ಆತುರಕ್ಕೆ ಬಿದ್ದು ವಿರೋಧಿಗಳ ಎದುರಲ್ಲಿ ಕುಮಾರಣ್ಣ ಜಾರಿ ಬೀಳುವರೇ?
Recommended Video

ಬೆಂಗಳೂರು, ಮೇ 19 : ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಈವರೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ನಡೆದುಕೊಂಡ ರೀತಿ, ಅವರು ಸಾಗುತ್ತಿರುವ ಹಾದಿ ವಿರೋಧಿಗಳ ಎದುರಲ್ಲಿ ಅವರು ಜಾರಿ ಬೀಳುವಂತೆ ಮಾಡಿತೇ? ಹೌದು ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ಶನಿವಾರದ ಸಂಖ್ಯಾ ಬಲದ ಮೇಲಾಟದಲ್ಲಿ ಬಿಜೆಪಿ ಗೆದ್ದರೆ, ಜೆಡಿಎಸ್ ಇತಿಶ್ರೀಗೆ ಇದು ಮುನ್ನುಡಿ ಹಾಡಿದಂತೆ ಅನ್ನುವ ಅಭಿಪ್ರಾಯಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದು, ಈ ಚುನಾವಣೆಯಲ್ಲಿ ಸೋಲನುಭವಿಸಿದ ಸಚಿವರೊಬ್ಬರ ಪ್ರಕಾರ 2019ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾದೇಶಿಕ ಪಕ್ಷಗಳ ಮನಸ್ಸನ್ನು ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಂಡಿತು.

ಗೋವಾ, ಮಣಿಪುರದಲ್ಲಿ ಪಕ್ಷ ಎದುರಿಸಿದ ಟೀಕೆ ಮತ್ತೆ ಎದುರಾಗಬಾರದೆಂಬ ದೃಷ್ಟಿಯಿಂದ ಪಕ್ಷ ಏಕಪಕ್ಷೀಯವಾಗಿ ಜೆಡಿಎಸ್ ಗೆ ಬೆಂಬಲ ಘೋಷಿಸಿತು. ಒಂದೊಮ್ಮೆ ಜೆಡಿಎಸ್ ಸರ್ಕಾರ ರಚಿಸಿದರೆ 2019ರ ಚುನಾವಣೆಯಲ್ಲಿ ಪಕ್ಷಕ್ಕೆ ರಾಜ್ಯದಲ್ಲಿ ಇದರಿಂದ ಹೆಚ್ಚಿನ ಸಹಾಯವಾಗಬಹುದು ಎನ್ನುವ ದೂರಾಲೋಚನೆ ಇನ್ನೊಂದೆಡೆ ಇತ್ತು.
ಅಂತಿಮವಾಗಿ ಕಾಂಗ್ರೆಸ್ ದೆಹಲಿ ನಾಯಕರಿಗೆ ಸಿದ್ದು ಮುಖ್ಯಮಂತ್ರಿಯಾಗುವುದಕ್ಕಿಂತ ತುರ್ತಾಗಿ ಬೇಕಿರುವುದು ರಾಹುಲ್ ಗಾಂಧಿ ಒಮ್ಮೆ ಪ್ರಧಾನಿ ಗಾಧಿಗೇರುವುದು.
ಆದರೆ ಕೇವಲ 37 ಶಾಸಕರಿರುವ ಜೆಡಿಎಸ್ ಕೂಡಲೇ ಸಿಎಂ ಕುರ್ಚಿಗೆ ಟವೆಲ್ ಹಾಕುತ್ತದೆ ಎಂಬ ನಿರೀಕ್ಷೆ ನಮಗಿರಲಿಲ್ಲ. ನಮ್ಮ ಪ್ರಕಾರ ಬುಧವಾರ, ಗುರುವಾರದ ಬಳಿಕ ಎಚ್ಡಿಕೆ ಫೀಲ್ಡ್ ಗಿಳಿಯಬಹುದು ಎಂಬ ಅಂದಾಜಿತ್ತು.
ಆದರೆ ಏಕಾಏಕಿ ಸಿಎಂ ಕುರ್ಚಿಯ ಕನಸು ಹೊತ್ತ ಎಚ್ಡಿಕೆ ಎಲ್ಲಾ ಬಾಣಗಳನ್ನು ಏಕಕಾಲದಲ್ಲಿ ಪ್ರಯೋಗಿಸಿದರು. ಒಟ್ಟಾರೆ ಗೊಂದಲದ ವಾತಾವರಣ ಸೃಷ್ಟಿಸಿದರು ಎನ್ನುವುದು ಇವರ ಅಭಿಪ್ರಾಯ.
ಇನ್ನೊಂದು ಮೂಲಗಳ ಪ್ರಕಾರ ಎಚ್ಡಿಕೆಗಿಂತ ಅವರು ಸಿಎಂ ಆಗುವುದು ಅವರ ಕುಟುಂಬ ಸದಸ್ಯರಿಗೆ ಜರೂರಾಗಿ ಬೇಕಿದೆ. ಎಚ್ಡಿಕೆ ಅವರ ಕುಟುಂಬದಲ್ಲಿ ಬಲಿ ಕಾ ಬಕ್ರಾ. ಯಡ್ಡಿ ಸೋತರೆ ಲಿಂಗಾಯಿತರ ಮುನಿಸು. ಗೆದ್ದರೆ ಅಧೋಗತಿ... ಆತುರಕ್ಕೆ ಬಿದ್ದ ಆಂಜನೇಯನಂತಾಗಿದೆ ಎಚ್ಡಿಕೆ ಸ್ಥಿತಿ ಎನ್ನುವಂತಾಗಿದೆ ಎನ್ನುತ್ತಾರೆ ಹಾಸನ ಮೂಲದ ಕೆಲವು ಕಾಂಗ್ರೆಸ್ ನಾಯಕರು.
ಇನ್ನೊಬ್ಬ ಮಾಜಿ ಶಾಸಕರ ಪ್ರಕಾರ ಎಚ್ಡಿಕೆ ಸಿಎಂ ಆದರೆ ಲಡ್ಡು ಖಂಡಿತಾ ಮೂಲ ಕಾಂಗ್ರೆಸ್ಸಿಗರ ಬಾಯಿಗೆ ಬೀಳಲಿದೆ. ಏಕೆಂದರೆ ಹೆಚ್ಚಿನ ಶಾಸಕ ಸಂಖ್ಯಾ ಬಲದ ಕಾರಣಕ್ಕೆ ಅವರೇ ಅಧಿಕಾರ, ಆಡಳಿತದ ಎಲ್ಲಾ ದಾಳಗಳನ್ನು ಉರುಳಿಸಲಿದ್ದಾರೆ. ಮತ್ತೊಮ್ಮೆ ಸಿಎಂ ಆಗುವ ಎಚ್ಡಿಕೆ ಕನಸು ನನಸಾಗಬಹುದು. ಆದರೆ ಅಂತಿಮವಾಗಿ ಲಾಭವಾಗುವುದು ಕಾಂಗ್ರೆಸ್ ಗೆ ಎನ್ನುತ್ತಾರೆ ಅವರು.











Click it and Unblock the Notifications