ಕೆ ಬನಶಂಕರಿ 2ನೇ ಹಂತದ ಪೊಲೀಸರು ಕನ್ನಡಿ ತಂತ್ರ ಅಳವಡಿಕೆ ಮಾಡಿದ್ದಾರೆ.
ಎನ್. ಆರ್. ಕಾಲೋನಿಯ ಕಟ್ಟೆ ಬಳಗ ವೃತ್ತಕ್ಕೆ ಕನ್ನಡಿಯೊಂದನ್ನು ಅಳವಡಿಸಲಾಗಿದ್ದು ಥೇಟ್ ಸಿಗ್ನಲ್ ನಂತೆ ಕೆಲಸ ಮಾಡುತ್ತಿದೆ. ಅಲ್ಲದೇ ಬನಶಂಕರಿ 2ನೇ ಹಂತದ ಬಿ.ಡಿ.ಎ ಕಾಂಪ್ಲೆಕ್ಸ್ ಬಳಿ ಇದೇ ತೆರನಾದ ಕನ್ನಡಿಯೊಂದನ್ನು ಅಳವಡಿಸಲಾಗಿದೆ. ಹಾಗಾಗಿ ಸಿಗ್ನಲ್ ಇಲ್ಲದೆಯೂ ಸುಗಮ ವಾಹನ ಸಂಚಾರಕ್ಕೆ ಸಾಧ್ಯವಾಗಿದೆ.

ಕನ್ನಡಿಯ ವಿಶೇಷತೆಗಳೇನು?
ಇದು ಪೀನಮಸೂರ(ಕಾನ್ವೆಕ್ಸ್ ಲೆನ್ಸ್). ಎದುರಿಗಿನಿಂದ ಬರುವ ವಾಹನ ಸವಾರರಿಗೆ ಬಲ ಮತ್ತು ಎಡ ರಸ್ತೆಗಳಿಂದ ಬರುತ್ತಿರುವ ವಾಹನಗಳ ಬಿಂಬವನ್ನು ಚಿಕ್ಕದಾಗಿ ಪ್ರತಿಬಿಂಬಿಸುತ್ತದೆ. ಪರಿಣಾಮ ಸವಾರರು ಎಚ್ಚರಿಕೆಯಿಂದ ಸಾಗಲು ಅನುವು ಮಾಡಿಕೊಡುತ್ತದೆ.

ಯೋಜನೆಯ ಹಿಂದಿರುವ ವ್ಯಕ್ತಿ ಯಾರು?
ಬನಶಂಕರಿ 2ನೇ ಹಂತದ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಈ ನೂತನ ತಂತ್ರವನ್ನು ಕಾರ್ಯಗತಗೊಳಿಸಿದ್ದಾರೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಪಾರ್ಟ್ ಮೆಂಟ್ ಗಳ ಪಾರ್ಕಿಂಗ್ ನಲ್ಲಿ ಈ ರಿತಿಯ ಕನ್ನಡಿ ಅಳವಡಿಸಿದ್ದನ್ನು ನೋಡಿದ್ದೆ ಅದನ್ನೇ ಇಲ್ಲಿ ಕಾರ್ಯಗತ ಮಾಡಿದ್ದೇನೆ ಎಂದು ಅನಿಲ್ ಹೇಳುತ್ತಾರೆ.

ಜನ ಏನಂತಾರೆ?
ಈ ಮೊದಲು ವಿದ್ಯಾಪೀಠ ಮತ್ತು ಎನ್.ಆರ್.ಕಾಲೋನಿ ಕಡೆಯಿಂದ ನುಗ್ಗುತ್ತಿದ್ದ ಬೈಕ್ ಸವಾರರ ಉಪಟಳ ಕಡಿಮೆಯಾಗಿದೆ ಎಂಬುದು ಕಟ್ಟೆಬಳಗ ವೃತ್ತದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿರುವ ಗೋಪಾಲ್ ಮಾತು. ಪೊಲೀಸ್ ಇಲಾಖೆ ನಿಜಕ್ಕೂ ಜನಪರ ಕಾಳಜಿಯನ್ನು ಮೆರೆದಿದ್ದು ಅಳವಡಿಸಿರುವ ಕನ್ನಡಿಯ ಗಾತ್ರ ಇನ್ನು ಸ್ವಲ್ಪ ದೊಡ್ಡದಿದ್ದರೆ ಒಳಿತು ಎಂದು ಎನ್.ಆರ್.ಕಾಲೋನಿ ನಿವಾಸಿ ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕನ್ನಡಿ ಎಷ್ಟು ದೊಡ್ಡದಿದೆ?
32 ಇಂಚು ಸುತ್ತಳತೆಯ ಕನ್ನಡಿ ನೆಲದಿಂದ ಸುಮಾರು 6ಅಡಿ ಎತ್ತರದಲ್ಲಿದೆ. ಕನ್ನಡದ ಕವಿಗಳ ಜತೆಯಲ್ಲಿಯೇ ಕನ್ನಡಿ ಸಹ ಪ್ರತಿಷ್ಠಾಪನೆಯಾಗಿದೆ. ನೆಟ್ಟಕಲ್ಲಪ್ಪ ಸರ್ಕಲ್ ಕಡೆಯಿಂದ ಆಗಮಿಸುವ ವಾಹನ ಸವಾರರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಇದು ಫೈಬರ್ ಗಾಜಾಗಿದ್ದು ದುಷ್ಕರ್ಮಿಗಳು ಒಂದು ವೇಳೆ ಕಲ್ಲೇಟು ಹೊಡೆದರೂ ಸಮಸ್ಯೆಯಿಲ್ಲ.

ಐಡಿಯಾ ಹೇಗೆ ಬಂತು?
ಕಟ್ಟೆ ಬಳಗ ವೃತ್ತದ ಮೂಲಕವೇ ಎನ್.ಆರ್.ಕಾಲೋನಿಯಿಂದ ಮೆಜೆಸ್ಟಿಕ್, ಮಾರ್ಕೆಟ್ ಮುಂತಾದ ಕಡೆ ತೆರಳುವ ಬಸ್ ಗಳು ಹಾದು ಹೋಗುತ್ತವೆ. ವೃತ್ತದ ಬಳಿ ರಸ್ತೆ ಇಕ್ಕಟ್ಟಾಗಿದ್ದು ಬಸ್ ಗಳು ಸುಲಭವಾಗಿ ಬಲಕ್ಕೆ ತಿರುಗಲು ಸಾಧ್ಯವಿಲ್ಲ. ಇದನ್ನು ಮನಗಂಡ ಅನಿಲ್ ಬಸವನಗುಡಿ ವಾರ್ಡ್ ಸದಸ್ಯ ಕಟ್ಟೆ ಸತ್ಯನಾರಾಯಣ ಸಹಕಾರದಲ್ಲಿ ನೂತನ ಯೋಜನೆ ಅನುಷ್ಠಾನ ಮಾಡಿದ್ದಾರೆ.

ವೆಚ್ಚ ಎಷ್ಟು?
ಕನ್ನಡಿ ಅಳವಡಿಕೆಗೆ 7ರಿಂದ 8 ಸಾವಿರ ರೂಪಾಯಿ ತಗುಲಿದ್ದು ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯೇ ಮುಂದಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಕಟ್ಟೆಬಳಗಕ್ಕೆ "ಕನ್ನಡಿ ಅಲಂಕಾರ" ಮಾಡಿದೆ.












Click it and Unblock the Notifications