ಎಂಟಿಬಿ ನಾಗರಾಜ್ ಎದೆಯಲ್ಲೀಗ ಸಿದ್ದರಾಮಯ್ಯ ಇಲ್ಲ, ಮತ್ತಿನ್ಯಾರಿದ್ದಾರೆ?
Recommended Video
ಬೆಂಗಳೂರು, ಸೆಪ್ಟೆಂಬರ್ 13: 'ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ' ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜು ಹಿಂದೊಮ್ಮೆ ಹೇಳಿದ್ದರು. ಆದರೆ ಈಗ ತಮ್ಮ ಎದೆಯಲ್ಲಿ ಸಿದ್ದರಾಮಯ್ಯಗೆ ಸ್ಥಾನ ಇಲ್ಲ ಎಂದಿದ್ದಾರೆ.
ಇಂದು ನಗರದ ಪ್ಯಾಲೆಸ್ ರಸ್ತೆಯಲ್ಲಿರುವ ಸುಧಾಕರ್ ನಿವಾಸದಲ್ಲಿ ನಡೆದ ಅನರ್ಹ ಶಾಸಕರ ಸಭೆಗೆ ತಮ್ಮ ಐಶಾರಾಮಿ ರೋಲ್ಸ್ ರಾಯ್ಸ್ ಕಾರಿನಲ್ಲಿ ಆಗಮಿಸಿದ್ದ ಎಂಟಿಬಿ ನಾಗರಾಜು ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
'ಎದೆಯಲ್ಲಿದ್ದ ಸಿದ್ದರಾಮಯ್ಯ ಅವರನ್ನು ತೆಗೆದು ಪಕ್ಕಕ್ಕೆ ಇಟ್ಟಿದ್ದೇನೆ, ಈಗ ಅಲ್ಲಿ ಮತ ನೀಡುವ ಮತದಾರರನ್ನು ಇಟ್ಟುಕೊಂಡಿದ್ದೇನೆ' ಎಂದರು.
ಸುಧಾಕರ್ ನಿವಾಸಕ್ಕೆ ಆಗಮಿಸಿದ ವಿಚಾರದ ಬಗ್ಗೆ ತಮ್ಮ ಎಂದಿನ ಬಿಡುಬೀಸು ಶೈಲಿಯಲ್ಲಿ ಉತ್ತರಿಸಿದ ಎಂಟಿಬಿ, 'ಸುಧಾಕರ್ ಮನೆಗೆ ಬಂದಿದ್ದೀವಿ, ಒಳ್ಳೆಯ ಉಪಾಹಾರ ಹಾಕಿಸಿದ್ದಾರೆ, ಹೊಟ್ಟೆ ತುಂಬಿದ್ದೀವಿ ಉಂಡಿದ್ದೀವಿ, ರಾಜಕೀಯ ಚರ್ಚೆ, ಕ್ಷೇತ್ರದ ಬಗ್ಗೆ ಚರ್ಚೆ ಮಾಡಿದ್ದೀವಿ ಅಷ್ಟೆ' ಎಂದು ಹೇಳಿದರು.

'ತೀರ್ಪು ಬಂದ ಮೇಲೆ ಚುನಾವಣೆ ಸ್ಪರ್ಧಿಸುವ ಬಗ್ಗೆ ತೀರ್ಮಾನ'
ಉಪಚುನಾವಣೆ ನೀವೇ ಸ್ಪರ್ಧಿಸುತ್ತೀರಾ? ಅಥವಾ ಮಗ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಎಂಟಿಬಿ, 'ಅನರ್ಹತೆ ವಿಚಾರಣೆ ನಡೆಯುತ್ತಿದೆ, ನ್ಯಾಯಾಲಯದ ತೀರ್ಪು ಬಂದ ಮೇಲೆ ಉಪಚುನಾವಣೆಗೆ ಯಾರು ಸ್ಪರ್ಧಿಸಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ' ಎಂದರು.

'ಮೊದಲು ರಮೇಶ್ ಕುಮಾರ್ನನ್ನು ಹೊರಗೆ ಹಾಕಬೇಕು'
'ನಮ್ಮನ್ನು ಅನರ್ಹ ಮಾಡಿದ ರಾಜ್ಯ ಕಾಂಗ್ರೆಸ್ನ 'ಮಹಾನುಭಾವರು' ಮೊದಲು ನಮ್ಮ ವಿರುದ್ಧ ತೀರ್ಪು ನೀಡಿದ ರಮೇಶ್ ಕುಮಾರ್ ಅನ್ನು ಪಕ್ಷದಿಂದ ಹೊರಹಾಕಬೇಕು, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸೋಲಲು ಆತನೇ ಕಾರಣ, ಮುನಿಯಪ್ಪ ಅವರು ರಮೇಶ್ ಕುಮಾರ್ ವಿರುದ್ಧ ದೂರು ನೀಡಿದ್ದಾರೆ, ಮೊದಲು ಆತನನ್ನು ಪಕ್ಷದಿಂದ ಹೊರಗೆ ಹಾಕಬೇಕು' ಎಂದು ಏಕವಚನದಲ್ಲಿಯೇ ಮಾತನಾಡಿದರು.

ಮೊದಲಿಗೆ ಸಿದ್ದರಾಮಯ್ಯ ಎದೆಯಲ್ಲಿದ್ದರು, ಈಗಿಲ್ಲ: ಎಂಟಿಬಿ
'ಮೊದಲಿಗೆ ಸಿದ್ದರಾಮಯ್ಯ ಅವರು ಎದೆಯಲ್ಲಿದ್ದರು, ಆದರೆ ಅವರನ್ನು ಪಕ್ಕಕ್ಕೆ ಇಟ್ಟು, ಮತ ನೀಡುವ ಮತದಾರರನ್ನು, ಕ್ಷೇತ್ರದ ಜನರನ್ನು ಎದೆಯಲ್ಲಿ ಇಟ್ಟುಕೊಂಡಿದ್ದೇನೆ' ಎಂದು ಎಂಟಿಬಿ ನಾಗರಾಜು ಹೇಳಿದರು.

ಸಚಿವರಾಗಿದ್ದರೂ ರಾಜೀನಾಮೆ ನೀಡಿದ್ದ ಎಂಟಿಬಿ ನಾಗರಾಜು
ಕಾಂಗ್ರೆಸ್ ಟಿಕೆಟ್ನಿಂದ ಹೊಸಕೋಟೆ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದ ಎಂಟಿಬಿ ನಾಗರಾಜು ಅವರು ಸಚಿವರೂ ಆಗಿದ್ದರು. ಆದರೆ ಆ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಧಿಕಾರಕ್ಕೇರಲು ಸಹಾಯ ಮಾಡಿದ್ದರು. ಹಾಗಾಗಿ ಅವರನ್ನೂ ಸೇರಿದಂತೆ ಹದಿನೇಳು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.












Click it and Unblock the Notifications