ನಾಲ್ಕನೇ ಅಲೆ ಭೀತಿ ನಡುವೆ ಬೆಂಗಳೂರು ಕೊರೊನಾ ಸಾವಿನಿಂದ ಮುಕ್ತ
ಬೆಂಗಳೂರು, ಏಪ್ರಿಲ್ 20 : ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ ಭೀತಿ ಶುರವಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಸದ್ಯ ಕರ್ನಾಟಕಕ್ಕೂ ಕೊರೊನಾ ನಾಲ್ಕನೇ ಅಲೆ ಆತಂಕ ಎದುರಾಗಿದ್ದು, ಮಂಗಳವಾರ ಕೊರೊನಾ ಕೇಸ್ಗಳಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಅದರಲ್ಲೂ ಬೆಂಗಳೂರಿನಲ್ಲಿ 57 ಕೇಸ್ಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಆದರೆ, ಕಳೆದ 11 ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾದಿಂದ ಯಾವುದೇ ಸಾವು ಸಂಭವಿಸಲ್ಲ. ಎರಡನೇ ಅಲೆ ಕಾಣಿಸಿಕೊಂಡ ನಂತರ ಬೆಂಗಳೂರು ಇಷ್ಟು ದೀರ್ಘ ಕಾಲ ಕೊರೊನಾ ಸಾವಿನಿಂದ ಮುಕ್ತವಾಗಿರುವುದು ಇದೇ ಮೊದಲು. ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 39.4 ಲಕ್ಷ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲೇ 17.8 ಲಕ್ಷ ಜನರು ಸೋಂಕಿಗೆ ಒಳಗಾಗಿರುವುದು ಕಂಡು ಬಂದಿದೆ.
ಪ್ರಸ್ತುತ ರಾಜ್ಯದಲ್ಲಿ 1,487 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಅದರಲ್ಲೂ ಬೆಂಗಳೂರಿನಲ್ಲೇ 1,418 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಇನ್ನು ಕಳೆದ 24 ಗಂಟೆಯಲ್ಲಿ ದೇಶದಲ್ಲಿ 11,860 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳು 0.03% ರಷ್ಟು ಇದ್ದು, 928 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ದೇಶದಲ್ಲಿ ಪಾಸಿಟಿವಿಟಿ ದರ 0.31% ರಷ್ಟು ಏರಿಕೆಯಾಗಿದೆ.

ಆರ್ ಆರ್ ನಗರದಲ್ಲಿ ಕೊರೊನಾ ಪ್ರಕರಣ ಏರಿಕೆ
ಬೆಂಗಳೂರಿನಲ್ಲಿ ಇತ್ತೀಚಿಗೆ ಕೊರೊನಾ ಕೇಸ್ಗಳ ಸಂಖ್ಯೆ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಸೋಮವಾರ ಒಟ್ಟು ಪಾಸಿಟಿವಿಟಿ ದರ (TPR)2.91% ರಷ್ಟು ಏರಿಕೆಯಾಗಿದೆ. ಇನ್ನು ವಿವಿಧ ವಲಯಗಳ ಪೈಕಿ ನೋಡುವುದಾದರೆ ಆರ್ ಆರ್ ನಗರದಲ್ಲಿ ವಾರದ ಪಾಸಿಟಿವಿಟಿ ದರ 6.39% ರಷ್ಟಿದ್ದು, ದೇಶದಲ್ಲಿಯೇ ಅತಿಹೆಚ್ಚು ಪಾಸಿಟಿವಿಟಿ ದರ ಹೊಂದಿರುವ ವಲಯವಾಗಿದೆ. ಇದಾದ ಬಳಿಕ ಬೊಮ್ಮನಹಳ್ಳಿ 3.59% ನಂತರ ಮಹದೇವಪುರ 3.14% ರಷ್ಟು ಪಾಸಿಟಿವಿಟಿ ದರ ಇದೆ. ಆದ್ರೆ ಇಷ್ಟಿದ್ದರೂ ಸಹ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರ ಕಡಿಮೆ ಇದೆ. ಹೀಗಾಗಿ ಹೆಚ್ಚು ಚಿಂತಿಸಬೇಕಾಗಿಲ್ಲ ಅಂತ ತಜ್ಞರು ಹೇಳಿದ್ದಾರೆ.
