ದೊರೆಸ್ವಾಮಿ ಬಗ್ಗೆ ಅವಮಾನಕರ ಹೇಳಿಕೆ: ಯಾತ್ನಾಳ್ ವಿರುದ್ಧ ಪ್ರತಿಭಟನೆ
ಬೆಂಗಳೂರು, ಫೆಬ್ರವರಿ 26: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿ, ದೊರೆಸ್ವಾಮಿ ಅವರನ್ನು 'ಪಾಕ್ ಏಜೆಂಟ್' ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ದೊರೆಸ್ವಾಮಿ ಒಬ್ಬ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಆತ 'ಪಾಕ್ ಏಜೆಂಟ್' ಎಂದು ಬಹು ಹಗುರವಾಗಿ ಮಾತನಾಡಿದ್ದರು. ಇದು ವಿವಾದ ಸೃಷ್ಟಿಸಿತ್ತು.
ಯತ್ನಾಳ್ ವಿರುದ್ಧ ಇಂದು ರಾಜ್ಯ ಕಾಂಗ್ರೆಸ್ ಬೀದಿಗಿಳಿದಿದ್ದು, ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು ಪ್ರತಿಭಟನೆ ನಡೆಸಿದರು.
'ದೇಶದ್ರೋಹಿ ಶಾಸಕ ಯತ್ನಾಳ್ ನ ಶಾಸಕ ಸ್ಥಾನ ರದ್ದು ಪಡಿಸಿ' ಎಂದು ಭಿತ್ತಿಪತ್ರಗಳನ್ನು ಹಿಡಿದು ಕಾಂಗ್ರೆಸ್ ಶಾಸಕರು ಪ್ರತಿಭಟನೆ ಮಾಡಿದರು. ಯತ್ನಾಳ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ರಮೇಶ್ ಕುಮಾರ್, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ಈಶ್ವರ್ ಖಂಡ್ರೆ, ಕೋಳಿವಾಡ, ಉಗ್ರಪ್ಪ, ಸೌಮ್ಯಾ ರೆಡ್ಡಿ ಇನ್ನೂ ಹಲವು ಪ್ರಮುಖರು ಭಾಗವಹಿಸಿದ್ದರು.
ವಿಜಯಪುರದಲ್ಲಿ ಈ ಬಗ್ಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಯಾವುದೇ ಕಾರಣಕ್ಕೂ ಹೇಳಿಕೆ ಹಿಂಪಡೆಯುವುದಿಲ್ಲ ಎಂದರು.
'ದೊರೆಸ್ವಾಮಿ ಕುರಿತ ಹೇಳಿಕೆ ಹಿಂಪಡೆಯುವುದಿಲ್ಲ, ಅವರು ಜೆಡಿಎಸ್-ಕಾಂಗ್ರೆಸ್ ನ ಮುಖವಾಣಿಯಂತೆ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ನನ್ನ ನಿಲವು ಬದಲಾಗುವುದಿಲ್ಲ' ಎಂದು ಹೇಳಿದ್ದಾರೆ.
ಸಚಿವ ವಿ.ಸೋಮಣ್ಣ ಸಹ ದೊರೆಸ್ವಾಮಿ ಅವರ ಬಗ್ಗೆ ಇಂದು ಮಾತನಾಡಿದ್ದು, 'ದೊರೆಸ್ವಾಮಿ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು' ಎಂದಿದ್ದಾರೆ.