ಉತ್ತರದ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದು ನಾಲ್ಕನೇ ಅಲೆಯೇ ಎಂಬುದರ ಬಗ್ಗೆ ಇನ್ನು ಕೆಲ ವಾರಗಳು ಕಾದು ನೋಡಬೇಕಾಗುತ್ತದೆ. ಕರ್ನಾಟಕದಲ್ಲಿ ಕೊರೊನಾ ಕೇಸ್ ಇತ್ತೀಚಿಗೆ ಹೆಚ್ಚಳವಾಗುತ್ತಿದೆ. ಆದ್ರೆ ಇದರಿಂದ ಭಯಪಡುವ ಅಗತ್ಯವಿಲ್ಲ. ಯಾಕೆಂದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರ ಕಡಿಮೆ ಇರುವುದರಿಂದ ನಾಲ್ಕನೇ ಅಲೆ ಶುರುವಾಗುತ್ತದೆ ಎಂದು ಆತಂಕ ಪಡುವ ಅಗತ್ಯವಿಲ್ಲ ಅಂತ ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಕೊರೊನಾಗೆ ಈಗಿರುವ ಲಸಿಕೆಯೇ ಮದ್ದು ಅಂತ ಈಗಾಗಲೇ ಆರೋಗ್ಯ ತಜ್ಞರು ಹೇಳಿದ್ದಾರೆ. ಅದರಂತೆ ದೇಶದಲ್ಲೂ ಸಹ ಲಸಿಕೆ ನೀಡಲಾಗುತ್ತಿದೆ. ಈಗ ಎರಡು ಡೋಸ್ ಪಡೆದುಕೊಂಡವರಿಗೆ ಬೂಸ್ಟರ್ಡೋಸ್ ನೀಡಲಾಗುತ್ತಿದೆ. ಆದ್ರೆ ಇತ್ತೀಚಿಗೆ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ನೀಡುವುದನ್ನ ಸಹ ನಿಲ್ಲಿಸಲಾಗಿದೆ. ಈ ಬಗ್ಗೆ ಕೋರಮಂಗಲ ನಿವಾಸಿ ಕಿರಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, "ಇತ್ತೀಚಿಗೆ ಕೊರೊನಾ ಇಳಿಕೆಯಾಗಿರುವುದಕ್ಕೆ ಜನರು ಸಹ ಹೆಚ್ಚಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಆಸ್ಪತ್ರೆ ಬರದೇ ಇರುವುದರಿಂದ ಬೇಡಿಕೆ ಕಡಿಮೆಯಾಗಿದೆ ಅಂತ ಆಸ್ಪತ್ರೆಗಳು ಹೇಳುತ್ತಿವೆ. ಹೀಗಾಗಿ ಬೇಡಿಕೆ ಕಡಿಮೆ ಇರುವ ಕಾರಣ ಕೆಲ ಆಸ್ಪತ್ರೆಗಳು ಬೂಸ್ಟರ್ ಡೋಸ್ ಹಾಕುವುದನ್ನ ನಿಲ್ಲಿಸಿವೆ. ಇನ್ನು ಹೆಚ್ಚಿನ ಆಸ್ಪತ್ರೆಗಳು ನಮ್ಮಲ್ಲಿ ಸ್ಟಾಕ್ ಇಲ್ಲ, ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ನ್ನ ಸಾರ್ವಜನಿಕವಾಗಿ ನೀಡುವುದಿಲ್ಲ ಅಂತ ಎಂದು ಹೇಳುತ್ತಾರೆ," ಎಂದು ಹೇಳಿದ್ದಾರೆ.
ಇನ್ನು ಲಸಿಕೆ ವಿಚಾರವಾಗಿಯೇ ಮಾತನಾಡಿರುವ ಆರೋಗ್ಯ ಸಚಿವ ಕೆ.ಸುಧಾಕರ್, ''ಮುಂಬರುವ ಕೊರೊನಾ ನಾಲ್ಕನೇ ಅಲೆಯನ್ನು ತಡೆಗಟ್ಟಲು ವ್ಯಾಕ್ಸಿನೇಷನ್ ಏಕೈಕ ಮಾರ್ಗ ಅಂತ ತಿಳಿಸಿದ್ದಾರೆ. ಅಲ್ಲದೆ ಕೊರೊನಾ ಸಂಪೂರ್ಣವಾಗಿ ಹೋಗಿಲ್ಲ. ಮಾಸ್ಕ್ ಅತ್ಯಗತ್ಯ ಈಗಲೂ ಇದೆ ಅಂತ ವೈದ್ಯರು ತಿಳಿಸಿದ್ದಾರೆ. ಆದ್ರೆ ನಾಲ್ಕನೇ ಅಲೆಯ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ನಿರ್ಲಕ್ಷ್ಯ ವಹಿಸದೇ ಮಾಸ್ಕ್ ಸಾಮಾಜಿಕ ಅಂತರ ಹಾಗೂ ಲಸಿಕೆಯನ್ನ ಪಡೆದುಕೊಳ್ಳುವುದರಿಂದ ನಾಲ್ಕನೇ ಅಲೆಯಿಂದ ದೂರವಿರಬಹುದು. ಅಲ್ಲದೆ ಸರ್ಕಾರವು 6 ರಿಂದ 12 ವರ್ಷದೊಳಗಿನ 5000 ಮಕ್ಕಳಿಗೆ ಕೊರೊನಾ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಏಕೆಂದರೆ ಈ ಮಕ್ಕಳು ಇನ್ನು ಲಸಿಕೆಗೆ ಅರ್ಹವಾಗದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ನಡೆಸಲಾಗುತ್ತದೆ,'' ಎಂದಿದ್ದಾರೆ.
ಸದ್ಯಕ್ಕೆ ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ ಭೀತಿ ಇರುವುದರಿಂದ ಬೇರೆ ರಾಜ್ಯಗಳಲ್ಲೂ ಕೊರೊನಾ ಪ್ರಕರಣ ಮತ್ತೆ ಏರಿಕೆಯಾಗುತ್ತಿರುವುದರಿಂದ ಕರ್ನಾಟಕದದಲ್ಲೂ ಮತ್ತೆ ಕೊರೊನಾ ನಾಲ್ಕನೇ ಅಲೆ ಆರಂಭವಾಗುವ ಸಾಧ್ಯತೆ ಇರುವುದರಿಂದ ಜನರು ಸಹ ಮಾಸ್ಕ್, ಸಾಮಾಜಿಕ ಅಂತರ ಲಸಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಸರ್ಕಾರ ಕೂಡ ನಾಲ್ಕನೇ ಅಲೆ ಬರದಂತೆ ಕಠಿಣ ಕ್ರಮಗಳಿಗೆ ಮುಂದಾಗಬೇಕಿದೆ.












Click it and Unblock the Notifications